ತುಮಕೂರು: ನಾಳೆಯಿಂದ ಮೇ 10ರವರೆಗೆ ತುಮಕೂರು ಓಪನ್ ಅಂತಾರಾಷ್ಟ್ರೀಯ ಮುಕ್ತ ಮಹಿಳಾ ಟೆನಿಸ್ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ವಿವಿ ಹಿಂಭಾಗದ ಟೆನಿಸ್ ಅಂಕಣದಲ್ಲಿ ಆಯೋಜಿಸಿದ್ದು, ಈಗಾಗಲೇ 7 ದೇಶಗಳ 70 ಮಂದಿ ಮಹಿಳಾ ಟೆನಿಸ್ ಆಟಗಾರ್ತಿಯರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಪಂದ್ಯಾವಳಿ ಭಾಗವಹಿಸಲು ತಯಾರಿ ನಡೆಸುತ್ತಿದ್ದಾರೆ.
ರಾಜಧಾನಿಯೇತರ ನಗರಕ್ಕೆ ಇದೇ ಮೊದಲ ಬಾರಿ ವಿಶ್ವ ದರ್ಜೆಯ ಟೆನಿಸ್ ಪಂದ್ಯಾವಳಿಗೆ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ ಅವರು ಅವಕಾಶ ನೀಡಿದ್ದು, ಇಂತಹ ಅವಕಾಶ ಪಡೆದ ತುಮಕೂರು ಕರ್ನಾಟಕದ ಮೊದಲ ನಗರವೆಂಬ ಗರಿಮೆಗೆ ಪಾತ್ರವಾಗಿದೆ. ತುಮಕೂರು ಜಿಲ್ಲಾಡಳಿತ, ತುಮಕೂರು ಟೆನಿಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಷನ್ ಸಹಕಾರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಕ್ರೀಡಾಕೂಟದ ಯಶಸ್ಸಿಗೆ ಸಕಲ ತಯಾರಿ ನಡೆಸಿದ್ದು, ಪಂದ್ಯಾವಳಿಯ ಸಿಂಗಲ್ಸ್, ಡಬಲ್ಸ್ ನಲ್ಲಿ ಗೆಲ್ಲುವ ಆಟಗಾರ್ತಿಯರಿಗೆ ನೀಡುವ ಬಹುಮಾನದ ಮೊತ್ತ 30 ಸಾವಿರ ಡಾಲರ್ ಅನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಮ್ಮ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದಲೇ ಪ್ರಾಯೋಜಕತ್ವ ನೀಡಿರುವುದು ಗಮನಸೆಳೆದಿದೆ.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶುಕ್ರವಾರ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿ, ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಪಂದ್ಯಾವಳಿ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಉಚಿತ ಟಿಕೆಟ್ ಪಡೆಯಿರಿ:
ಮೇ 3 ರಿಂದ 10ರವರೆಗೆ ನಡೆಯುವ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಪಂದ್ಯಾವಳಿ ವೀಕ್ಷಿಸುವ ಆಸಕ್ತರು tumkuropenitfw35.com ವೆಬ್ ಸೈಟ್ ಗೆ ಲಾಗಿನ್ ಆಗಿ ಉಚಿತ ಪ್ರವೇಶ ಟಿಕೆಟ್ ಪಡೆಯಬಹುದು. ಬೇರೆಡೆಯಲ್ಲಿ ಇಂತಹ ಪಂದ್ಯಾವಳಿಗೆ ಶುಲ್ಕವಿರುತ್ತದೆ, ಆದರೆ ತುಮಕೂರಿನಲ್ಲಿ ಉಚಿತ ಪ್ರವೇಶದ ಅವಕಾಶ ಕಲ್ಪಿಸಿದೆ ಎಂದು ಡಿಸಿ ಶುಭ ಕಲ್ಯಾಣ್ ತಿಳಿಸಿದರು.
ಮಹಿಳಾ ಟೆನಿಸ್ ಚಾಂಪಿಯನ್ ಶಿಪ್:
ದರ್ಜೆಯ ಮಹಾತ್ಮ ಗಾಂಧಿ ಕ್ರೀಡಾಂಗಣವಾದ ಬಳಿಕ ರಾಜ್ಯ, ರಾಷ್ಟ್ರ ಮಟ್ಟದ ಹಲವು ಪಂದ್ಯಾವಳಿಗಳು ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ಪ್ರಧಾನ ಸಹಕಾರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಟೈರ್-2 ಸಿಟಿಯಾದ ತುಮಕೂರು ಕ್ರೀಡೆಯಲ್ಲೂ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಎಲ್ಲಾ ಇಲಾಖೆಗಳು, ಕ್ರೀಡಾ ಪ್ರೋತ್ಸಾಹಕರ ಸಹಕಾರದೊಂದಿಗೆ ಅಂತರಾಷ್ಟ್ರೀಯ ಮಟ್ಟದ ಈ ಪಂದ್ಯಾವಳಿಯನ್ನು ಆಯೋಜಿಸಿದ್ದು, ಮೇ 3 ರಂದು ಆಯ್ಕೆ ಪಂದ್ಯಾವಳಿಯೊಂದಿಗೆ ಚಾಂಪಿಯನ್ ಶಿಪ್ ಶುಭಾರಂಭಗೊಳ್ಳಲಿದೆ. ಮೇ 5ರಂದು ಬೆಳಿಗ್ಗೆ 9.30ಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು, ಆಮಂತ್ರಿತರ ಸಮಕ್ಷಮ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಚಾಲನೆ ನೀಡುವರು ಎಂದರು.
ಈ ವೇಳೆ ಪಾಲಿಕೆ ಆಯುಕ್ತೆ ಶುಭ, ಉಪವಿಭಾಗಾಧಿಕಾರಿ ನಾಹಿದಾ ಜಂಜಂ, ತಹಸೀಲ್ದಾರ್ ರಾಜೇಶ್ವರಿ, ಟುಡಾ ಆಯುಕ್ತ ಉಮೇಶಚಂದ್ರ, ಜಿಲ್ಲಾ ಬಿಸಿಎಂ ಅಧಿಕಾರಿ ಸೋನಿಯಾ ವರ್ಣೇಕರ್, ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ಪಾಲಿಕೆ ಕಾರ್ಯಪಾಲಕ ಅಭಿಯಂತರರಾದ ವಿನಯ್, ಸಂದೀಪ್, ನಿರ್ಮಿತಿ ರಾಜಶೇಖರ್ ಸೇರಿದಂತೆ ಟೆನಿಸ್ ಅಸೋಸಿಯೇಷನ್ ಪದಾಧಿಕಾರಿಗಳು, ಪ್ರತಿನಿಧಿಗಳು ಹಾಜರಿದ್ದು ಪಂದ್ಯಾವಳಿ ಯಶಸ್ಸಿಗೆ ಪೂರಕವಾದ ಅಂಶಗಳ ಬಗ್ಗೆ ಚರ್ಚಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


