ಬಂಧಿಖಾನೆಯಲ್ಲಿರುವ ಆರೋಪಿಗಳನ್ನು ಭೇಟಿಯಾಗಲು ಬರುವ ಸಂಬಂಧಿಕರಿಂದ ಲಂಚ ಪಡೆಯುತ್ತಿದ್ದ ಬಂಧಿಖಾನೆ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ.
ಬಂಧಿಖಾನೆಯಲ್ಲಿರುವ ಆರೋಪಿಗಳನ್ನು ಭೇಟಿಯಾಗಲು ಬಂದ ಸಂಬಂಧಿಕರಿಂದ ಲಂಚ ಪಡೆಯುತ್ತಿದ್ದ ಮಧುಗಿರಿ ಉಪ ಬಂಧಿಖಾನೆ ಅಧೀಕ್ಷಕ ಆರ್. ದೇವೇಂದ್ರ ಕೋಣಿ ಲೋಕಾಯುಕ್ತಾ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದಾರೆ.
ತಂದೆಯನ್ನು ನೋಡಲು ಬಂಧಿಖಾನೆಗೆ ಬರುತ್ತಿದ್ದ ಮಗನಿಂದ ಪ್ರತಿಬಾರಿಯೂ ಲಂಚಕ್ಕಾಗಿ ಬೇಡಿಕೆ ಇರಿಸುತ್ತಿದ್ದನು. ಜೊತೆಗೆ ಹಣ ನೀಡದಿದ್ದರೆ ದೂರದ ಬಂಧಿಖಾನೆಗೆ ಕಳಿಸುವುದಾಗಿ ಹೆದರಿಸಲಾಗುತ್ತಿತ್ತು, ಇದರಿಂದ ಬೇಸತ್ತ ಮಗ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಕಳೆದ ಐದು ದಿನಗಳ ಹಿಂದೆ ಶಿರಾ ಪೊಲೀಸ್ ಠಾಣೆ ಯಿಂದ 307 ಕೇಸ್ ಅಡಿ ಆರೋಪಿಯಾಗಿ ಇಂತಿಯಾಜ್ ಎಂಬುವರು ಜೈಲಿಗೆ ಬಂದಿದ್ದರು. ಇಂತಿಯಾಜ್ ನೋಡಲು ಬರುತ್ತಿದ್ದ ಮಗ ಅರ್ಬಾಜ್ ಎಂಬುವರಿಂದ ಜೈಲ್ ಅಧೀಕ್ಷಕ, ಪ್ರತಿ ಬಾರಿ ಜೈಲಿಗೆ ಬರುವಾಗ ಹಣ ಪಡೆಯುತ್ತಿದ್ದನು. ಇದುವರೆಗೂ 40,000 ಸಾವಿರದವರೆಗೂ ಹಣ ಪಡೆದಿದ್ದ ದೇವೇಂದ್ರ, ಇಂದು ಐದು ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ದಾಳಿ ನಡೆಸಿದ್ದಾರೆ.
ತುಮಕೂರು ಲೋಕಾಯುಕ್ತ ಡಿವೈಎಸ್ ಪಿ ಗಳಾದ ಮಂಜುನಾಥ್ , ಹರೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬಂಧಿಖಾನೆ ಅಧೀಕ್ಷಕ ದೇವೆಂದ್ರ ಆರ್. ಕೋಣಿಯನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ವರದಿ: ಅಬಿದ್ ಮಧುಗಿರಿ