ಊರು: ಸುರಪುರವೆಂಬ ಹಳ್ಳಿ, ಮಿತ್ರರ ಹೆಸರು: ಸೋಮ, ಭೀಮ, ಮತ್ತು ಚಾಮ. ವರ್ಗ: ಸ್ವಲ್ಪ ಮಧ್ಯಮ ವರ್ಗದ ಬಡತನದ ಜೀವನ, ಮಾತಿಗೆ ಸೇರುವ ಜಾಗ: ಊರ ಹೊರಗಿನ ಅರಳಿ ಕಟ್ಟೆ.
ಭೀಮ:- (ಮತ್ತೆ ಅದೇ ಅರಳಿ ಕಟ್ಟೆ ಮೇಲೆ ಕುಳಿತು, ಎಲೆ ಅಡಿಕೆ ಹಾಕಿಕೊಂಡು ಚಾಮನೊಡನೆ ಮಾತನಾಡುತ್ತಾ “ಸಾನೆ ಬಿಸ್ಲು ಅಲ್ವನ್ಲಾ?”, ಅನ್ನುವಾಗ ಅಲ್ಲಿಗೆ ಬರಿಗಾಲಲ್ಲಿ ನಡೆದುಕೊಂಡು ಸೋಮ ಬರುತ್ತಾನೆ, ಅವನನ್ನು ನೋಡಿದ ಭೀಮ ಮುಖ ಬೇರೆ ಕಡೆ ತಿರುಗಿಸಿಕೊಳ್ಳುತ್ತಾನೆ)
ಸೋಮ:- (ಮೆಲು ಧನಿಯಲ್ಲಿ) ಯಾಕಪ್ಪ ಭೀಮು ಮುಖ ಆ ಕಡೆ ತಿರುಗಿಸಿಕೊಳ್ಳುತ್ತೀ ನನ್ನ ನೋಡಿ.
ಭೀಮ:- (ಖೈಡಾಗಿ) ಇನ್ನೇನು ನಡೆ ಮುಡಿ ಹಾಸಿ ಹಾರ ಹಾಕನೆ?
ಸೋಮ:- ಯಾಕಪ್ಪ ಹೀಗೆಲ್ಲಾ ಮಾತನಾಡುತ್ತೀ, ನಾನು ಹಣ ಸಿಗದೆ ಬಹಳ ನೊಂದಿದಿನಪ್ಪಾ…
ಭೀಮ:- ಅವತ್ತೇನೋ ವದರಾಡಿಕೊಂಡು ಹೋದೆ ನಂಗೆ ಸಾನೆ ಜನ ಅಔರೆ ದುಡ್ಡು ಕೊಡಕ್ಕೆ ಅಂತ, ಎಲ್ಲ ಮುಖಕ್ಕೆ ಮಂಗಳಾರತಿ ಎತ್ತಿ ಕಳಿಸವ್ರೆ ನಂಗೆ ಗೊತ್ತಿಲ್ವೇ? ಇವನು ಬಂದ ಗ್ಯಾರಂಟಿ ಗಿರಾಕಿ ಅಂತ ಹಸೆ ಮಣೆ ಮೇಲೆ ಕುಂಡ್ರಿಸಿ ಕೊಡಬೇಕಿತ್ತೇನೋ ದುಡ್ಡ?
ಸೋಮ:- ಇಲ್ಲ ಕಣ್ಳಾ ಎಲ್ಲಾ ತಕ್ಕೆ ಹೋದೆ, ಎಲ್ಲರೂ ಕಿಸೆಯಿಂದ ದುಡ್ಡು ಕೊಡಕ್ಕೆ ತೆಗೆಯರು……?
ಭೀಮ:- ಆಮೆಕೆ ಒಳಿಕ್ಕೆ ಇಕ್ಕಬುಡರೆ?
ಸೋಮ:- ಇಲ್ಲಕಳ್ಳಾ ದುಡ್ಡಿಗೆ ಯಾರು ಗ್ಯಾರಂಟಿ ಅಂತ ಕೇಳರು.
ಭೀಮ:- (ಒಮ್ಮೆ ಹುಬ್ಬು ಮೇಲಕ್ಕೆ ಎತ್ತಿ, ಹುಮ್ಮಸ್ಸಿನಿಂದ ಚಾಮನನ್ನು ಒಮ್ಮೆ ನೋಡಿ, ಸೋಮನಿಗೆ ಹೀಗೆ ಹೇಳುತ್ತಾನೆ) ನೀನು ನನ್ನ ಹೆಸರು ಹೇಳಬೇಕಿತ್ತು ಇನ್ನ ಐನೂರು ಸೇರಿಸಿ ಕೊಡರು ನೋಡು.
ಸೋಮ:- ನಿನ್ನ ಹೆಸರೇ ಹೇಳ್ದೆ ಕಣ್ಲಾ, ಅಂಗಂತಿತಗೇ ದುಡ್ಡ ಒಳಿಕ್ಕೆ ಇಕ್ಕಬುಡರು,
ಭೀಮ:- (ತಕ್ಷಣ ಚಾಮನ ಮುಂದೆ ಅವಮಾನ ಆದಂತೆ ಆಗಿ, ಮುಖ ಮರ್ಯಾದೆ ಉಳಿಸಿಕೊಳ್ಳಲು) ಏ ಅದು ಹಾಗಲ್ಲಕಳ್ಳಾ ನಂದೇನಿದ್ರು ನಿನ್ನಂಗೆ ಐನೂರು ಸಾವಿರ ಗಿರಾಕಿನೇ?, ನಾನೇನಿದ್ದರೂ ಲಕ್ಸ ಲಕ್ಸ ಗಿರಾಕಿ ಕಳಾ ಅದಿಕ್ಕೆ ನಿಂಗೆ ದುಡ್ಡು ಕೊಟ್ಟಿಲ್ಲ ನೋಡು ಮತ್ತೆ.
ಸೋಮ:- (ಭೀಮನ ಮೇಲಿನ ಮಾತು ಕೇಳಿ) ಹೂ ಕಣ್ ಬಿಡ್ಲಾ, ಎಲ್ಲಾರು ನಿನ್ನ ಕೊಂಡಾಡರೆಯ, ಬಾಳ ಗ್ಯಾರಂಟಿ ಗಿರಾಕಿ ಇದ್ದೀ ಅಂತ, ನಾನು ಎಲ್ಲ ನೋಡ್ಕೊಂಡು ಬಂದೆ, ನಿಂಗೆ ಸಾನೆ ಮರ್ಯಾದೆ ಕೊಟ್ರು ಎಲ್ಲ.
ಭೀಮ:- (ಚಾಮನ ಕಡೆ ಕಣ್ಣರಳಿಸಿ ನೋಡಿ) ನೋಡ್ಲಾ ಚಾಮ ನಂಗೆ ಎಷ್ಟು ಮರ್ವಾದೆ ಐತೆ ಊರಲ್ಲಿ ಅಂತ.(ಅಂತ ಮತ್ತೆ ಹುಬ್ಬು ಮೇಲೇರಿಸಿದ)
ಚಾಮ:- ನಂಗೆ ಎಲ್ಲ ಅರ್ಥ ಆಯ್ತು ಬಿಡು. ಮಾಡುದ್ರೆ ನಿನ್ನತ್ರ ಯವಾರ ಮಾಡಬೇಕು.(ಮನಸ್ಸಿನಲ್ಲಿ ಇವನಿಗೆ ಅಪ್ಪಿ ತಪ್ಪಿ ಕೂಡ 10 ರುಪಾಯಿನು ಕೊಡಬಾರದು ಯಾವತ್ತುನು)
ಸೋಮ:- ಮಜ್ಜಿಗೆ ಪಾಕೆಟ್ ಇದ್ರೆ ಕೊಡ್ಲಾ ಸಾನೆ ದಾವ್ರ ಆಯ್ತಾದೆ.
ಭೀಮ:- ಐತೆ, ಆದ್ರೆ ನಿಂಗೆ ಮಾತ್ರ ಕೊಡಕ್ಕಿಲ್ಲ ನೋಡು, ಈ ಚಾಮಂಗೆ ಕೊಡ್ತೀನಿ, ಕೊಳ್ಳ ಚಾಮ (ಎಂದು ಕಿಸೆಯಿಂದ 2 ಮಜ್ಜಿಗೆ ಪಾಕೆಟ್ ತೆಗೆದು ಚಾಮನಿಗೆ 1 ಕೊಟ್ಟು, ಇನ್ನಂದನ್ನು ಓಪೆನ್ ಮಾಡಿ, ಪಾಕೆಟ್ ನಿಂದ ಮಜ್ಜಿಗೆ ಹೀರುತ್ತಾ ಸೋಮನನ್ನು ನೋಡಿ) ಯಾಕ್ಲ ಸೋಮ ಬರಿ ಕಾಲಲ್ಲಿ ಬಂದಿದ್ದಿ ಚಪ್ಪಲಿ ಏನಾತ್ಲಾ???
ಸೋಮ:- ನೋಡು ಹೇಳದು ಮರೆತಿದ್ದೆ, ಬರುವಾಗ ಆಂಜನೇಯ ಸ್ವಾಮಿ ಗುಡಿ ಮುಂದೆ ಚಪ್ಪಲಿ ಬಿಚ್ಚಿ ನಮಸ್ಕಾರ ಮಾಡಿ ಇತ್ತಗೆ ತಿರುಗೋಹೊತ್ತಿಗೆ ಯಾರೊ ಮೆಟ್ಟಿಕೊಂಡು ಹೋಗಿದ್ರು ನೋಡು, ನನ್ನ ಕಿತ್ತೋದ್ ಚಪ್ಪಲಿನೂ ಬಿಡ್ಲಿಲ್ಲ.
ಭೀಮ:- ನೀನು ಒಂಜೊತೆ ಚಪ್ಪಲಿ ತಗಳಕ್ಕೆ ಇನ್ನು ಒಂದು ತಿಂಗಳು ಕೂಲಿ ನಾಲಿ ಮಾಡಬೇಕು ನೋಡು.
ಸೋಮ:- ಏ ಹಾಗೇನಿಲ್ಲ ದುಡ್ಡು ಐತೆ, ಚಪ್ಪಲಿ ಅಂಗಡಿಗೆ ಹೋಗಕ್ಕೆ ಕಾಲು ಸುಡ್ತದೆ, ಬಿಸ್ಲು ಜಾಸ್ತಿ.
ಭೀಮ:- ಲೇ ಚಾಮ ನಿಂದು ಚಪ್ಪಲಿ ಕೊಡ್ಲ ಪಾಪ ಅಂಗಡಿ ಗಟ್ಟ ಹಾಕೊಂಡು ಬರ್ತನೆ, ಆಮೇಲೆ ವಾಪಸ್ಸು ಕೊಡ್ತಾನೆ. ಎಷ್ಟೇ ಅದ್ರು ಫ್ರಂಡು ಅಲ್ವೇ?
ಚಾಮ:- ಏ ಹೋಗಲೇ ನಾನೇನು ಬಿಸ್ಲಲ್ಲಿ ಬರಿಗಾಲಲ್ಲಿ ನಡಕೊಂಡು ಬರನೆ ಕಾಲು ಸುಡುಸ್ಕೊತ್ತಾ ಅಂಗಡಿಗಟ್ಟ, ಬೇಕಿದ್ರೆ ನೀನೆ ಕೊಡು
ಭೀಮ:- ಹೋಗ್ಲಿ ಬಿಡು ಒಂದು ಐಡಿಯ ಮಾಡುವ
ಚಾಮ: – ಏನದು?
ಭೀಮ:- ನಿಂದೊಂದು ಚಪ್ಲಿ ಕೊಡು, ನಂದೊಂದು ಕೊಡ್ತಿನಿ, ಇಬ್ರುದು ಆಕೊಂಡು ಬರ್ತಾನೆ ಅಂಗಡಿಗಟ್ಟ ಎಂಗೆ? (ಮತ್ತೆ ಹುಬ್ಬು ಏರಿಸಿದ)
ಚಾಮ:- ನಾವಿಬ್ರು ಒಂದೊಂದು ಕಾಲಿಗೆ ಚಪ್ಲಿ ಆಕ್ಕೊಂಡು ಇನ್ನೊಂದು ಬರಗಾಲಲ್ಲಿ ಅಂಗಡಿ ಮಟ್ಟ ನಡಕೊಂಡು ಬರೂದೆ!? ಹಹ್ಹಹ್ಹಾ….
ಭೀಮ:- ಏಯ್ ನಗ್ಬೇಡ ಕಣ್ಲಾ, ಫ್ರಂಡು ಅಂದ್ರೆ ಅಷ್ಟು ಮಾಡಕ್ಕಿಲ್ವನ್ಲಾ?
ಚಾಮ:- ಏ ಇವನಾನಲೇ ಇಂಗೆ ಮಾತಾಡ್ತಾನೆ.
ಸೋಮ:- ಲೇ ಭೀಮ ನಿಂಗೆ ತಲೆ –ಗಿಲೆ ಕೆಟ್ಟೈತನ್ಲಾ? ಅಲ್ಲಾ ಕಳ್ಳಾ ಇಬ್ರುದು ಒಂದೊಂದು ಕಲ್ಲರ್ ಐತೆ ಚಪ್ಪಲಿ ಅದೆಂಗಲಾ ಹಾಕೊಂಡು ಬರನೆ ಕಾಲಿಗೆ, ಜನ ಏನಂದಾರ್ಲ?
ಭೀಮ:- ಜನ ಸಾವರಿ ಮಾತಾಡ್ತರೆ ಬಿಡ್ಲಾ ಅದಿಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರ್ದು.
ಸೋಮ:- ಇವ್ರಿಬ್ರು ಒಂದೊಂದು ಚಪ್ಲಿ ಆಕೊಂಡರಂತೆ, ನಾನು ಇವ್ರಿಬ್ರುದು ಒಂದೊಂದು ಚಪ್ಲೀ ಆಕ್ಕೋಬೇಕಂತೆ, ಇದು ಯಾವ ಸೀಮೆ ಐಡಿಯನ್ಲಾ, ಎಲ್ಲಿ ಮಡಿದ್ಲಾ. ಹಹ್ಹಹ್ಹಾ…
ಭೀಮ:- (ಸ್ವಲ್ಪ ಕೋಪ ಬಂದು) ನಾನೇನೋ ನಿಂಗೆ ಸಹಾಯ ಮಾಡುವ ಅಂತ ಅಗಂದೆನಪ್ಪಾ,
ಸೋಮ:- ನಿನ್ನ ಐಡಿಯ ತಗೊಂಡು ಹೋಗ್ಬುಟ್ರೆ ಊರ ನಾಯಿ ಎಲ್ಲ ನಮ್ಮ ಹಿಂದೆ ಇರ್ತಾವೆ.
ಭೀಮ:- ಲೇ ಚಾಮ ಅವಾಗ್ಲೇ ನನ್ನ ಐಡಿಯ ಕೇಳಿ ನಗಾಡ್ದೆ ಅಲ್ವಾ, ನಾಳೆಯಿಂದ ನಿಂಗೆ ಮಜ್ಜಿಗೆ ಪಾಕೆಟ್ ಕಟ್ ಕೊಡಕ್ಕಿಲ್ಲ ನೋಡು.
ಸೋಮ:- ಲೇ ನಾನೇನಾದ್ರು ಮಜ್ಜಿಗೆ ಕೊಡ್ಲಾ ಅಂತ ಕೇಳುದೆನ್ಲಾ, ನೀನಾಗೆ ಕೊಟ್ಟೆ ನಾನು ಕುಡಿದೆ.
ಭೀಮ:- ಲೇ ಸೋಮ ನೀನು ಅಟ್ಟೇ ನಗಾಡ್ದೆ ಅಲ್ವಾನಾಳೆಯಿಂದ ಈ ಅರಳಿ ಕಟ್ಟೆ ತಕ್ಕೆ ಬರಬೇಡ ನನ್ನ ಮಾತಾಡ್ಸಕ್ಕೆ
ಸೋಮ:- ಲೇ…ಅರಳಿ ಕಟ್ಟಿ ನಿಂದನ್ಲಾ ಬರಬೇಡ ಅನ್ನಕ್ಕೆ ನಾನು ಬಂದೇ ಬರ್ತಿನಿ ಏನ್ಲಾ ಮಾಡೀ? ಇವನೇನು ಸ್ವಯಂ ಘೋಷಿತ ಊರಮುಖಂಡ ಹೋಗಲೇ, ಆರ್ಡರ್ ಪಾಸ್ ಮಾಡ್ತಾವ್ನೆ ಇಲ್ಲಿ ಕೂತ್ಕೊಂಡು, ಮಾಡಕ್ಕೆ ಕ್ಯಾಮೆ ಇಲ್ದೋನು.
ಭೀಮ:- ಲೇ ಸೋಮಾ….ನಂಗೆ ಸವಾಲು ಹಾಕ್ತೀ, ಲೇ ಚಾಮ ನಂಗೆ ಎದರು ಮಾತಾಡ್ತೀ ನಾನು ಭೀಮ ಕಂಡ್ರುಲಾ ಭೀಮ, ನಿಮ್ಮಿಬ್ರಿಗೂ ಮಾಡ್ತೀನಿ ಇರಿ (ಎನ್ನುತ್ತಾ ಇಬ್ಬರ ಕತ್ತಿನ ಪಟ್ಟಿ ಹಿಡುದುಕೊಳ್ಳುತ್ತಾನೆ. ಹೀಗೆ ಒಬ್ಬರಿಗೊಬ್ಬರು ಎಳೆದಾಡುತ್ತಾ, ನೂಕಾಡುತ್ತಾ ಒಬ್ಬರಿಗೊಬ್ಬರು ಮೆಟ್ಟಾಡಿಕೊಂಡು ಕೊನೆಗೆ ಅವರಿಬ್ಬರ ಚಪ್ಪಲಿಗಳು ಕಿತ್ತುಹೋಗುತ್ತವೆ)

ಓದುಗರಿಗಾಗಿ ಸಂಪಾದಕರ ನುಡಿ
ಪ್ರಿಯ ಓದುಗರೇ,
“ಅರಳಿ ಕಟ್ಟೆ ಮಿತ್ರರು” ಪ್ರಸಂಗವು ಕೇವಲ ಹಾಸ್ಯಕ್ಕಾಗಿ ಬರೆಯಲಾದ ನಾಟಕವಲ್ಲ; ಅದು ನಮ್ಮ ಸುತ್ತಮುತ್ತಲಿನ ಬದುಕಿನ ನೈಜ ಚಿತ್ರಣ. ಊರ ಅರಳಿ ಕಟ್ಟೆಯಲ್ಲಿ ಕುಳಿತು ನಡೆಯುವ ಸಾಮಾನ್ಯ ಮಾತುಕತೆಗಳಲ್ಲೇ ಎಷ್ಟು ಅಹಂಕಾರ, ಸ್ನೇಹ, ಹೊಗಳಾಟ, ಒಳಗುಟ್ಟು ಹಾಗೂ ವ್ಯಂಗ್ಯ ಅಡಗಿರುತ್ತವೆ ಎಂಬುದನ್ನು ಈ ಕಥೆ ಮನರಂಜನೆಯ ಮೂಲಕ ಮನದಟ್ಟಾಗಿಸುತ್ತದೆ.
ಸೋಮ, ಭೀಮ ಮತ್ತು ಚಾಮ—ಇವರು ಮೂವರು ನಮ್ಮ ಊರಲ್ಲೇ ಕಾಣಸಿಗುವ ವ್ಯಕ್ತಿತ್ವಗಳು. ಕಷ್ಟದಲ್ಲಿರುವ ಸ್ನೇಹಿತನಿಗೆ ಸಹಾಯ ಮಾಡುವ ಮನಸ್ಸಿಗಿಂತ, ತನ್ನ ಹೆಸರು, ಗೌರವ ಮತ್ತು ‘ಗ್ಯಾರಂಟಿ’ ಬಗ್ಗೆ ಹೆಚ್ಚು ಚಿಂತಿಸುವ ಮನೋಭಾವ ಹಾಸ್ಯ ರೂಪದಲ್ಲಿ ತೆರೆದುಕೊಳ್ಳುತ್ತದೆ.
ಈ ಪ್ರಸಂಗವನ್ನು ಓದುವಾಗ ನಗಿರಿ, ಆದರೆ ಅದರಲ್ಲಿ ಅಡಗಿರುವ ಸಂದೇಶವನ್ನೂ ಆಲೋಚಿಸಿ. ನಿಜವಾದ ಸ್ನೇಹ ಅಂದರೆ ಮಾತಿನ ಹೊಗಳಾಟವಲ್ಲ; ಪರಸ್ಪರ ಅರ್ಥೈಸಿಕೊಳ್ಳುವ ಮನಸ್ಸು.
ನಿಮ್ಮ ಅಭಿಪ್ರಾಯಗಳು, ಸಲಹೆಗಳು ಹಾಗೂ ಪ್ರತಿಕ್ರಿಯೆಗಳು ನಮಗೆ ಸದಾ ಪ್ರೇರಣೆ. ಓದಿ, ನಗುತ್ತಿರಿ, ಚಿಂತಿಸಿ—ಮತ್ತಷ್ಟು ಉತ್ತಮ ರಚನೆಗಳಿಗೆ ಲೇಖಕರಾದ ವೇಣುಗೋಪಾಲ್ ರವರಿಗೆ ಬೆಂಬಲ ನೀಡಿ, ಪ್ರೊಸಹಿಸಿ
ಧನ್ಯವಾದಗಳು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


