ಕೊರಟಗೆರೆಯಲ್ಲಿ ಹಬ್ಬದ ಸಡಗರ: ಕಡ್ಲೆಚಿಕ್ಕಿ ಹಾರಕ್ಕೆ ಮನಸೋತ ಉಪಮುಖ್ಯಮಂತ್ರಿ | ಎತ್ತಿನಹೊಳೆ ಯೋಜನೆ ರೈತರಿಗೆ ವರದಾನ
ಕೊರಟಗೆರೆ: “ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹ ಸಚಿವ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ನೀಡಿದ ಕೊರಟಗೆರೆ ಕ್ಷೇತ್ರದ ಮತದಾರರ ಋಣ ನನ್ನ ಮೇಲಿದೆ. ೨೦೨೮ಕ್ಕೆ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕೊರಟಗೆರೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತೇನೆ. ನನ್ನ ಆರೋಗ್ಯಕ್ಕಿಂತ ನಿಮ್ಮ ಅಭಿಮಾನವೇ ನನಗೆ ದೊಡ್ಡದು” ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.
ಇಲ್ಲಿನ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬ್ಲಾಕ್ ಕಾಂಗ್ರೆಸ್, ಮಹಿಳಾ, ಯುವ ಕಾಂಗ್ರೆಸ್ ಮತ್ತು ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಎತ್ತಿನಹೊಳೆ ಯೋಜನೆಯನ್ನು ನಾವು ಮಾಡೇ ಮಾಡುತ್ತೇವೆ. ರೈತರ ನೀರಾವರಿ ಸಮಸ್ಯೆಯನ್ನು ನಿವಾರಿಸುವುದು ನಮ್ಮ ಸಂಕಲ್ಪ. ಬೈರಗೊಂಡ್ಲು ಬಳಿ ವಿರೋಧ ಪಕ್ಷದವರ ಮಾತು ಕೇಳಿ ರೈತರು ನೀರಾವರಿ ಯೋಜನೆಗೆ ಅಡ್ಡಿಪಡಿಸಿದರು. ಇದರಿಂದಾಗಿ ೨,೫೦೦ ಎಕರೆ ವಿಸ್ತೀರ್ಣದ ಜಲಾಶಯದ ಯೋಜನೆ ಈಗ ನಮ್ಮ ಕೈತಪ್ಪಿದೆ. ಪ್ರಸ್ತುತ ವಡೇರಹಳ್ಳಿ ಬಳಿ ಕೇವಲ ೫೦೦ ಎಕರೆ ಜಮೀನು ನೀಡಿದರೆ ಅನುಕೂಲವಾಗುತ್ತದೆ. ಆದರೆ ಈಗ ಅದಕ್ಕೂ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ವಿನಯವಾಗಿ, ಗೌರವದಿಂದ ಕೈಮುಗಿದು ಕೇಳುತ್ತೇನೆ, ದಯವಿಟ್ಟು ಜಮೀನು ನೀಡಲು ವಿರೋಧ ಮಾಡಬೇಡಿ” ಎಂದು ರೈತರಲ್ಲಿ ಮನವಿ ಮಾಡಿದರು.
ತುಮಕೂರು ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ, “ರಾಜ್ಯದಲ್ಲಿ ಎರಡು ಬಾರಿ ಡಿಸಿಎಂ ಆದ ಕೀರ್ತಿ ಡಾ.ಜಿ.ಪರಮೇಶ್ವರ ಅವರದ್ದು. ಎರಡು ಬಾರಿ ಅವರಿಗೆ ಸಿಎಂ ಹುದ್ದೆ ಕೈತಪ್ಪಿದ್ದು, ೨೦೨೮ರಲ್ಲಿ ಆ ಕನಸು ನನಸಾಗಲಿ. ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ ಎಂಬ ಜೋಡೆತ್ತುಗಳು ಮತ್ತೆ ಅಧಿಕಾರಕ್ಕೆ ಬರಲಿ. ಎತ್ತಿನಹೊಳೆ ಮತ್ತು ರಾಯದುರ್ಗ ರೈಲ್ವೆ ಯೋಜನೆಗಳು ತ್ವರಿತವಾಗಿ ಪೂರ್ಣಗೊಂಡರೆ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ” ಎಂದರು.
ಪಾವಗಡ ಶಾಸಕ ವೆಂಕಟೇಶ್ ಮಾತನಾಡಿ, “ಡಾ.ಜಿ.ಪರಮೇಶ್ವರ ಅವರು ೨೦೧೩ರಲ್ಲೇ ಕೊರಟಗೆರೆಯಲ್ಲಿ ಗೆದ್ದಿದ್ದರೆ ಸಿಎಂ ಆಗುತ್ತಿದ್ದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಅವರು ಇರುವ ತನಕ ನಾನು ಅವರ ಮನೆ ಮಗನಾಗಿ ಇರುತ್ತೇನೆ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ, ಮಾಜಿ ಶಾಸಕ ಗಂಗಹನುಮಯ್ಯ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ ನಾರಾಯಣ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಕಾಂಗ್ರೆಸ್ ಮಹಿಳಾಧ್ಯಕ್ಷೆ ಜಯಮ್ಮ, ಯುವಾಧ್ಯಕ್ಷ ಬೈರೇಶ್, ಮುಖಂಡರಾದ ಪ್ರೇಮಾ ಮಹಾಲಿಂಗಪ್ಪ, ಬಲರಾಮಯ್ಯ, ಕೆ.ಆರ್.ಓಬಳರಾಜು, ಎಲ್.ರಾಜಣ್ಣ, ವಿನಯ್, ಅರವಿಂದ್, ರಘುವೀರ್, ಕೆಎಲ್ಎಂ ಮಂಜು, ಅಮರ, ಮಹೇಶ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕೊರಟಗೆರೆಯಲ್ಲಿ ಮೆರವಣಿಗೆ ಸಂಭ್ರಮ!:
ಕೊರಟಗೆರೆ ಪಟ್ಟಣದ ಊರ್ಡಿಗೆರೆ ವೃತ್ತದಿಂದ ಸರ್ಕಾರಿ ಬಸ್ ನಿಲ್ದಾಣದ ಮೂಲಕ ಜೂನಿಯರ್ ಕಾಲೇಜು ಮೈದಾನದವರೆಗೆ ತೆರೆದ ವಾಹನದಲ್ಲಿ ಡಾ.ಜಿ.ಪರಮೇಶ್ವರ ಅವರ ಬೃಹತ್ ಮೆರವಣಿಗೆ ನಡೆಸಲಾಯಿತು. ಈ ವೇಳೆ ಕಲಾತಂಡಗಳಾದ ಕೋಲಾಟ, ಡೊಳ್ಳು ಕುಣಿತ, ಯಕ್ಷಗಾನ, ಕಾಡಿನ ನೃತ್ಯ ಹಾಗೂ ವೀರಗಾಸೆ ಸಾರ್ವಜನಿಕರ ಗಮನ ಸೆಳೆದವು. ರಸ್ತೆಯುದ್ದಕ್ಕೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಗಮನ ಸೆಳೆದ ಬೃಹತ್ ಕಡ್ಲೆಚಿಕ್ಕಿ ಹಾರ:
ಬೃಹತ್ ಮೆರವಣಿಗೆಯ ವೇಳೆ ಪುರಸಭೆ ಮುಂಭಾಗ ಡಿಸಿಎಂ ಅವರಿಗೆ ಮುಖಂಡರಾದ ಮಂಜು ಕೆಎಲ್ಎಂ ಅವರು ಹಾಕಿದ ಬೃಹತ್ ಕಡ್ಲೆಚಿಕ್ಕಿ ಹಾರವು ಎಲ್ಲರ ಗಮನ ಸೆಳೆಯಿತು. ಇದರೊಂದಿಗೆ ಸರ್ಕಾರಿ ಬಸ್ ನಿಲ್ದಾಣ, ಊರ್ಡಿಗೆರೆ ವೃತ್ತ, ಬೋವಿ ಕಾಲೋನಿ ಮತ್ತು ಕಾಲೇಜು ಮೈದಾನದ ಬಳಿ ಅಭಿಮಾನಿಗಳು ಜೆಸಿಬಿ ಕ್ರೇನ್ ಮೂಲಕ ಸೇಬು, ಪೇಡಾ ಹಾಗೂ ಮೊಸಂಬಿಯ ಬೃಹತ್ ಹಾರಗಳನ್ನು ಹಾಕುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನ ಮೆರೆದರು.
ಧೋ ಎಂದು ಸುರಿದ ಮಳೆ:
ಕೊರಟಗೆರೆ ಪಟ್ಟಣ ಹಾಗೂ ಗ್ರಾಮೀಣ ಭಾಗದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಬೆಳಿಗ್ಗೆ ೧೦ ಗಂಟೆಯಿಂದಲೇ ಸಾಗರೋಪಾದಿಯಲ್ಲಿ ಆಗಮಿಸಿದ್ದರು. ಸಮಾರಂಭ ಆರಂಭಕ್ಕೂ ಮುನ್ನ ಮಳೆರಾಯನ ಆಗಮನವಾಗಿ ಕಾರ್ಯಕರ್ತರಲ್ಲಿ ಇನ್ನಷ್ಟು ಉತ್ಸಾಹ ತುಂಬಿತು. ವೇದಿಕೆ ಕಾರ್ಯಕ್ರಮ ವಿಳಂಬವಾದರೂ ಸಹ ಅಭಿಮಾನಿಗಳ ಹುಮ್ಮಸ್ಸು ಕುಗ್ಗಿರಲಿಲ್ಲ.
ಕೊರಟಗೆರೆ ಪಟ್ಟಣದ ಕಾಂಗ್ರೆಸ್ ಮುಖಂಡ ಮಹಾಲಿಂಗಪ್ಪ ಅವರ ತೋಟದ ಮನೆಯಲ್ಲಿ ೧ ಸಾವಿರ ಮುಖಂಡರಿಗೆ ವಿಶೇಷ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಹಾಗೆಯೇ, ವೇದಿಕೆಯ ಮುಂಭಾಗದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥ ನಾರಾಯಣ್ ನೇತೃತ್ವದಲ್ಲಿ ಆಗಮಿಸಿದ್ದ ಸುಮಾರು ೨೦ ಸಾವಿರಕ್ಕೂ ಅಧಿಕ ಕಾರ್ಯಕರ್ತರಿಗೆ ಪ್ರೀತಿಯಿಂದ ಓಬ್ಬಟ್ಟು (ಹೋಳಿಗೆ) ಊಟದ ವ್ಯವಸ್ಥೆ ಮಾಡಲಾಗಿತ್ತು.
“ಕಾಂಗ್ರೆಸ್ ಪಕ್ಷದ ರಾಜಕೀಯ ಚಾಣಕ್ಯ ಡಾ.ಜಿ.ಪರಮೇಶ್ವರ ಅವರು ೨೦೨೮ಕ್ಕೆ ರಾಜ್ಯದ ಸಿಎಂ ಆಗುವುದು ಖಚಿತ. ೪೦ ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದ ಸ್ನೇಹಜೀವಿ ಜನನಾಯಕ ಇವರು. ಕೊರಟಗೆರೆ ಕ್ಷೇತ್ರದಲ್ಲಿ ಅವರು ಮಾಡಿರುವ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗಳು ಶಾಶ್ವತವಾಗಿ ಉಳಿಯಲಿವೆ.”
— ಅರಕೆರೆ ಶಂಕರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕೊರಟಗೆರೆ
“ರಾಜ್ಯದ ಪ್ರತಿ ಕ್ಷೇತ್ರದ ಅಧಿಕಾರಿ ವರ್ಗವು ಕೇಂದ್ರ ಸ್ಥಾನದಲ್ಲೇ ಇದ್ದು ಕೆಲಸ ಮಾಡಬೇಕಿದೆ. ಇದರಿಂದ ಜನಪರ ಆಡಳಿತ ಇನ್ನಷ್ಟು ಚುರುಕಾಗಲಿದೆ. ಕಾಂಗ್ರೆಸ್ ಪಕ್ಷದ ಅಧಿಕಾರ ಈಗ ಕಾರ್ಯಕರ್ತರ ಕೈಯಲ್ಲಿದೆ. ಸಿಎಂ ಡಿ.ಕೆ.ಶಿವಕುಮಾರ್, ಡಿಸಿಎಂ ನಾನು ಮತ್ತು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸೇರಿ ೨೦೨೮ಕ್ಕೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಸಿದ್ದರಾಮಯ್ಯ ಅವರ ಜನಪರ ಆಡಳಿತ ಹೀಗೆಯೇ ಮುಂದುವರೆಯಲಿದೆ.”
— ಡಾ.ಜಿ.ಪರಮೇಶ್ವರ, ಉಪ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


