ತುಮಕೂರು: ರೈತರು ಬದುಕು ಕಟ್ಟಿಕೊಳ್ಳಲು ನಗರಗಳ ಕಡೆಗೆ ವಲಸೆ ಬರುತ್ತಿದ್ದು, ಸರ್ಕಾರ ಇದನ್ನು ತಡೆಯಬೇಕು. ಹಳ್ಳಿಗಳಲ್ಲಿಯೇ ಕೆಲಸ ನಿರ್ವಹಿಸಲು ಪೂರಕ ವಾತಾವರಣ ಕಲ್ಪಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ನಗರದಲ್ಲಿ ಶನಿವಾರ ಐಕ್ಯ ಫೌಂಡೇಶನ್, ಇನ್ನರ್ ವ್ಹೀಲ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಲ್ಪತರು ಉತ್ಸವದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದರು.
ಪ್ರಸ್ತುತ ಕೃಷಿ ಲಾಭದಾಯಕವಾಗಿಲ್ಲ, ರೈತರು ವ್ಯವಸಾಯದಿಂದ ವಿಮುಖರಾಗುವ ಪರಿಸ್ಥಿತಿ ಬಂದಿದೆ. ಹೇಮಾವತಿ ನೀರು ಜಿಲ್ಲೆಗೆ ಬರದಿದ್ದರೆ ಇಲ್ಲಿನ ಜನರ ಪರಿಸ್ಥಿತಿ ಚಿಂತಾಜನಕವಾಗಿರುತ್ತಿತ್ತು. ಕುಡಿಯುವ ನೀರು, ಕೃಷಿ, ಅಂತರ್ಜಲ ವೃದ್ಧಿಗೆ ಹೇಮಾವತಿ ವರದಾನವಾಗಿ, ರೈತರ ಬದುಕು ಹಸನಾಗಿದೆ ಎಂದರು.
ರೈತ ಹೋರಾಟಗಾರ ಗಂಗಾಧರ ಕಾಸರಘಟ್ಟ, ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆಯಬೇಕು ಎಂಬ ಕಾರಣಕ್ಕೆ ಭೂಮಿಗೆ ರಾಸಾಯನಿಕ ಗೊಬ್ಬರ ಹಾಕಿ ಆಹಾರ ವಿಷ ಮಾಡುತ್ತಿದ್ದೇವೆ. ಇದರಿಂದ ಜನರು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಕೃಷಿಯಲ್ಲಿ ಈ ಹಿಂದಿನಂತೆ ಸಾವಯವ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.
ನಟರಾದ ಹನುಮಂತೇಗೌಡ, ಅರ್ಜುನ್ ಯೋಗೇಶ್ರಾಜ್, ನಟಿ ಶಿಲ್ಪಾ ಶೈಲೇಶ್, ಐಕ್ಯ ಫೌಂಡೇಶನ್ ಅಧ್ಯಕ್ಷೆ ರೇಖಾ ಶಿವಕುಮಾರ್, ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷೆ ಮಂಜುಳಾ ಲೋಕೇಶ್, ಪ್ರಧಾನ ಕಾರ್ಯದರ್ಶಿ ಸುಮಿತ್ರಾ ನಾಗರಾಜ್, ಉದ್ಯಮಿ ರೂಪಾ ವಿಶ್ವಾಸ್ ಇತರರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


