ತುರುವೇಕೆರೆ: ಕ್ಷೇತ್ರದ ಕಲ್ಲೂರು ಗ್ರಾಮದಲ್ಲಿ ನಾಯಿಗಳ ದಾಳಿ ಹೆಚ್ಚಾಗಿದ್ದು ಗ್ರಾಮದಲ್ಲಿ 500ಕ್ಕೂ ಹೆಚ್ಚು ನಾಯಿಗಳಿವೆ, ಈ ಪೈಕಿ ಸುಮಾರು ನಾಲ್ಕರಿಂದ ಐದು ನಾಯಿಗಳಿಗೆ ಹುಚ್ಚು ಹಿಡಿದಿದೆ ಎಂದು ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ಮಸಾಲ ಜಯರಾಮ್ ಹೇಳಿದ್ದಾರೆ.
ಪಟ್ಟಣದ ಸಮೀಪವಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ದಿನಗಳ ಕೆಳಗೆ ಕಲ್ಲೂರು ಗ್ರಾಮದ ಸುಮಾರು 65 ವರ್ಷದ ವೃದ್ದೆ ಮೇಲೆ ನಾಯಿಗಳು ದಾಳಿ ನಡೆಸಿವೆ. ದಾಳಿಯಲ್ಲಿ ವೃದ್ದೆಯ ತಲೆ ಮುಂದಿನ ಭಾಗ, ಮೆದುಳಿನ ಭಾಗ, ಕೈ ಕಾಲು, ಸೇರಿದಂತೆ ಮನಬಂದಂತೆ ಎಲ್ಲಾ ಕಡೆಗಳನ್ನು ಕಡಿದಿದ್ದು, ಕಡಿತದಿಂದ ವೃದ್ದೆಯು ನೆಲಕ್ಕೆ ಬಿದ್ದಿದ್ದು ತಕ್ಷಣ ವೃದ್ದೆಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ವೃದ್ದೆಗೆ ಚಿಕಿತ್ಸೆ ನೀಡಲು ಸ್ಥಳೀಯ ಆಸ್ಪತ್ರೆಯಲ್ಲಿ ಆಂಟಿ ರೇಬಿಸ್ ಲಸಿಕೆ ಲಭ್ಯವಿಲ್ಲದೆ ಇರುವುದರಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿಯೂ ಸಹ ಲಸಿಕೆ ಲಭ್ಯವಿಲ್ಲದೆ ತುಂಬಾ ತೊಂದರೆಯಾಗಿದ್ದು ಗಾಯಗಳಿಂದ ನರಳುತ್ತಿದ್ದಾಗ ಖಾಸಗಿ ಮೆಡಿಕಲ್ ಶಾಪ್ ಗಳಿಂದ ಲಸಿಕೆ ತರಿಸಿ ಚಿಕಿತ್ಸೆ ನೀಡಲಾಗಿದೆ. ಲಸಿಕೆಯ ಕೊರತೆಗೆ ಜಿಲ್ಲಾಡಳಿತ, ಡಿ ಸಿ, ಜಿಲ್ಲಾ ಪಂಚಾಯಿತಿ ಸಿಇಓ ಹಾಗೂ ಡಿ ಹೆಚ್ ಓ ನೇರ ಹೊಣೆಯಾಗಿದ್ದು ಇದರ ಜವಾಬ್ದಾರಿಯನ್ನು ಇವರೇ ಹೊರಬೇಕಾಗಿದೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಕಲ್ಲೂರು ಗ್ರಾಮದ ಶಾಲೆಗೆ ಹೋಗುವ ಸುಮಾರು ಆರರಿಂದ ಏಳು ಮಕ್ಕಳಿಗೆ ನಾಯಿ ದಾಳಿ ನಡೆಸಿವೆ ಇದರ ಜವಾಬ್ದಾರಿಯನ್ನು ಯಾರು ಹೊರಬೇಕಾಗಿದೆ ಲಸಿಕೆಗಳು ಲಭ್ಯವಿಲ್ಲದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇಲ್ಲಿಯವರೆಗೂ ನಾಯಿ ಕಡಿತದಿಂದ ಇಬ್ಬರು ಮೃತಪಟ್ಟಿದ್ದು ಸುಮಾರು ಜನರನ್ನು ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಇದರ ಬಗ್ಗೆಜಿಲ್ಲಾಡಳಿತವಾಗಲಿ ತಾಲ್ಲೂಕು ಆಡಳಿತವಾಗಲಿ ತಲೆ ಕೆಡಿಸಿಕೊಳ್ಳದೆ ಅಮಾಯಕರ ಪ್ರಾಣಗಳ ಮೇಲೆ ಚೆಲ್ಲಾಟವಾಡುತ್ತಿರುವುದು ವಿಪರ್ಯಾಸವೇ ಸರಿ. ಹಾಗೆ ಅಧಿಕಾರಿಗಳು ಗೊತ್ತಿದ್ದು ಗೊತ್ತಿಲ್ಲದವರಂತೆ ನಡೆದುಕೊಳ್ಳುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.
ಇದುವರೆಗೆ ನಾಯಿಗಳ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿ ಮೂರು ತಿಂಗಳಾದರೂ ಸಹ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿ ಪರಿಶೀಲಿಸದೆ ಇರುವುದು ಹಾಗೆ ಜಿಲ್ಲಾಧಿಕಾರಿಗಳಾಗಲಿ ಜಿಲ್ಲೆಯ ಆರೋಗ್ಯ ಇಲಾಖೆಯವರಾಗಲಿ ತಾಲೂಕು ಪಂಚಾಯಿತಿಯವರಾಗಲಿ ಮತ್ತು ತಾಲೂಕಿನ ಹಿರಿಯ ಅಧಿಕಾರಿಗಳು ಭೇಟಿ ನೀಡದಿರುವುದು ದುರಂತ ಎಂದು ಅವರು ಹೇಳಿದ್ದಾರೆ.
ಇಂತಹ ಘಟನೆಗಳಿಂದ ಸಾವು ನೋವುಗಳು ಸಂಭವಿಸಿದರೆ, ಶವವನ್ನು ಜಿಲ್ಲಾಧಿಕಾರಿಗಳ ವಸತಿ ಸಮುಚ್ಚಯದ ಮುಂದೆ ತಂದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದರ ಹೊಣೆಯನ್ನು ಜಿಲ್ಲಾ ಪಂಚಾಯಿತಿ ಸಿಇಓ ಹಾಗೂ ಜಿಲ್ಲಾಧಿಕಾರಿಗಳು ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಬೇರೆಲ್ಲಾ ವಿಚಾರಗಳಿಗೆ ಮೂಗು ತೂರಿಸುತ್ತಿದ್ದು, ಈ ವಿಚಾರವು ಅವರ ಗಮನಕ್ಕೆ ಬಾರದಿರುವುದು ದುರಂತವೇ ಸರಿ. ಜಿಲ್ಲೆಯ ಯಾವ ಆಸ್ಪತ್ರೆಗಳಲ್ಲೂ ರೇಬಿಸ್ ಲಸಿಕೆ ಲಭ್ಯವಿಲ್ಲದಿರುವುದು ಇವುಗಳನ್ನು ಖರೀದಿ ಮಾಡಲು ಸರ್ಕಾರದ ಬಳಿ ಹಣವಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಈ ವಿಚಾರದಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಡಿ ಎಚ್ ಓ ರವರ ನಿರ್ಲಕ್ಷತೆ ಎದ್ದು ಕಾಣುತ್ತಿದ್ದು ಸರ್ಕಾರ ಔಷಧಿ ಖರೀದಿ ಮಾಡಲು ಸಹ ಹಣವಿಲ್ಲದೆ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಗ್ರಾಮದಲ್ಲಿ ರಾತ್ರಿಯ ವೇಳೆಯಲ್ಲಿ ನಾಯಿಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿದ್ದು ಅವುಗಳಿಗೆ ಕಡಿವಾಣವನ್ನು ಹಾಕಿ ಕೂಡಲೇ ಎಚ್ಚೆತ್ತುಕೊಂಡು ಇವುಗಳ ನಿಯಂತ್ರಣವನ್ನು ಮಾಡುತ್ತದೆಯೋ ಎಂದು ಕಾದು ನೋಡಬೇಕಿದೆ ಎಂದರು.
ಇನ್ನು ಶಾಲೆಗೆ ಹೋಗುವ ಮಕ್ಕಳ ಪರಿಸ್ಥಿತಿಯ ಬೇರೆಯಾಗಿದ್ದು, ಪೋಷಕರು ಕೈಯಲ್ಲಿ ದೊಣ್ಣೆಯನ್ನು ಹಿಡಿದು ಮಕ್ಕಳನ್ನು ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುವಂತಹ ಪರಿಸ್ಥಿತಿ ಎದುರಾಗಿದೆ. ಇನ್ನು ಕೆಲವು ಮಕ್ಕಳಂತೂ ಮನೆಯಲ್ಲಿಯೇ ಇರುವಂತ ಪರಿಸ್ಥಿತಿ ಎದುರಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಪರಿಹಾರ ಮಾಡಿ ಇಲ್ಲವಾದಲ್ಲಿ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮುತ್ತಣ್ಣ, ವಿ.ಬಿ.ಸುರೇಶ್, ವೀರೇಂದ್ರ ಪಾಟೀಲ್, ಚಂದ್ರಣ್ಣ, ಕಾಳಂಜಿಹಳ್ಳಿ ಸೋಮಶೇಖರ್, ಜೀವಿ ಪ್ರಕಾಶ್, ಕೋಳಗಟ್ಟ ಯೋಗಿಶ್, ಸುರೇಶ್, ದಿನೇಶ್ ಸೇರಿದಂತೆ ಹಲವರು ಇದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA