ಧಾರವಾಡ: ಮೇ 7 ರಂದು ಜರುಗಿದ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣೆಯ ಮತ ಏಣಿಕಾ ಕಾರ್ಯಕ್ಕೆ ಧಾರವಾಡ ಜಿಲ್ಲಾಡಳಿತದಿಂದ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 14 ಟೇಬಲ್ ಗಳಂತೆ ಒಟ್ಟು 112 ಟೇಬಲ್ ಗಳನ್ನು ಮತ ಏಣಿಕೆಗೆ ಸಿದ್ದಗೊಳಿಸಲಾಗಿದ್ದು, ಅಂದಾಜು 20 ಸುತ್ತುಗಳಲ್ಲಿ ಮತ ಏಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಮತ ಏಣಿಕೆ ಕಾರ್ಯದ ಸಿದ್ದತೆ ಮತ್ತು ಮತ ಏಣಿಕಾ ಕೇಂದ್ರದ ಕುರಿತು ಮಾಹಿತಿ ನೀಡಿ, ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಭಾರತ ಚುನಾವಣಾ ಆಯೋಗದ ಆದೇಶದಂತೆ ಮೊಬೈಲ್ ಹಾಗೂ ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಡಿವೈಸಿಸ್ ಗಳನ್ನು ತರಲು ಅವಕಾಶವಿಲ್ಲ. ಮತ ಏಣಿಕಾ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು, ಮತ ಏಣಿಕಾ ಏಜಂಟರು, ಚುನಾವಣಾ ಏಜಂಟರು ಹಾಗೂ ಇತರರು ತಮ್ಮ ಮೊಬೈಲ್ ಗಳನ್ನು ಮತ ಏಣಿಕಾ ಕೇಂದ್ರದ ಹೊರಗೆ ಬಿಟ್ಟು ಬರಬೇಕು. ಒಂದು ವೇಳೆ ಮರೆತು ತಂದರೂ, ಅವರಿಗೆ ಪಸ್ಟ್ ಗೇಟ್ ದಲ್ಲಿ ಮೊಬೈಲ್ ಸಂಗ್ರಹ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಇಟ್ಟು ಚೀಟಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಮೊಬೈಲ್ ಹಾಗೂ ಇತರೆ ಡಿವೈಸ್ ಗಳನ್ನು ಮತ ಏಣಿಕಾ ಕೇಂದ್ರಕ್ಕೆ ತರಬಾರದೆಂದು ಅವರು ತಿಳಿಸಿದರು.
ಮತ ಏಣಿಕಾ ಕೇಂದ್ರದ ಸುತ್ತೂಲು 200 ಮೀಟರ್ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆಯಿಂದ ನಿಷೆಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಏಣಿಕೆ ಕೇಂದ್ರದಲ್ಲಿ ಮತ್ತು ಸೂತ್ತಲು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಚುನಾವಣಾ ವೇಳಾಪಟ್ಟಿ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 12ರಂದು ಅಧಿಸೂಚನೆ ಪ್ರಕಟವಾಗಿದ್ದು, ಏಪ್ರಿಲ್ 19 ರಿಂದ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಏಪ್ರಿಲ್ 20 ರಂದು ನಾಮಪತ್ರ ಪರಿಶೀಲನೆ, ಏಪ್ರಿಲ್ 22 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಮೇ 7 ರಂದು ಮತದಾನ ಜರಗಿದ್ದು, ಜೂನ್ 4 ರಂದು ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಜೂನ್ 6 ಕ್ಕೆ ಪ್ರಸುತ್ತ ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಅವಧಿ ಮುಕ್ತಾಯ ಗೊಳ್ಳುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ನಿಷೇಧಾಜ್ಞೆ: ಜೂನ್ 4 ರಂದು ಮತ ಏಣಿಕೆ ಕಾರ್ಯ ನಡೆಯುವುದರಿಂದ ಜೂನ್ 3, 2024 ರ ಸಂಜೆ 6 ಗಂಟೆಯಿಂದ ಜೂನ್ 5, 2024 ರ ರಾತ್ರಿ 10 ಗಂಟೆಯವರೆಗೆ ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಆರ್.ಪಿ.ಸಿ. 1973 ಕಲಂ 144 ರಡಿ ನಿಷೇದಾಜ್ಞೆ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮಗಳಿಗೆ ಪ್ರತ್ಯೇಕ ಕೇಂದ್ರ: ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮಗಳಿಗೆ ವಿಶೇಷವಾಗಿ ಪ್ರತ್ಯೇಕ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಮತ ಎಣಿಕೆ ಕಾರ್ಯ ಮುಕ್ತಾಯಗೊಂಡ ನಂತರ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಇವಿಎಂ ಮತ್ತು ಮತ ಪತ್ರ (Election Papers) ಗಳನ್ನು ಮುದ್ರೆ (ಸೀಲ್) ಮಾಡುವ ಕಾರ್ಯ ಕೈಗೊಳ್ಳಲಾಗುವುದು.
ಮುದ್ರೆ ಹಾಕಲಾದ ಇವಿಎಂ ಗಳನ್ನು ಧಾರವಾಡದ ಮಿನಿ ವಿಧಾನಸೌಧದ ಆವರಣದಲ್ಲಿರುವ ಇ.ವಿ.ಎಂ. ವೇರ್ ಹೌಸ್ ಅನ್ನು ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ತೆರೆದು ವಿಧಾನಸಭಾ ಮತಕ್ಷೇತ್ರವಾರು ಭದ್ರಪಡಿಸಲಾಗುವುದು. ಮತ್ತು ಮುದ್ರೆ ಹಾಕಲಾದ ಮತ ಪತ್ರ (Election Papers )ಗಳನ್ನು ಧಾರವಾಡದ ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿ ಭದ್ರಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಮೇ 30, 2024 ರಂದು ಎಲ್ಲ ಚುನಾವಣಾ ಅಭ್ಯರ್ಥಿಗಳ ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳ ಸಭೆ ಜರುಗಿಸಿ ಮತ ಎಣಿಕೆ ಕಾರ್ಯ ಹಾಗೂ ಮತ ಎಣಿಕೆ ದಿನದಂದು ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಲಾಗಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ: ಹುಬ್ಬಳ್ಳಿ, ಸವದತ್ತಿ, ನವಲಗುಂದ, ಕಲಘಟಗಿ, ಕಡೆಯಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಪೆಪ್ಪಿ ಕಂಪನಿಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಅರ್ಜಂಟ್ನಗರ, ಶಿರಡಿನಗರದ ಮಾರ್ಗವಾಗಿ ಬಸವನಗರ ಹತ್ತೀರ ಎಡಭಾಗದಲ್ಲಿ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು ಹಾಗೂ ಬೆಳಗಾವಿ ಕಡೆಯಿಂದ ಬರುವಂತ ವಾಹನಗಳು ಕೆಇಬಿ ಗ್ರೀಡ್ ಹತ್ತೀರ ಯು-ಟರ್ನ್ ಮಾಡಿಕೊಂಡು ಬಸವನಗರ ಹತ್ತೀರ ಎಡಭಾಗದಲ್ಲಿ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ತಿಳಿಸಲಾಗಿದೆ.
ಚುನಾವಣಾ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ:
ಪೆಪ್ಪಿ ಕಂಪನಿ ಕ್ರಾಸ್ ಮಾರ್ಗವಾಗಿ ಎತ್ತಿನಗುಡ್ಡ ಗ್ರಾಮದ ಕ್ರಾಸ್ ಮುಖಾಂತರ ಲೇಡಿಸ್ ಹಾಸ್ಟೆಲ್ ಕ್ರಾಸ್, ಮೆಣಸಿನಕಾಯಿ ಸರ್ಕಲ್ ಕಡೆಗೆ ಅಧಿಕಾರಿ ಮತ್ತು ಸಿಬ್ಬಂದಿ ಅವರನ್ನು ಇಳಿಸಿ ಪರತ್ ಅದೇ ಮಾರ್ಗವಾಗಿ ಹೊಸ ಆಡಳಿತ ಭವನದ ಹಿಂದುಗಡೆ ಖಾಲಿ ಜಾಗದಲ್ಲಿ ಮತ್ತು ಲೇಡಿಸ್ ಹಾಸ್ಟಲ್ದಿಂದ ಎಡಕ್ಕೆ ತಿರುಗಿ ಎತ್ತಿನಗುಡ್ಡ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ತಿಳಿಸಲಾಗಿದೆ.
ಉಪನಗರ ಪೊಲೀಸ್ ಠಾಣೆ ಎದುರಿಗೆ (ಭಾರಿ ವಾಹನಗಳ ಡೈವರ್ಷನ್):
ಹುಬ್ಬಳ್ಳಿ ಮತ್ತು ಸವದತ್ತಿ ಕಡೆಯಿಂದ ಬೆಳಗಾವಿ ಕಡೆಗೆ ಹೋಗುವಂತ ವಾಹನಗಳು ಉಪನಗರ ಪೊಲೀಸ್ ಠಾಣೆಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಜರ್ಮನ್ ಸರ್ಕಲ್ ಮಾರ್ಗವಾಗಿ ಕೆಲಗೇರಿ ಬೈಪಾಸ್ ಮುಖಾಂತರ ಬೆಳಗಾವಿ ಕಡೆಗೆ ಹೋಗಲು ಸೂಚಿಸಲಾಗಿದೆ.
ನರೇಂದ್ರ ಬೈಪಾಸ್ ಏರಟೆಕ್ ಕ್ರಾಸ್ (ಭಾರಿ ವಾಹನಗಳ ಡೈವರ್ಷನ್):
ಪೆಪ್ಪಿ ಕಂಪನಿ ಕ್ರಾಸ್ (ಲಘು ವಾಹನಗಳ ಡೈವರ್ಷನ್) ಬೆಳಗಾವಿ ಕಡೆಯಿಂದ ಧಾರವಾಡ ನಗರಕ್ಕೆ ಆಗಮಿಸುವ ಭಾರಿ ವಾಹನಗಳು ನರೇಂದ್ರ ಟೋಲ್ ಪ್ಲಾಜಾ ಮುಖಾಂತರ ಕೆಲಗೇರಿ ಬ್ರಿಡ್ಜ್ನಿಂದ ಕೆಳಗೆ ಇಳಿದು ಜರ್ಮನ್ ಸರ್ಕಲ್, ಉಪನಗರ ಪೊಲೀಸ್ ಠಾಣೆ ಮಾರ್ಗವಾಗಿ ಹುಬ್ಬಳ್ಳಿ ಹಾಗೂ ಸವದತ್ತಿ, ನವಲಗುಂದ ಕಡೆಗೆ ಹೋಗಲು ಸೂಚಿಸಲಾಗಿದೆ
ಹುಬ್ಬಳ್ಳಿ ಮತ್ತು ಸವದತ್ತಿ ಕಡೆಯಿಂದ ಬೆಳಗಾವಿ ಕಡೆಗೆ ಹೋಗುವಂತ ಲಘು ವಾಹನಗಳು ಪೆಪ್ಪಿ ಕಂಪನಿಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಅರ್ಜಂಟ್ನಗರ ಶಿರಡಿನಗರ, ಬಸವನಗರ ಮಾರ್ಗವಾಗಿ ನರೇಂದ್ರ ಬೈಪಾಸ್ ಮುಖಾಂತರ ಬೆಳಗಾವಿ ಕಡೆಗೆ ಸಂಚರಿಸಬೇಕು.
ಬಸವನಗರ ಕ್ರಾಸ್ (ಲಘು ವಾಹನಗಳ ಡೈವರ್ಷನ್) ಬೆಳಗಾವಿ ಕಡೆಯಿಂದ ಧಾರವಾಡ ನಗರಕ್ಕೆ ಆಗಮಿಸುವ ಲಘು ವಾಹನಗಳು ಕೆಇಬಿ ಗ್ರಿಡ್ ಹತ್ತಿರ ಯು-ಟರ್ನ್ ಮಾಡಿಕೊಂಡು ಬಸವನಗರ ಶಿರಡಿನಗರ, ಅರ್ಜಂಟ್ನಗರ ಪೆಪ್ಪಿ ಕಂಪನಿ ಮಾರ್ಗವಾಗಿ ಹಳೇ ಪಿಬಿ ರಸ್ತೆ ಮುಖಾಂತರ ಧಾರವಾಡ ನಗರದ ಕಡೆಗೆ ಹೋಗಲು ಸೂಚಿಸಲಾಗಿದೆ ಎಂದು ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ತಿಳಿಸಿದರು.
ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಶಾಂತಿ , ಸುವ್ಯವಸ್ಥೆ ಕಾಪಾಡಲು ಸುಮಾರು 2500 ಪೊಲೀಸ್ ಅಧಿಕಾರಿ,ಸಿಬ್ಬಂದಿಗಳನ್ನು ಮತ್ತು 6 ಕೆಎಸ್.ಆರ್.ಪಿ ತುಕುಡಿಗಳನ್ನು ಹಾಗೂ 500 ಹೋಮ್ ಗಾರ್ಡ್ ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಉಪ ಪೊಲೀಸ್ ಆಯುಕ್ತ ಕುಶಲ್ ಚೌಕ್ಸೆ , ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


