ತುಮಕೂರು: ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತ ಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಮುತ್ತು ಬಂದಿದೆ ಕೇರಿಗೆ ಸಂತಕವಿ ಕನಕದಾಸರ ಕುರಿತು ಸಂಗೀತ ನೃತ್ಯ ರೂಪಕ ಕಾರ್ಯಕ್ರಮವನ್ನು ಜೂ.15 ಸೋಮವಾರ ಸಂಜೆ 7 ಗಂಟೆಗೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂತ ಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರವು ಒಂದು ವಿಶೇಷ ನೃತ್ಯ ರೂಪಕವನ್ನು ಸಿದ್ಧಪಡಿಸಿದ್ದು, ಕನಕದಾಸರ ಮಹತ್ವದ ಕೀರ್ತನೆ ಮತ್ತು ಕಾವ್ಯ ಭಾಗವನ್ನು ಆಯ್ದು ಅವರ ತತ್ತ್ವಾದರ್ಶಗಳನ್ನು ಜನತೆಗೆ ತಲುಪಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಸ್ನೇಹಾ ಕಪ್ಪಣ್ಣ ಅವರ ನೃತ್ಯ ಸಂಯೋಜನೆ, ಅಷ್ಟೇ ಪ್ರಸಿದ್ಧರಾಗಿರುವ ನೃತ್ಯ ರೂಪಕದ ಸಂಗೀತ ತಜ್ಞ ಡಾ.ಪ್ರವೀಣ್ ಡಿ ರಾವ್ ಅವರ ನೃತ್ಯ ಸಂಯೋಜನೆ ಒಳಗೊಂಡ ನೃತ್ಯರೂಪಕ ಇದಾಗಿದೆ.
ಹದಿನೈದು ಹದಿನಾರೂ ಶತಮಾನದ ನಡುವೆ ಬಾಳಿದ ಸಂತಕವಿ ಕನಕದಾಸರು ಸಾಮಾಜಿಕ ಕಾಳಜಿ ಮತ್ತು ಧಾರ್ಮಿಕ ಚಿಂತನೆಗಳ ಮೂಲಕ ಮಹತ್ವವನ್ನು ಸಾಧಿಸಿದ ಅನುಭವಿ ತಪಸ್ವಿ. ಸಮಾಜದಲ್ಲಿರುವ ಜಾತಿ, ಕುಲ, ವರ್ಗ, ವರ್ಣ, ಮೌಢ್ಯ, ತಾರತಮ್ಯ ನಿರ್ಮೂಲನೆ ಬಗ್ಗೆ ಬೋಧಿಸಿದ ದಾರ್ಶನಿಕ. ಆದರ್ಶ ಸಮಾಜಕ್ಕೆ ಅಗತ್ಯವಾದ ಸಾಮರಸ್ಯ, ಸಹಬಾಳ್ವೆ, ಸಹಿಷ್ಣುತೆ, ಸೋದರತ್ವವನ್ನು ತನ್ನ ನಡೆ ಮತ್ತು ನುಡಿಗಳ ಮೂಲಕ ಪ್ರತಿಪಾದಿಸಿದ ಕನಕದಾಸರು ತಮ್ಮ 04 ಕಾವ್ಯಗಳ ಮೂಲಕ 350ಕ್ಕೂ ಹೆಚ್ಚು ಕೀರ್ತನೆಗಳ ಮೂಲಕ ಕನ್ನಡ ಸಾಂಸ್ಕೃತಿಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪೂರ್ವ ಮತ್ತು ಅನನ್ಯ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


