ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ನ್ಯಾಯಾಧೀಶ ಮಲ್ಲಿಕಾರ್ಜುನ್ ಗೌಡ ಅವರನ್ನು ಬಂಧಿಸಲು ಆಗ್ರಹಿಸಿ, ದಲಿತ ಸಂಘಟನೆಗಳ ಒಕ್ಕೂಟದಿಂದ ‘ರಾಯಚೂರು ಚಲೋ’ ನಡೆಯಿತು.
ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಸಂಘಟನೆಯ ಒಕ್ಕೂಟದ ಮುಖಂಡರುಗಳು, ನಾವು ರಾಯಚೂರು ತಲುಪುವುದರೊಳಗೆ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ಸೇವೆಯಿಂದ ಅಮಾನತು ಮಾಡಿ, ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪ್ತಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು
ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ವೇದಿಕೆಯಿಂದ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುವುದಾಗಿ ಹೇಳಿದ್ದಲ್ಲದೆ, ಅದನ್ನು ಮಾಡಿಯೇ ತೋರಿಸಿದ ಜಿಲ್ಲಾ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲರು ದುರಹಂಕಾರಕ್ಕೆ ಪಾಠ ಕಲಿಸಬೇಕು ಮತ್ತು ಅಪರಾಧ ಕಾನೂನಿನ ಕಠಿಣ ಶಿಕ್ಷೆ ಆಗಬೇಕೆಂದು ರಾಜ್ಯ ವ್ಯಾಪ್ತಿ ಆಕ್ರೋಶ ಭುಗಿಲೆದ್ದಿದೆ. ಈತನ ಮೇಲೆ ಪೊಲೀಸ್ ಕೇಸು ದಾಖಲಿಸಿ ಜೈಲಿಗೆ ಹಾಕಲು ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರು ಅನುಮತಿ ಬೇಕೆಂಬ ವಿಳಂಬ ಧೋರಣೆಯನ್ನು ಪ್ರದರ್ಶಿಸಲಾಗುತ್ತಿದೆ. ನ್ಯಾಯಾಲಯದ ಆವರಣದಲ್ಲಿ ಇಂತಹ ಅನ್ಯಾಯ ನಡೆಯುತ್ತಿದ್ದರೆ ಇಂಥವರಿಂದ ಸಾಮಾನ್ಯ ಜನರಿಗೆ ನ್ಯಾಯವಾದರೂ ಹೇಗೆ ದಕ್ಕುತ್ತದೆ ಎಂಬ ಅನುಮಾನವೂ ದಟ್ಟವಾಗಿ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಮತ್ತು ಕೋರ್ಟುಗಳಲ್ಲಿ ಸಂವಿಧಾನಶಿಲ್ಪಿ ಭಾವಚಿತ್ರ ಇರಬೇಕೆಂಬ ಸರ್ಕಾರಿ ಆದೇಶವಿದ್ದರೂ ನ್ಯಾಯಾಧೀಶರಿಂದ ಆಗಿರುವುದರಿಂದ ಭಾಗವಾಗಿ ಮಲ್ಲಿಕಾರ್ಜುನ್ ಗೌಡ ಪಾಟೀಲ ಇಂತಹ ಕೃತ್ಯವನ್ನು ಎಸಗಿದ್ದಾರೆ. ಎಲ್ಲಾ ಕೋರ್ಟುಗಳಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಪ್ರದರ್ಶನವಾಗಬೇಕು. ಅಯೋಗ್ಯ ಮತ್ತು ಮತ್ತು ಅನ್ಯಾಯ ನ್ಯಾಯಾಧೀಶ ಮಲ್ಲಿಕಾರ್ಜುನ್ ಗೌಡ ಪಾಟೀಲ್ ಅವರನ್ನು ಬಂಧಿಸಿ ಜೈಲಿಗೆ ಹಾಕಬೇಕೆಂದು ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ಗಳನ್ನು ನಡೆಸುತ್ತಿದ್ದೇವೆ ಕಾನೂನು ನ್ಯಾಯ ರಕ್ಷಣೆಯಾಗಿ ಹೋರಾಟಕ್ಕೆ ನಾಗರಿಕ ಬಂಧುಗಳು ಸಹಕರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಲವಾರು ಸಂಘಟನೆಯ ಮುಖಂಡರುಗಳು ಉಪಸ್ಥಿತರಿದ್ದರು
ವರದಿ: ಎ.ಎನ್. ಪೀರ್, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB