ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಕೊಡ್ಲಾಪುರ ಗ್ರಾಮ ಪಂಚಾಯಿತಿಯ ಪಿ ಡಿ ಓ ಪುಂಡಲೀಕ ಬೊಮಗೊಂಡ ಮತ್ತು ಬಿಲ್ ಕಲೆಕ್ಟರ್ ಹನುಮಂತರಾಯಪ್ಪ ಈ ಇಬ್ಬರು ವೀರನಾಗೇನಹಳ್ಳಿ ಮಜರೆ ವಡ್ಡರಹಟ್ಟಿ ಗ್ರಾಮದ ಕೆ.ಎಚ್.ಆನಂದ್ ಕುಮಾರ್ ಎಂಬ ವ್ಯಕ್ತಿಗೆ ಸೇರಿದ್ದ ಆಸ್ತಿಯ ಇ — ಖಾತೆ ಮಾಡಿಕೊಡಲು 500/- ರೂಗಳ ಸರ್ಕಾರಿ ಶುಲ್ಕದ ಜೊತೆಗೆ 6000/- ಸಾವಿರ ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ದೂರುದಾರ ಕೆ.ಎಚ್.ಆನಂದ್ ಕುಮಾರ್ ಲಂಚದ ಹಣ ಕೊಡಲು ಇಷ್ಟವಿಲ್ಲದೆ ದಿನಾಂಕ:- 09/05/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ಶಿವರುದ್ರಪ್ಪ ಮೇಟಿ ಮೊ. ನಂ: 03/2025 ಕಲಂ –7(a) ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ 1988 (ತಿದ್ದುಪಡಿ 2018) ರಂತೆ ಪ್ರಕರಣ ದಾಖಲಿಸಿಕೊಂಡು ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದರು.
ಮಂಗಳವಾರ ಮಧ್ಯಾಹ್ನ 2:30 ರ ಸಮಯದಲ್ಲಿ ಪಿಡಿಓ ಪುಂಡಲೀಕ ಬೊಮಗೊಂಡ ಮತ್ತು ಬಿಲ್ ಕಲೆಕ್ಟರ್ ಹನುಮಂತರಾಯಪ್ಪ ದೂರುದಾರ ಕೆ.ಎಚ್.ಆನಂದನಿಂದ 6,500/- ಲಂಚದ ಹಣವನ್ನು ತೆಗೆದುಕೊಳ್ಳುವ ಸಮಯದಲ್ಲಿ ತುಮಕೂರು ಜಿಲ್ಲಾ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳಿಬ್ಬರನ್ನು ಲೋಕಾಯುಕ್ತ ಪೊಲೀಸರ ತಂಡ ವಶಕ್ಕೆ ಪಡೆದು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.
ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ ಎ.ವಿ. ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಎಂ. ಸಂತೋಷ್ ಉಸ್ತುವಾರಿಯಲ್ಲಿ ಇನ್ಸ್ಪೆಕ್ಟರ್ ಶಿವರುದ್ರಪ್ಪ ಮೇಟಿ, ರಾಜು, ಮೊಹಮ್ಮದ್ ಸಲೀಂ, ಮತ್ತು ಸಿಬ್ಬಂದಿಗಳು ಟ್ರ್ಯಾಪ್ ಕಾರ್ಯಚಣೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW