ತುಮಕೂರು: ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು, ಸ್ವತಂತ್ರ ಸಂವಿಧಾನ ರಚನೆ ಮಾಡಿಕೊಂಡರೂ ನಗರಗಳು ಮಾತ್ರ ಸ್ವಚ್ಛವಾಗಿಲ್ಲ. ಸಂವಿಧಾನದ ಆಶಯದ ಅಡಿಯಲ್ಲಿ ಕೊಳೆಗೇರಿಗಳು ನವನಗರ ಆಗಬೇಕೆಂದು ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ ಪ್ರಕಾಶ್ ಎಂ. ಶೇಟ್ ತಿಳಿಸಿದರು.
ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣ ಸಮಿತಿ ಹಾಗೂ ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ `ಮನ-ಮನೆಗೂ ಸಂವಿಧಾನ ಕುರಿತು ಸಂವಾದ ಕಾರ್ಯಕ್ರಮ’ವನ್ನು ಸೋಮವಾರ ಉದ್ಘಾಟಿಸಿದರು.
ಕೊಳಗೇರಿ ಎಂಬುದು ಭೌತಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಬದಲಾಗಬೇಕು. ಸಂವಿಧಾನದ ಆಶಯದ ಅಡಿಯಲ್ಲಿ ತಾರತಮ್ಯ ರಹಿತ ಸಮ ಸಮಾಜವನ್ನು ಕಟ್ಟಬೇಕು. ಹಾಗಾಗಿ ಈ ಮನ ಸಂವಿಧಾನ ಕಾರ್ಯಕ್ರಮ ಚಾಲನೆಯಾಗಿದೆ. ಅದರ ಅನುಕೂಲವನ್ನು ಪ್ರತಿಯೊಬ್ಬರು ಪಡೆದುಕೊಂಡು ಸಂವಿಧಾನವನ್ನು ಅರ್ಥೈಸಿಕೊಳ್ಳಬೇಕು. ಹಾಗಾದರೆ ಮಾತ್ರ ಸಂವಿಧಾನಕ್ಕೆ ಸಂವಿಧಾನ ರಚನಕಾರರಿಗೆ ನಾವು ನೀಡುವ ಗೌರವವಾಗುತ್ತದೆ ಎಂದು ತಿಳಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಸಹಪ್ರಾಧ್ಯಾಪಕ ಡಾ. ನಾಗಭೂಷಣ ಬಗ್ಗನಡು, ಭಾರತದಲ್ಲಿ 3600 ಕ್ಕೂ ಅಧಿಕ ಜಾತಿಗಳಿವೆ. ಸಾಕಷ್ಟು ಉಪಪಂಗಡಗಳಿವೆ. ಕರ್ನಾಟಕದಲ್ಲಿ 1500ಕ್ಕೂ ಹೆಚ್ಚು ಜಾತಿಗಳಿವೆ. ಕುಲಕಸುಬಿನ ಆಧಾರದ ಮೇಲೆ ಜಾತಿ ತೀರ್ಮಾನವಾಗುತ್ತದೆ. ಸಂವಿಧಾನ ರಚನೆಯಾಗಿ 75 ವರ್ಷಗಳ ಫಲವಾಗಿ ನಾವಿಂದು ಜಾತಿ ಧರ್ಮದ ಭೇದವಿಲ್ಲದೆ ಸಾಮರಸ್ಯದ ಬದುಕು ನಡೆಸುತ್ತಿದ್ದೇವೆ ಎಂದರು.
ಕರ್ನಾಟಕ ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ನರಸಿಂಹಮೂರ್ತಿ, ಸಂಪನ್ಮೂಲ ವ್ಯಕ್ತಿ ಜನಾರ್ದನ ಕೆಸರಗದ್ದೆ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೆಂಕಟರೆಡ್ಡಿ ರಾಮರೆಡ್ಡಿ, ಸಂವಿಧಾನ ಸ್ನೇಹಿತರ ಬಳಗದ ಪೂರ್ಣ ಮತ್ತು ಅಶ್ವಿನಿ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


