ಮಧುಗಿರಿ: ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜನಪರವಾದ ಯೋಜನೆಗಳನ್ನು ಜಾರಿ ಮಾಡುತ್ತಿರುವುದು ಮತ ಗಳಿಕೆಗೆ ಅಲ್ಲ, ಬಡ ಜನರ ಏಳಿಗೆಗಾಗಿ ಎಂದು ಮಾಜಿ ಸಚಿವ, ಶಾಸಕರಾದ ಕೆ.ಎನ್. ರಾಜಣ್ಣ ತಿಳಿಸಿದರು. ಅವರು ಮಿಡಿಗೇಶಿ ಹೋಬಳಿಯ ಬ್ರಹ್ಮದೇವರಹಳ್ಳಿ (ಕತ್ತಿರಾಜನಹಳ್ಳಿ) ಗ್ರಾಮದಲ್ಲಿ ಶನಿವಾರ ಕೆಪಿಟಿಸಿಎಲ್ ವತಿಯಿಂದ ಹಮ್ಮಿಕೊಂಡಿದ್ದ 25 ಕೋಟಿ ರೂ. ವೆಚ್ಚದ 66/11 ಕೆ.ವಿ ವಿದ್ಯುತ್ ಉಪಸ್ಥಾವರ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಭಾಗದ ರೈತರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕೆ 24X7 ನಿರಂತರ ವಿದ್ಯುತ್ ನೀಡಲು ವಿದ್ಯುತ್ ಉಪಸ್ಥಾವರ ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ಗರಣಿ ಗ್ರಾಮದಲ್ಲಿ ವಿದ್ಯುತ್ ಉಪಸ್ಥಾವರ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಈ ಹಿಂದೆ ನಾನು ಬೆಳ್ಳಾವಿ ಶಾಸಕನಾಗಿದ್ದಾಗ 5 ಕೋಟಿ ರೂ. ವೆಚ್ಚದಲ್ಲಿ ಪುಲುಮಘಟ್ಟ ಗ್ರಾಮದಲ್ಲಿ ವಿದ್ಯುತ್ ಉಪಸ್ಥಾವರ ನಿರ್ಮಿಸಲಾಗಿತ್ತು. ಈಗ ಈ ಭಾಗದ ಹಳ್ಳಿಗಳ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ಸ್ಥಳ ಗುರುತಿಸಿ ಅದನ್ನು ಕೆ.ಪಿ.ಟಿ.ಸಿ.ಎಲ್ ಗೆ ಹಸ್ತಾಂತರಿಸಿ 25 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಈ ಭಾಗದ 8 ಹಳ್ಳಿಗಳಾದ ಬ್ರಹ್ಮದೇವರಹಳ್ಳಿ, ಜಿ.ಡಿ.ಪಾಳ್ಯ, ಹೊಸಹಳ್ಳಿ, ಕಡಪ್ಪನಪಾಳ್ಯ, ಕತ್ತಿರಾಜನಹಳ್ಳಿ, ಚಿನ್ನೇನಹಳ್ಳಿ, ವೀರಚಿನ್ನೇನಹಳ್ಳಿ, ದ್ಯಾಸಗೊಂಡನಹಳ್ಳಿ ಗ್ರಾಮಗಳ ರೈತರು ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ 3 ಫೇಸ್ ವಿದ್ಯುತ್ 7 ತಾಸು ಪೂರೈಕೆಯಾಗಲಿದೆ. 9 ತಿಂಗಳ ಒಳಗೆ ಪೂರ್ಣಗೊಳಿಸಿ ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಗ್ರಾಮೀಣ ಭಾಗದ ಜನತೆ ಬಹಳಷ್ಟು ಮುಗ್ಧರು,ಶ್ರಮ ಜೀವಿಗಳಾಗಿದ್ದು, ಅವರಿಗೆ ಸುಳ್ಳು ಮೋಸ ಗೊತ್ತಿರುವುದಿಲ್ಲ. ಅವರನ್ನು ಕಂಡರೆ ನನಗೆ ವಿಶೇಷ ಪ್ರೀತಿ ಇದೆ. ಗ್ರಾಮದಲ್ಲಿ ದ್ವೇಷ ಅಸೂಯೆಗೆ ಆಸ್ಪದ ಕೊಡಬೇಡಿ. ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸಿ. ಸಣ್ಣ ಸಣ್ಣ ವಿಚಾರಕ್ಕೆ ಅಸಮಾಧಾನ ಬೇಡ. ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ, ಶಾಲೆಗಳಿಗೆ ಗೈರಾಗದಂತೆ ಪೋಷಕರು ಕ್ರಮ ವಹಿಸಿ, ಗ್ರಾಮದ ದೇವಸ್ಥಾನಕ್ಕೆ ಹಣ ಕೇಳಿದ್ದು, 5 ಲಕ್ಷ ರೂ. ನೆರವು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಿಡಿಗೇಶಿ ಹೋಬಳಿಯ ಪಡಸಾಲಹಟ್ಟಿ, ಗಿರಿಯಮ್ಮನಪಾಳ್ಯ, ಲಕ್ಷ್ಮೀಹಟ್ಟಿ, ಆರ್. ಗೊಲ್ಲರಹಟ್ಟಿ, ಜಿ. ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಸುಮಾರು 396 ಜನರಿಗೆ ಮನೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ಗೌಡ, ಕೆಪಿಟಿಸಿಎಲ್ ಇಇ ಮೆಹಮೂದ್ ಸೈಯದ್, ಬೆಸ್ಕಾಂ ಇಇ ಜಗದೀಶ್, ಎಇಇ ಮಾರ್ಕಣ್ಣನಾಯಕ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಸಿದ್ದಾಪುರ ರಂಗಾಶ್ಯಾಮಣ್ಣ, ಗುತ್ತಿಗೆದಾರ ಮಹಾಲಿಂಗಪ್ಪ ಎಚ್.ಕೆ, ಯೋಗೇಶ್ ಕೃಷ್ಣ, ಮಂಜುನಾಥ್ ಎಚ್.ಎಂ, ಬೆಸ್ಕಾಂನ ಪಿ.ರವೀಂದ್ರ, ಯರ್ರಪ್ಪ, ಚಂದ್ರಶೇಖರ್, ತಿಮ್ಮಪ್ಪ, ತಾ.ಪಂ ಎಡಿ ಧನಂಜಯ್, ರಘುಪತಿ ಇತರರಿದ್ದರು.
ಬಡವರ ಮತ್ತು ರೈತರ ಪರ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ನಿಮ್ಮ ನಿರೀಕ್ಷೆಯಂತೆ ಎಲ್ಲ ಸವಲತ್ತುಗಳನ್ನು ನಿಮ್ಮ ಮನೆ ಬಾಗಿಲಿಗೇ ತಲುಪಿಸಲಾಗುತ್ತಿದೆ. ಸಿದ್ದರಾಮಯ್ಯನವರು ನೀಡಿದ ಅನ್ನಭಾಗ್ಯ ಯೋಜನೆಯಿಂದಾಗಿ ಇಂದು ಬಡ ಜನತೆ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಸುಳ್ಳು ಹೇಳುವ ಗಿರಾಕಿಗಳನ್ನು ನಂಬಬೇಡಿ. ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವವರಿಗೆ ನಿಮ್ಮ ಆಶೀರ್ವಾದ ಇರಲಿ.
— ಕೆ.ಎನ್.ರಾಜಣ್ಣ ಶಾಸಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


