ಮಧುಗಿರಿ: ದೇಶದ ಒಟ್ಟಾರೆ ಅಭಿವೃದ್ಧಿಯಲ್ಲಿ ಸಾರಿಗೆ ಮತ್ತು ತಂತ್ರಜ್ಞಾನ ವಲಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪುರುಷರು ಕಡ್ಡಾಯವಾಗಿ ಟಿಕೆಟ್ ಪಡೆದು ಪ್ರಯಾಣಿಸಬೇಕು ಎಂದು ರಾಜ್ಯ ಭರವಸೆ ಕಮಿಟಿ ಅಧ್ಯಕ್ಷರು ಹಾಗೂ ಮಧುಗಿರಿ ಶಾಸಕರಾದ ಕೆ.ಎನ್. ರಾಜಣ್ಣ ಮನವಿ ಮಾಡಿದರು.
ಪಟ್ಟಣದ ಶಿರಾಗೇಟ್ ಬಳಿ ನೂತನ ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿ ಹಾಗೂ ಹೊಸ ನಗರ ಸಾರಿಗೆ ಬಸ್ ಮಾರ್ಗಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಮಧುಗಿರಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ಅತ್ಯಾಧುನಿಕ ‘ಹೈಟೆಕ್’ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ನಗರ ಸಾರಿಗೆ ಬಸ್ ಮಾರ್ಗಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಅವರು ಭರವಸೆ ನೀಡಿದರು.
“ಮುಂದಿನ ದಿನಗಳಲ್ಲಿ ಕೆಎಸ್ ಆರ್ ಟಿಸಿ ಡಿಪೋ ಬಳಿ ಮೀಸಲಿಡಲಾಗಿರುವ ಎರಡೂವರೆ ಎಕರೆ ಜಮೀನಿನಲ್ಲಿ ವಿಭಾಗೀಯ ಕಚೇರಿ ಮತ್ತು ಉಗ್ರಾಣಕ್ಕಾಗಿ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಿ ಭೂಮಿ ಪೂಜೆ ನೆರವೇರಿಸಲಾಗುವುದು” ಎಂದು ರಾಜಣ್ಣ ತಿಳಿಸಿದರು. ಜಿಲ್ಲಾ ಕೇಂದ್ರವಾದ ತುಮಕೂರು ಬಿಟ್ಟರೆ ಬೇರೆಲ್ಲೂ ನಗರ ಸಾರಿಗೆ ಆರಂಭವಾಗಿರಲಿಲ್ಲ. ಆದರೆ, ಇದೀಗ ನಮ್ಮ ಮಧುಗಿರಿ ಪಟ್ಟಣದಲ್ಲಿ ಮೊದಲ ಬಾರಿಗೆ ಇದನ್ನು ಆರಂಭಿಸಲಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ಇದೇ ಸಂದರ್ಭದಲ್ಲಿ ವಿಭಾಗೀಯ ಕೇಂದ್ರ ಹಾಗೂ ನಗರ ಸಾರಿಗೆ ಮಂಜೂರು ಮಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್ಆರ್ಟಿಸಿ ಅಧ್ಯಕ್ಷ ಶ್ರೀನಿವಾಸ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು.
ತಾಲೂಕಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆಗಳು, ಸರ್ಕಾರಿ ಡಿಪ್ಲೋಮಾ, ಐಟಿಐ ಹಾಗೂ ಜಿಟಿಟಿಸಿ ಕಾಲೇಜುಗಳನ್ನು ತೆರೆಯಲಾಗುತ್ತಿದೆ. ವೀರಣ್ಣ ತಾಂಡ ಬಳಿ ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರ ಮಕ್ಕಳಿಗಾಗಿ ಪ್ರತ್ಯೇಕ ವಸತಿ ಶಾಲೆಯನ್ನು ಆರಂಭಿಸಲಾಗುವುದು. ಶಾಲಾ-ಕಾಲೇಜುಗಳ ಸಮಯಕ್ಕೆ ಸರಿಯಾಗಿ ಬಸ್ಗಳು ಸಂಚರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಇದೇ ವೇಳೆ ತಾಲೂಕಿನ ರೈಲ್ವೆ ಯೋಜನೆಗಳ ಬಗ್ಗೆ ಮಾತನಾಡಿದ ಅವರು, “ರೈಲ್ವೆ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣ ಪೂರ್ಣಗೊಂಡಿದೆ. ಕಾಮಗಾರಿ ಆರಂಭಿಸುವ ಕುರಿತು ಕೇಂದ್ರ ರೈಲ್ವೆ ಸಚಿವರು ಹಾಗೂ ಜಿಲ್ಲಾ ಸಂಸದರಾದ ವಿ.ಸೋಮಣ್ಣನವರ ಬಳಿ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ರೈಲ್ವೆ ಕೆಲಸಗಳು ಚಾಲನೆ ಪಡೆಯಲಿವೆ” ಎಂದರು.
ಸ್ವತಃ ಟಿಕೆಟ್ ಪಡೆದು ಪ್ರಯಾಣಿಸಿದ ಶಾಸಕರು; ಅಭಿಮಾನಿಯಿಂದ ಈಡುಗಾಯಿ
ಮಧುಗಿರಿಯಿಂದ ಬೆಲ್ಲದಮಡಗು ಗೇಟ್, ಕೋಡಗದಾಲ (2 ಬಸ್), ಗಂಜಲಗುಂಟೆಯಿಂದ ಸರ್ಕಾರಿ ಪಾಲಿಟೆಕ್ನಿಕ್ (2 ಬಸ್), ದಾಸರಹಳ್ಳಿ-ಮಧುಗಿರಿ-ಅವರಗಲ್ಲು ಮಾರ್ಗದ ಒಟ್ಟು ನಗರ ಸಾರಿಗೆ ಬಸ್ಗಳಿಗೆ ಚಾಲನೆ ನೀಡಲಾಯಿತು. ಉದ್ಘಾಟನೆ ಬಳಿಕ ಸರ್ಕಾರಿ ಪಾಲಿಟೆಕ್ನಿಕ್ ಮಾರ್ಗದ ಬಸ್ನಲ್ಲಿ ಶಾಸಕ ಕೆ.ಎನ್. ರಾಜಣ್ಣ ಅವರು ಸ್ವತಃ ಟಿಕೆಟ್ ಪಡೆದು ಪ್ರಯಾಣಿಸುವ ಮೂಲಕ ಸಾರ್ವಜನಿಕರಿಗೆ ಮಾದರಿಯಾದರು. ಈ ಸಂದರ್ಭದಲ್ಲಿ ಶಾಸಕರ ಅಭಿಮಾನಿಯೊಬ್ಬರು ಬಸ್ ನಿಲ್ಲಿಸಿ, ಈಡುಗಾಯಿ (ತೆಂಗಿನಕಾಯಿ) ಹೊಡೆದು ಶಾಸಕರ ಜನಪರ ಕಾರ್ಯಕ್ಕೆ ಶುಭ ಕೋರಿದರು.
“ಬಹಳ ಹಿಂದಿನಿಂದಲೂ ಮಧುಗಿರಿ ತಾಲೂಕು ಉಪವಿಭಾಗ ಕೇಂದ್ರವಾಗಿ ವಿಸ್ತರಣೆಗೊಂಡಿದೆ. ನೂತನ ಕಚೇರಿಯ ವ್ಯಾಪ್ತಿಗೆ ಕೊರಟಗೆರೆ, ಪಾವಗಡ ಹಾಗೂ ಮಧುಗಿರಿ ತಾಲೂಕುಗಳು ಒಳಪಡಲಿವೆ. ಈ ವಿಭಾಗೀಯ ಕಚೇರಿ ಮತ್ತು ನಗರ ಸಾರಿಗೆ ಆರಂಭವಾಗಿರುವುದು ಇತಿಹಾಸದ ಪುಟಗಳಲ್ಲಿ ಉಳಿಯುವಂತಹ ವಿಷಯ. ಸದ್ಯಕ್ಕೆ ನಗರ ಸಾರಿಗೆ ಯೋಜನೆಯಡಿ ಪಟ್ಟಣದ ಸುತ್ತಮುತ್ತಲ 6 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿರಂತರವಾಗಿ ಐದು ಬಸ್ಗಳ ಸೇವೆಯನ್ನು ಕಲ್ಪಿಸಲಾಗಿದೆ.”
— ಕೆ.ಎನ್. ರಾಜಣ್ಣ, ಶಾಸಕರು
ಈ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ವಿಭಾಗೀಯ ಸಂಚಲನಾಧಿಕಾರಿ ಬಿ.ಮಂಜುನಾಥ್, ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ, ಡಿಪೋ ಮ್ಯಾನೇಜರ್ ಎಚ್.ಸಿ.ಕಾಂತರಾಜು, ಇ.ಓ.ಉತ್ತಮ್, ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕರಾದ ಬಿ.ನಾಗೇಶ್ಬಾಬು, ನಾರಾಯಣಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಯ್ಯ, ಆದಿನಾರಾಯಣ ರೆಡ್ಡಿ, ಸಿದ್ದಾಪುರ ರಂಗಶಾಮಣ್ಣ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ತುಂಗೋಟಿ ರಾಮಣ್ಣ, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ ನಂಜುಂಡಯ್ಯ, ಲಾಲಾಪೇಟೆ ಮಂಜುನಾಥ್, ಕೆ.ಪ್ರಕಾಶ್, ಅಯೂಬ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ಎಸ್ಬಿಟಿ ರಾಮು, ಟಿ.ಪಿ ಮಂಜುನಾಥ್, ಲಕ್ಷ್ಮೀ ನಾರಾಯನ್, ಪುರಸಭೆ ಮಾಜಿ ಸದಸ್ಯರುಗಳು, ಕೆ.ಎಸ್.ಆರ್.ಟಿ.ಸಿ ನಿಗಮದ ಸಿಬ್ಬಂದಿ, ಪ್ರಮುಖ ನಾಯಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


