ಸರಗೂರು: ಹಿರಿಯ ದಲಿತ ನಾಯಕ ಕೆ.ಎಚ್. ಮುನಿಯಪ್ಪ ಅವರಿಗೆ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಎಚ್.ಡಿ. ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಧರ ಮಹಾಸಭಾ ತಾಲೂಕು ಅಧ್ಯಕ್ಷ ಕುರ್ಣೇಗಾಲ ಬೆಟ್ಟಸ್ವಾಮಿ ಹೈಕಮಾಂಡ್ ಅನ್ನು ಬಲವಾಗಿ ಒತ್ತಾಯಿಸಿದ್ದಾರೆ.
ಸಾಮಾಜಿಕ ನ್ಯಾಯದ ಭಾಗವಾಗಿ ಹಾಗೂ ಹಿರಿಯ ದಲಿತ ನಾಯಕರಾಗಿರುವ ಮುನಿಯಪ್ಪ ಅವರಿಗೆ ಈ ಉನ್ನತ ಹುದ್ದೆ ನೀಡಬೇಕು ಎಂಬುದು ಮುಖಂಡರ ಪ್ರಮುಖ ಬೇಡಿಕೆಯಾಗಿದೆ. ಮುನಿಯಪ್ಪ ಅವರು ದಲಿತ (ಎಡ) ಸಮುದಾಯದ ಪ್ರಮುಖ ನಾಯಕರಾಗಿದ್ದು, ಏಳು ಬಾರಿ ಸಂಸದರಾಗಿ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಮನ್ನಣೆ ನೀಡಿ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಸರ್ಕಾರ ಮತ್ತು ಪಕ್ಷದಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಎಚ್.ಡಿ. ಕೋಟೆ, ಸರಗೂರು ಹಾಗೂ ಸುತ್ತಮುತ್ತಲಿನ ಬ್ಲಾಕ್ ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಆಗ್ರಹಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರ ಪರವಾಗಿಯೂ ಧ್ವನಿ ಎತ್ತಿರುವ ಬೆಟ್ಟಸ್ವಾಮಿ ಅವರು, “ಅನಿಲ್ ಚಿಕ್ಕಮಾದು ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಅನುಭವ ಹೊಂದಿದ್ದಾರೆ. ಜಿಲ್ಲೆ ಮತ್ತು ತಾಲೂಕಿನ ಎಲ್ಲ ವಿಚಾರಗಳನ್ನು ಅರಿತುಕೊಂಡು, ಎಲ್ಲಾ ಸಮುದಾಯಗಳ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯನ್ನು ಗಳಿಸಿದ್ದಾರೆ. ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಾ ಬರುತ್ತಿರುವ ಅವರಿಗೆ ಸಚಿವ ಸ್ಥಾನ ನೀಡಿದರೆ ಯಾವುದೇ ತಪ್ಪಿಲ್ಲ” ಎಂದು ಪತ್ರಿಕೆಯ ಮೂಲಕ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದಲೂ (2023) ಹಾಗೂ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲೂ ಈ ಬೇಡಿಕೆಯು ಮುನ್ನೆಲೆಗೆ ಬರುತ್ತಲೇ ಇದೆ. ಪಕ್ಷಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಈ ಇಬ್ಬರು ನಾಯಕರಿಗೆ ಅರ್ಹ ಸ್ಥಾನಮಾನ ಸಿಗಬೇಕು ಎಂದು ಮುಖಂಡರು ಸರ್ಕಾರ ಹಾಗೂ ಹೈಕಮಾಂಡ್ಗೆ ಜಂಟಿ ಮನವಿ ಮಾಡಿದ್ದಾರೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


