ತುಮಕೂರು: ಮಹಿಳೆಯರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸುವ ಸ್ವಸಹಾಯ ಸಂಘದ ಮೂಲಕ ಎಸ್.ಬಿ.ಐ.ಬ್ಯಾಂಕಿನಿಂದ ಸಾಲ ಪಡೆದು ಮತ್ತೆ ಸಂಘದ ಮೂಲಕ ಎಸ್.ಬಿ.ಐ.ಗೆ ಮರುಪಾವತಿ ಮಾಡಿ ತಮ್ಮ ಆರ್ಥಿಕ ಸಂಕಷ್ಟಗಳನ್ನು ತೀರಿಸಿಕೊಂಡು ಸ್ವಾವಲಂಬಿಗಳಾಗಿ, ಆರ್ಥಿಕ ಶಕ್ತಿಯನ್ನು ಹೊಂದಿ ಜೀವನದಲ್ಲಿ ಮುಂದೆ ಬರಬೇಕು, ಪ್ರತಿ ಮಹಿಳೆಯರು ಸ್ವಉದ್ಯೋಗವನ್ನು ಮಾಡಿ ದುಡಿದು ಸ್ವತಂತ್ರವಾಗಿ ಬದುಕಬೇಕು ಮತ್ತು ತಮ್ಮ ಕುಟುಂಬಕ್ಕೆ ಆರ್ಥಿಕ ಚೈತನ್ಯವನ್ನು ತುಂಬಬೇಕು ಎಂದು ತುಮಕೂರು ಎಸ್.ಬಿ.ಐ.ಸಹಾಯಕ ವ್ಯವಸ್ಥಾಪಕರಾದ ಹೇಮಂತ್ ರವರು ಕರೆ ನೀಡಿದರು.
ನಗರದ ದಾನಃಪ್ಯಾಲೇಸ್ ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಸಂಘ ಯಾವುದೇ ಸಾಲವನ್ನು ವೈಯಕ್ತಿಕವಾಗಿ ನೀಡುವುದಿಲ್ಲ, ಸಂಘವು ಎಸ್.ಬಿ.ಐ.ನಿಂದ ಸಾಲ ಕೊಡಿಸುತ್ತದೆ. ನೀವು ತೆಗೆದುಕೊಂಡ ಸಾಲಕ್ಕೆ ವೀರೇಂದ್ರಹೆಗ್ಗಡೆರವರು ಜಾಮೀನು ನೀಡಿದ್ದಾರೆ. ಸಾಲ ಪಡೆಯುವುದು ಮುಖ್ಯವಲ್ಲ ಸರಿಯಾದ ಕಂತುಗಳ ಮೂಲಕ, ಸರಿಯಾದ ವೇಳೆಗೆ ಕಂತುಗಳ ಮೂಲಕ ಬ್ಯಾಂಕಿಗೆ ಮರುಪಾವತಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಸದಸ್ಯರಿಗೆ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೈಗಾರಿಕೋದ್ಯಮಿ ಎಸ್.ಪಿ.ಚಿದಾನಂದ್ ರವರು ಧರ್ಮಸ್ಥಳ ಸಂಘ ಯಾವುದೇ ಜಾತಿ ಧರ್ಮ ನೋಡದೆ ಮಹಿಳೆಯರಿಗೆ ಸಾಲ ನೀಡುತ್ತಿದೆ. ಮಹಿಳೆಯರು ಪಡೆದ ಸಾಲವನ್ನು ಸರಿಯಾಗಿ ಉಪಯೋಗಿಸಿಕೊಂಡು ಬ್ಯಾಂಕಿಗೆ ಮರುಪಾವತಿ ಮಾಡಿ ಎಂದು ಹೇಳಿದರು.
ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜಿಲ್ಲೆಯಲ್ಲಿ ಕೆರೆ ಅಭಿವೃದ್ಧಿ, ಮನೆ ನಿರ್ಮಾಣ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ವೃದ್ಧರಿಗೆ ಮಾಸಾಶನ, ವಿದ್ಯಾರ್ಥಿಗಳಿಗೆ ಜ್ಞಾನ ದೀಪ ಕಾರ್ಯಕ್ರಮದ ಮೂಲಕ ಉಚಿತ ಶಿಕ್ಷಣ, ಡ್ರಗ್ಸ್ ಚಟಕ್ಕೆ ಒಳಗಾದವರಿಗೆ ಸರಿಯಾದ ತಿಳುವಳಿಕೆ ನೀಡಿ ಸರಿದಾರಿಗೆ ತಂದಿದ್ದೇವೆ. ಮಧ್ಯವರ್ಜನ ಶಿಬಿರ, ಹೀಗೆ ನೂರಾರು ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಸಹಾಯ ಮಾಡುತ್ತಾ ಸಂಘ ಬರುತ್ತಿದೆ, ಟೀಕೆಗಳು ಸಾಯುತ್ತವೆ,ಕೆಲಸಗಳು ಮಾತ್ರ ಸಮಾಜದಲ್ಲಿ ಅಜರಾಮರವಾಗಿ ಉಳಿಯುತ್ತವೆ ಎಂದರು.
ತಾಲ್ಲೂಕು ಯೋಜನಾಧಿಕಾರಿ ಪ್ರಭಾಕರ್ ರಾಮ್ ನಾಯಕ್ ಮಾತನಾಡಿ, ನಾನು ಬಂದ 6 ತಿಂಗಳಿನಿಂದ ಹಲವರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದೇನೆ. ತಾಲ್ಲೂಕಿನಲ್ಲಿ ಒಟ್ಟು 69 ಒಕ್ಕೂಟಗಳು ಕೆಲಸ ನಿರ್ವಹಿಸುತ್ತಿವೆ. ಇಲ್ಲಿವರೆಗೂ ತಾಲ್ಲೂಕಿನಲ್ಲಿ ಈವರೆಗೂ 58ಕೋಟಿ ಸಾಲ ನೀಡಿದ್ದೇವೆ. ಬರುವ ಮಾರ್ಚ್ ವೇಳೆಗೆ 100 ಕೋಟಿಗಳನ್ನು ಎಸ್.ಬಿ.ಐ.ಮೂಲಕ ನೀಡಲಿದ್ದೇವೆ. 160 ಮಕ್ಕಳಿಗೆ ಲ್ಯಾಪ್ ಟಾಪ್ ನೀಡಿದ್ದೇವೆ, ಅಶಕ್ತರಿಗೆ ವಾಟರ್ ಬೆಡ್, ವೀಲ್ ಚೇರ್ ಹೀಗೆ ನೂರಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ಎಸ್.ಬಿ.ಐ. ರೀಜಿನಲ್ ಮ್ಯಾನೇಜರ್ ಟಿ.ಕೆ.ಸುರೇಂದ್ರ, ಒಕ್ಕೂಟದ ತಾಲ್ಲೂಕು ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q