ಮಧುಗಿರಿ : ಕೈ ಒಳಗಿನ ಪುಸ್ತಕ ವಿಶ್ವವನ್ನೇ ಪರಿಚಯಿಸುತ್ತದೆ. ಹೆತ್ತವರು ಬಾಲ್ಯದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸದಿದ್ದರೆ ಎಷ್ಟೇ ಸಂಪತ್ತಿದ್ದರೂ ಪ್ರಯೋಜನಕ್ಕೆ ಬಾರದು ಎಂದು ಹಿರಿಯ ಸಾಹಿತಿ ಮಲನ ಮೂರ್ತಿ ತಿಳಿಸಿದರು.
ಪಟ್ಟಣದ ಪಶ್ಚಿಮ ಬಡಾವಣೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಚಲ ಕಲ್ಚರಲ್ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಕ್ಕಳ ಪುಸ್ತಕ ದಿನಾಚರಣೆಯನ್ನು ಜಿ.ಪಿ.ರಾಜರತ್ನಂ ರ “ಒಂದು ಎರಡು ಬಾಳೆ ಎಲೆ ಹರಡು, ಮೂರು ನಾಕು ಅನ್ನ ಹಾಕು..” ಎಂಬ ಶಿಶುಗೀತೆ ಹಾಡಿ ಕಾರ್ಯಕ್ರಮ ಉದ್ಘಾಟಿಸಿ ದುರ್ಗಸಿಂಹನ ಪಂಚತಂತ್ರ, ಜನಪದ ಕತೆಗಳ ಮೂಲಕ ಮಕ್ಕಳ ಸಾಹಿತ್ಯ ಮೊದಲುಗೊಂಡು ಅಕ್ಷರದ ಮೂಲಕ ಮನೋವಿಕಾಸ ವಾಗುತ್ತದೆ ಎಂದರು.
ಅಚಲ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಪ್ರೊ. ಡಿ.ಎಸ್.ಮುನೀಂದ್ರ ಕುಮಾರ್ ಮಾತನಾಡಿ, ಪುಸ್ತಕದಿಂದ ಮಾತ್ರ ವಿದ್ಯಾರ್ಥಿಯ ವ್ಯಕ್ತಿತ್ವ ರೂಪುಗೊಳ್ಳುತ್ತದೆಯೇ ಹೊರತು ಮೊಬೈಲ್ ಗಳಿಂದಲ್ಲ ಎಂದರು. ನಾ. ಡಿಸೋಜ, ಟಿ.ಎಸ್.ನಾಗರಾಜ ಶೆಟ್ಟಿ, ಶಿವಲಿಂಗಪ್ಪ ಹಂದಿಹಾಳ್, ಬಿಳಿಗೆರೆ ಕೃಷ್ಣಮೂರ್ತಿ ಸೇರಿದಂತೆ ಹಲವರು ಮಕ್ಕಳ ಸಾಹಿತ್ಯ ಕೃಷಿ ನಡೆಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, ಪುಸ್ತಕಗಳ ಮಹತ್ವ ಮತ್ತು ಪ್ರಯೋಜನ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಶಿಕ್ಷಕರಾದ ರಂಗನಾಥ್, ನಾಗೇಶಯ್ಯ, ಮಂಜುಳಾ ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


