ಕೆಸ್ತೂರು (ತುಮಕೂರು): ಜಿಲ್ಲೆಯ ಕೋರಾ ಹೋಬಳಿಯ ಕೆಸ್ತೂರು ಗ್ರಾಮದಲ್ಲಿ ಅಡುಗೆ ಅನಿಲ (LPG) ಸಿಲಿಂಡರ್ ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, ಗ್ರಾಹಕರು ಹೈರಾಣಾಗಿದ್ದಾರೆ. ಸಿಲಿಂಡರ್ ಗಾಗಿ ಹತ್ತು ದಿನಗಳಿಂದ ಕಾಯುತ್ತಿದ್ದರೂ ಸಿಗುವ ಭರವಸೆ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಸ್ತೂರಿನ ವಿತರಣಾ ಕೇಂದ್ರದಲ್ಲಿ ಸದ್ಯ 1,400 ಸಿಲಿಂಡರ್ ಗಳಿಗೆ ಬೇಡಿಕೆಯಿದೆ. ಆದರೆ, ಕಂಪನಿಯಿಂದ ಪೂರೈಕೆಯಾಗುತ್ತಿರುವುದು ಕೇವಲ 350 ಸಿಲಿಂಡರ್ ಗಳು ಮಾತ್ರ. ಇದರಿಂದಾಗಿ ಶೇ.75 ರಷ್ಟು ಗ್ರಾಹಕರು ಖಾಲಿ ಕೈಯಲ್ಲಿ ಮರಳುವಂತಾಗಿದೆ.
ಈ ಕೇಂದ್ರವು ಕೋರಾ, ಕಳ್ಳಂಬೆಳ್ಳ, ಬೆಳ್ಳಾವಿ ಹಾಗೂ ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸುಮಾರು 20 ಕಿ.ಮೀ ವ್ಯಾಪ್ತಿಯ ನೂರಾರು ಹಳ್ಳಿಗಳಿಗೆ ಅನಿಲ ಪೂರೈಸುತ್ತದೆ. ಸುಮಾರು 10,400 ನೋಂದಾಯಿತ ಗ್ರಾಹಕರು ಈ ಕೇಂದ್ರವನ್ನು ಅವಲಂಬಿಸಿದ್ದಾರೆ.
ಬೇಡಿಕೆಗೆ ತಕ್ಕಷ್ಟು ಸಿಲಿಂಡರ್ ಪೂರೈಕೆಯಾಗದ ಕಾರಣ ವಿತರಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಸರತಿಯ ಸಾಲಿನಲ್ಲಿ ನಿಂತರೂ ಸಿಲಿಂಡರ್ ಸಿಗದೆ ಜನರು ನಿರಾಶೆಯಿಂದ ವಾಪಸ್ ಹೋಗುತ್ತಿದ್ದಾರೆ.
ಈ ಭಾಗದಲ್ಲಿ ಉಂಟಾಗಿರುವ ಅಡುಗೆ ಅನಿಲದ ಬಿಕ್ಕಟ್ಟನ್ನು ಸರ್ಕಾರ ಕೂಡಲೇ ಗಮನಿಸಬೇಕು ಮತ್ತು ಸರಬರಾಜನ್ನು ದ್ವಿಗುಣಗೊಳಿಸುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


