ಮಧುಗಿರಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದ ಮುಖ್ಯ ದ್ವಾರದ ಸಮೀಪದಲ್ಲಿ ದೊಡ್ಡ ಗಾತ್ರದ ಮರದ ಕೊಂಬೆ ಅರ್ಧಕ್ಕೆ ಮುರಿದು ನೇತಾಡುತ್ತಿದ್ದರೂ ಸಹ, ಕೊಂಬೆಯನ್ನು ತೆರವುಗೊಳಿಸದೆ ಆಸ್ಪತ್ರೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ನಿರ್ಲಕ್ಷ್ಯವಹಿಸಿರುವ ಘಟನೆ ನಡೆದಿದೆ.
ಕಳೆದ ಭಾನುವಾರದಂದು ದೊಡ್ಡ ಗಾತ್ರದ ಮರದ ಕೊಂಬೆ ಮುರಿದಿದ್ದು, ಜೋತಾಡುವ ಸ್ಥಿತಿಯಲ್ಲಿದೆ. ಆದರೆ ಸೋಮವಾರದವರೆಗೂ ಈ ಮರದ ಕೊಂಬೆಯನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿಲ್ಲ. ಇದು ತಾಲೂಕು ಮಟ್ಟದ ಆಸ್ಪತ್ರೆಯಾಗಿದ್ದು, ನಿತ್ಯ ಸಾರ್ವಜನಿಕರು ಈ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಬಂದು ಹೋಗುತ್ತಾರೆ. ಅಲ್ಲದೇ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗಕ್ಕೆ ಇದೇ ದಾರಿಯಲ್ಲಿ ತೆರಳ ಬೇಕಿದೆ. ಮರದ ಕೊಂಬೆ ಜೋತಾಡುತ್ತಿರುವುದರಿಂದಾಗಿ ಆಂಬುಲೆನ್ಸ್ ಸಂಚಾರಕ್ಕೂ ಸಹ ಅಡೆತಡೆಯಾಗುತ್ತಿದೆ.
ಜೋತಾಡುತ್ತಿರುವ ಮರದ ಕೊಂಬೆಯ ಕೆಳಗೆ ಜನರು ಹೋಗಲು ಭಯಪಡುತ್ತಿದ್ದು, ಎಲ್ಲ ಸಾರ್ವಜನಿಕರ ಮೇಲೆ ಬೀಳಲಿದೆಯೋ ಎನ್ನುವ ಆತಂಕದ ಮಾತುಗಳು ಕೇಳಿ ಬಂದಿವೆ. ಸಾಧ್ಯವಾದಷ್ಟು ಬೇಗನೇ ಮರದ ಕೊಂಬೆ ತೆರವುಗೊಳಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy