ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಸಿಎಂ, ಡಿಸಿಎಂ, ಗೃಹ ಸಚಿವ, ಸಣ್ಣ ನೀರಾವರಿ ಸಚಿವ, ವಸತಿ ಸಚಿವ, ಇಂಧನ ಸಚಿವ ಸೇರಿ 15 ಕ್ಕೂ ಅಧಿಕ ಸಚಿವರ ವಿರುದ್ದ ಅವಾಚ್ಯ ಶಬ್ದದಿಂದ ನಿಂದನೆ ಮತ್ತು ವೈಯಕ್ತಿಕ ತೇಜೋವಧೆಯ ವಿಡೀಯೊ ಮಾಡಿ ಪೇಸ್ ಬುಕ್, Instagram ಮತ್ತು ಎಕ್ಸ್ ನ ಖಾತೆಗಳಲ್ಲಿ ಹರಿಬಿಟ್ಟು ಉತ್ತರಕಾಂಡ ರಾಜ್ಯದ ಹಳ್ಳಿಯಲ್ಲಿ ತಲೆ ಮರೆಸಿಕೊಂಡಿದ್ದ ಬಜರಂಗ ದಳದ ಕಾರ್ಯಕರ್ತನನ್ನು ಕೊರಟಗೆರೆ ಪಿಎಸೈ ಚೇತನ್ ಕುಮಾರ್ ನೇತೃತ್ವದ ತಂಡ ಇತ್ತೀಚಿಗೆ ಬಂಧಿಸಿರುವ ಘಟನೆ ನಡೆದಿದೆ.
ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ, ವಸತಿ ಸಚಿವ ಜಮೀರ್ ಅಹಮ್ಮದ್, ಇಂಧನ ಸಚಿವ ಕೆ.ಜೆ.ಜಾರ್ಜ್ ಸೇರಿ ಹಲವರ ವಿರುದ್ದ ಬಿಜೆಪಿ ಕಾರ್ಯಕರ್ತ 1 ರಿಂದ 2 ನಿಮಿಷದ ವಿಡೀಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟು ಸರಕಾರದ ಘನತೆಗೆ ಧಕ್ಕೆ ತಂದಿರುವ ಬಗ್ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೂರಿನ ಅನ್ವಯ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಜಿಲ್ಲೆಯ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತನಾಗಿ ಕೆಲಸ ಮಾಡಿರುವ ಮೋಹಿತ್ ನರಸಿಂಹಮೂರ್ತಿ ಪ್ರಸ್ತುತ ಉತ್ತರಕಾಂಡದ ಉಕ್ಕಿಮಠದಲ್ಲಿ ಬಿಜೆಪಿ ಸಂಘಟಕನಾಗಿ ಕೆಲಸ ಮಾಡುತ್ತ ಜೀವನಕ್ಕಾಗಿ ಟೀ ಅಂಗಡಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ರಾಜ್ಯಸರಕಾರ ಮತ್ತು ಸಚಿವರ ವಿರುದ್ದ ಮನಸ್ಸಿಗೆ ಬಂದಂತೆ ಮಾತನಾಡಿದ್ದ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಹಿತ್ ನರಸಿಂಹಮೂರ್ತಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರ ಲೋಕಾಸಭೆಗೆ ಸ್ಪರ್ಧೆ:
ದಾಬಸ್ಪೇಟೆ ತಾಲೂಕು ನಲ್ಲೂರಿನ ಲೇ.ನರಸಿಂಹಮೂರ್ತಿಯ ಮಗನಾದ ಆರೋಪಿ ಮೋಹಿತ್ ನರಸಿಂಹಮೂರ್ತಿ 2024–25ನೇ ಸಾಲಿನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕೊಳಲು ಚಿಹ್ನೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಟೇವಣಿ ಕಳೆದುಕೊಂಡಿದ್ದಾನೆ. ಪ್ರಸ್ತುತವು ಸಹ ಉತ್ತರಕಾಂಡದಲ್ಲಿ ಖಾಸಗಿ ಪಕ್ಷವೊಂದರ ಸಂಘಟಕನಾಗಿ ಗುರ್ತಿಸಿಕೊಂಡು ಪ್ರಚಾರದಲ್ಲಿ ನಿರತನಾಗಿದ್ದ ಎಂದು ತಿಳಿದುಬಂದಿದೆ.
10 ಜಿಲ್ಲೆಗಳಲ್ಲಿ 15 ಪ್ರಕರಣ ದಾಖಲು:
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೊರಟಗೆರೆ, ಮೈಸೂರು, ಕಲಬುರ್ಗಿ, ಶಿವಮೊಗ್ಗ, ಬೆಳಗಾವಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಆರೋಪಿ ಮೊಹಿತ್ ನರಸಿಂಹಮೂರ್ತಿ ಮೇಲೆ ಭಾರತೀಯ ನಾಗರೀಕ ಸುರಕ್ಷಾ ಕಾಯ್ದೆಯಡಿ ಒಟ್ಟು 12 ಪ್ರಕರಣ ದಾಖಲಾಗಿವೆ. ಇದಲ್ಲದೇ ಉತ್ತರಕಾಂಡದ ಚಾರದಾಮ ಯಾತ್ರೆ ಮಾಡಿಸುವ ಆಮಿಷವೊಡ್ಡಿ ಕರ್ನಾಟಕದ 10 ಜನ ಭಕ್ತರಿಗೆ ಪಂಗನಾಮ ಹಾಕಿರುವ ಹಿನ್ನೆಲೆ 3 ಕಡೆ ಮೋಸದ ಪ್ರಕರಣಗಳು ದಾಖಲಾಗಿವೆ.
ಉತ್ತರಕಾಂಡ ರಾಜ್ಯದಲ್ಲಿ ಆರೋಪಿಯ ಬಂಧನ:
ತುಮಕೂರು ಎಸ್ಪಿ ಅಶೋಕ್ ವೆಂಕಟ್ ಆದೇಶದ ಮೇಲೆ ತುಮಕೂರು ಸಿಬಿ ಬ್ರಾಂಚ್ ಸಿಪಿಐ ಅವಿನಾಶ್, ಸಿರಾ ಗ್ರಾಮಾಂತರ ಸಿಪಿಐ ರಾಘವೇಂದ್ರ, ಕೊರಟಗೆರೆ ಪಿಎಸೈ ಚೇತನ್ ಕುಮಾರ್, ಕ್ರೈಂ ಸಿಬ್ಬಂದಿಗಳಾದ ದೊಡ್ಡಲಿಂಗಪ್ಪ, ಸಿದ್ದರಾಮ ನೇತೃತ್ವದ 5 ಜನ ಪೊಲೀಸರ ತಂಡ 15 ಪ್ರಕರಣದ ಆರೋಪಿ ಮೋಹಿತ್ ನರಸಿಂಹಮೂರ್ತಿಯನ್ನು ಉತ್ತರಕಾಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆ ಚಮೋಲಿ ತಾಲೂಕಿನ ಉಕ್ಕಿಮಠದ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯೇ ಬಂಧಿಸಿದ್ದಾರೆ.
ತುಮಕೂರು ಎಸ್ಪಿ ಅಶೋಕ್ ವೆಂಕಟ್, ಎ ಎಸ್ಪಿ ಮರೀಯಪ್ಪ, ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಕೊರಟಗೆರೆಗೆ ಬೇಟಿ ನೀಡಿ ಹೆಚ್ಚಿನ ತನಿಖೆ ನಡೆಸಿದ್ದಾರೆ. ಕೊರಟಗೆರೆ ಸಿಪಿಐ ಅನಿಲ್, ಪಿಎಸೈ ಚೇತನ್ ಕುಮಾರ್ ನೇತೃತ್ವದ ತಂಡ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಆರೋಪಿ ಮೋಹಿತ್ ನರಸಿಂಹಮೂರ್ತಿ ವಿರುದ್ದ ಪ್ರಕರಣ ದಾಖಲಾಗಿದೆ.
ಸಿಎಂ, ಡಿಸಿಎಂ, ಗೃಹ ಸಚಿವರು ಸೇರಿ 15ಕ್ಕೂ ಅಧಿಕ ಸಚಿವರ ಬಗ್ಗೆ ಮೊಹಿತ್ ನರಸಿಂಹಮೂರ್ತಿ ಎಂಬಾತ ವೈಯಕ್ತಿಕ ತೇಜೋವಧೆಯಾ ವಿಡೀಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಉತ್ತರಕಾಂಡಕ್ಕೆ ಪರಾರಿ ಆಗಿದ್ದಾನೆ. ಸರಕಾರದ ಘನತೆಗೆ ದಕ್ಕೆ ಮತ್ತು ಅವಾಚ್ಯ ಶಬ್ದ ಬಳಕೆ ಮಾಡಿದ್ದ ತಪ್ಪು. ನಾನು ದೂರು ನೀಡಿದ ತಕ್ಷಣವೇ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
– ಅರಕೆರೆ ಶಂಕರ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx