ಕುಣಿಗಲ್: ಪಟ್ಟಣದಲ್ಲಿ ಇತ್ತೀಚೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಿದ ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಜಮಾ–ಖರ್ಚಿನ ಸಂಪೂರ್ಣ ವಿವರವನ್ನು ಗ್ರಾಮ ದೇವತೆ ದೇವಾಲಯ ಟ್ರಸ್ಟ್ನ ಅಧ್ಯಕ್ಷರಾದ ಕೋಟೆ ತಿಮ್ಮಣ್ಣ ಅವರು ಪಟ್ಟಣದ ನಾಗರಿಕರಿಗೆ ಪ್ರಕಟಿಸಿದ್ದಾರೆ. ಪಟ್ಟಣದ ಗ್ರಾಮ ದೇವತಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೋಟೆ ತಿಮ್ಮಣ್ಣ ಅವರ ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಲೆಕ್ಕಪತ್ರವನ್ನು ಮಂಡಿಸಿ, ಸಾರ್ವಜನಿಕರ ಮಾಹಿತಿಗಾಗಿ ಬಹಿರಂಗಪಡಿಸಲಾಯಿತು.
2026ನೇ ಸಾಲಿನಲ್ಲಿ ನಡೆದ ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರು ಹಾಗೂ ಭಕ್ತಾದಿಗಳು ದೇಣಿಗೆ ರೂಪದಲ್ಲಿ ನೀಡಿರುವ ಹಣ ಮತ್ತು ದೇವಾಲಯದ ಹುಂಡಿಯಿಂದ ಒಟ್ಟು 7,30,932 ರೂಪಾಯಿ ಸಂಗ್ರಹವಾಗಿತ್ತು. ಈ ಪೈಕಿ ಜಾತ್ರಾ ಮಹೋತ್ಸವದ ಒಟ್ಟು ವೆಚ್ಚಕ್ಕಾಗಿ 6,12,000 ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು, ಉಳಿದಂತೆ 1,18,932 ರೂಪಾಯಿಗಳಷ್ಟು ಹಣ ಉಳಿತಾಯವಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
ಜಾತ್ರಾ ಮಹೋತ್ಸವವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಹಾಗೂ ಅದ್ದೂರಿಯಾಗಿ ನೆರವೇರಿಸಲಾಗಿದ್ದು, ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಯಾವುದೇ ರೀತಿಯ ಲೋಪ ಅಥವಾ ತೊಂದರೆಯಾಗದಂತೆ ನಿರ್ವಹಿಸಲಾಗಿದೆ. ಆಗಮಿಸಿದ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ದೇವಿಯ ದರ್ಶನ ಪಡೆದ ಭಕ್ತಾದಿಗಳಿಗೆ ಒಟ್ಟು 12 ಸಾವಿರ ಸಿಹಿ ಲಡ್ಡುಗಳನ್ನು ವಿತರಿಸಲಾಯಿತು. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಪಟ್ಟಣದ ಸಮಸ್ತ ನಾಗರಿಕರು, ವರ್ತಕರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಮತ್ತು ಭಕ್ತಾದಿಗಳಿಗೆ ಟ್ರಸ್ಟ್ ಅಧ್ಯಕ್ಷರಾದ ಕೋಟೆ ತಿಮ್ಮಣ್ಣ ಅವರು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಈ ಸರ್ವ ಸದಸ್ಯರ ಸಭೆಯಲ್ಲಿ ಟ್ರಸ್ಟಿನ ಕಾರ್ಯದರ್ಶಿ ವಕೀಲ ಅನಂತ ರಾಮು, ಖಜಾಂಚಿ ವೆಂಕಟೇಶ್, ಕೋಟೆ ಮಹೇಶ್, ಮಾಜಿ ಪುರಸಭಾ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಬೋರಲಿಂಗನಪಾಳ್ಯ ವೆಂಕಟೇಶ್, ಮೂರ್ತಪ್ಪ ಚಾರ್, ಉಷಾ, ರವೀಂದ್ರ ಕುಮಾರ್, ರಾಮಚಂದ್ರಯ್ಯ, ಬಿ.ಕೆ. ವೆಂಕಟೇಶ್, ಎಸ್.ವಿ.ಬಿ. ಸುರೇಶ್, ಸಾಮಿಲ್ ಲೋಕೇಶ್, ದ್ವಾರಕನಾಥ್, ರವೀಂದ್ರನಾಥ್, ನಾಗೇಶ್ ಶೆಟ್ಟಿ ಸೇರಿದಂತೆ ಪಟ್ಟಣದ ವಿವಿಧ ಸಮುದಾಯಗಳ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
