ಮಧುಗಿರಿ: ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಅರ್ಜಿ ಹಿಡಿದು ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಬರುವುದನ್ನು ತಪ್ಪಿಸಲು ಸರ್ಕಾರ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ತಿಳಿಸಿದರು.
ತಾಲೂಕಿನ ನೇರಳೆ ಕೆರೆ ಗ್ರಾಮದ ಶ್ರೀರಂಗನಾಥ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಗ್ರಾಮಮಟ್ಟದಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು,ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಜನ ಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದು, ಸ್ಥಳದಲ್ಲೇ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದರು.
ಪಾವತಿ ಖಾತೆಗಳನ್ನು ಬದಲಾವಣೆ ಮಾಡಿಸಿಕೊಳ್ಳುವ ಮೂಲಕ ಸಮಸ್ಯೆಗಳಿಂದ ಮುಕ್ತರಾಗಬೇಕು, ರೈತರು ಬೆಳೆ ವಿಮೆ ಮಾಡಿಸಿಕೊಳ್ಳು ವುದರಿಂದ ಆರ್ಥಿಕವಾಗಿ ಹೊರೆಯಾಗುವುದರಿಂದ ತಪ್ಪಿಸಿಕೊಳ್ಳಬಹುದು ಎಂದರು. ಕೆ. ಎನ್. ರಾಜಣ್ಣನವರು ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳನ್ನು ತಂದಿದ್ದು, ತಾಲೂಕಿನ ವಸತಿ ರೈತರಿಗೆ ಹಂತ ಹಂತವಾಗಿ ವಿತರಿಸಲಾಗುವುದು. ಯಾವುದೇ ಪಕ್ಷದವರು ಇರಲಿ ಬಡವರನ್ನು ಗುರುತಿಸಿ ಮನೆಗಳನ್ನು ಹಂಚುವಂತೆ ಪಂಚಾಯತಿ ಅಧ್ಯಕ್ಷ — ಪಿ ಡಿ ಓ ಗಳಿಗೆ ಸೂಚಿಸಿದರು.
ಆಶ್ರಯ ಮನೆಗಳಿಗೆ ನಿವೇಶನ ನೀಡಿದಾಗ ರಸ್ತೆ ಇರಬೇಕು. ರುದ್ರ ಭೂಮಿಗಳಿಗೆ ಹೋಗಲು ರಸ್ತೆ ಇಲ್ಲದಿದ್ದರೆ ಅಧಿಕಾರಿಗಳು ಕಾಲುದಾರಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಗ್ರಾಮಗಳಲ್ಲಿ ಅಂಗನವಾಡಿ, ಶಾಲಾ ಕಟ್ಟಡ ದುರಸ್ತಿ ಕಾರ್ಯ, ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಕೊಡಿಸಲಾಗುವುದು ಎಂದರು.
ಇಡೀ ಜಿಲ್ಲೆಯಲ್ಲಿಯೇ ಮಧುಗಿರಿ ತಾಲೂಕಿನಲ್ಲಿ ನಾಲ್ಕು ಕಡೆ ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಅರ್ಜಿಗಳನ್ನು ಪರಿಶೀಲಿಸಿ ಶೇಕಡ 60ರಷ್ಟು ಕಾರ್ಯರೂಪಕ್ಕೆ ತಂದಿದ್ದೇವೆ ಎಂದರು. ಇಲ್ಲಿರುವ ವಿವಿಧ ಇಲಾಖೆಗಳ ಮಳಿಗೆ ಗಳಿಗೆ ಭೇಟಿ ನೀಡಿದರೆ ಅಧಿಕಾರಿಗಳು ಸರ್ಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಸವಲತ್ತುಗಳನ್ನು ಪಡೆದು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಸಚಿವರ ಸೂಚನೆಯಂತೆ ಈಗಾಗಲೇ ನಾಲ್ಕು ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಗ್ರಾಮಮಟ್ಟದ ಸಾರ್ವಜನಿಕರ ಸಮಸ್ಯೆಗಳ ಬಗೆಹರಿದಾಗ ಕಾರ್ಯಕ್ರಮ ಸಾರ್ಥಕತೆ ಪಡೆಯುತ್ತದೆ ಎಂದರು.
ತಹಶೀಲ್ದಾರ್ ಸಿಗಬತುಲ್ಲಾ, ತಾ. ಪಂ. ಇ ಒ. ಬಿ. ಎಸ್. ಲಕ್ಷ್ಮಣ್, ಬಿ ಇ ಓ. ಕೆ. ಎನ್. ಹನುಮಂತರಾಯಪ್ಪ, ಎ. ಇ. ಇ. ರಂಗನಾಥ್, ದಯಾನಂದ್, ಜಿಪಂ ಮಾಜಿ ಅಧ್ಯಕ್ಷ ಜಿ. ಜೆ. ರಾಜಣ್ಣ, ಮುಖಂಡರಾದ ಎಂ. ಎಸ್. ಮಲ್ಲಿಕಾರ್ಜುನಯ್ಯ, ಸಿದ್ದಾಪುರ ರಂಗಶಾಮಣ್ಣ, ಡಿ. ಎಚ್. ನಾಗರಾಜು, ರಮೇಶ್ ಕನಕದಾಸ, ಕೆಂಚಣ್ಣ, ನೇರಳೆ ಕೆರೆ ರಂಗನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಗ್ರಾಪಂ ಅಧ್ಯಕ್ಷ ಇಂದ್ರ ಕುಮಾರ್, ಉಪಾ ಧ್ಯಕ್ಷೆ ಆರ್. ಪರಿಮಳ, ಪಿಡಿಓ ರಜನಿ, ಆರ್. ಐ. ಚಿಕ್ಕರಾಜು, ಶಿಕ್ಷಣ ಇಲಾಖೆಯ ಎಚ್. ಚಿತ್ತಯ್ಯ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು . ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಹಾಗೂ 56 ಜನರಿಗೆ ಪಿಂಚಣಿ ಆದೇಶ ಪತ್ರಗಳನ್ನು ವಿತರಿಸಲಾಯಿತು.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296