ಕೊರಟಗೆರೆ: ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದ ಮಾದರಿಯು ಇದೀಗ ಮೊದಲ ಬಾರಿಗೆ ಕೊರಟಗೆರೆ ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ಸಮುದಾಯ ಭವನದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಿದ್ದು, ಭಕ್ತರು ಹಾಗೂ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬೀದರ ಗ್ರಾಮದ ಶ್ರೀ ವಿನಯ್ ರಾಮ್ ಅವರ ಕನಸಿನ ಯೋಜನೆಯಾದ ಈ ಅಯೋಧ್ಯೆ ಶ್ರೀರಾಮ ಮಂದಿರದ ಮಾದರಿಯು ಈಗಾಗಲೇ ರಾಷ್ಟ್ರ ಹಾಗೂ ಕರ್ನಾಟಕದ 19 ಜಿಲ್ಲೆಗಳು ಸೇರಿದಂತೆ 106 ಕಡೆಗಳಲ್ಲಿ ಪ್ರದರ್ಶನಗೊಂಡು ಗಮನ ಸೆಳೆದಿದೆ. ಇದೀಗ ಕೊರಟಗೆರೆ ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ 107ನೇ ಪ್ರದರ್ಶನ ನಡೆಯುತ್ತಿದ್ದು, ಈಗಾಗಲೇ ಸಾವಿರಾರು ಜನರು ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಶಾಲಾ–ಕಾಲೇಜು ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಜನರು ಕುಟುಂಬ ಸಮೇತರಾಗಿ ಆಗಮಿಸಿ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿರೂಪವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಭಕ್ತಿಭಾವ ಹಾಗೂ ದೇಶಭಕ್ತಿಯ ಸಂದೇಶ ಸಾರುವ ಈ ಪ್ರದರ್ಶನ ಜನರಲ್ಲಿ ವಿಶೇಷ ಆಕರ್ಷಣೆ ಮೂಡಿಸಿದೆ.
ಯಾವುದೇ ವೈಯಕ್ತಿಕ ಅಪೇಕ್ಷೆ ಅಥವಾ ಲಾಭದ ನಿರೀಕ್ಷೆಯಿಲ್ಲದೆ, ಭೀಷ್ಮ ಪ್ರತಿಜ್ಞೆಯಂತೆ ಶ್ರೀರಾಮನ ಮಹಿಮೆಯನ್ನು ಮನೆಮನೆಗೆ ತಲುಪಿಸುವ ಸಂಕಲ್ಪದೊಂದಿಗೆ ಶ್ರೀವಿನಯ್ ರಾಮ್ ಅವರು ಈ ಮಾದರಿಯನ್ನು ನಿರ್ಮಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶಿಸುತ್ತಿರುವುದು ವಿಶೇಷವಾಗಿದೆ.
ಅಯೋಧ್ಯೆಯ ಶ್ರೀರಾಮ ಮಂದಿರದ ವೈಭವವನ್ನು ಜನರಿಗೆ ಸಮೀಪದಿಂದ ಪರಿಚಯಿಸುವ ಈ ವಿಶಿಷ್ಟ ಪ್ರದರ್ಶನ ಕೊರಟಗೆರೆಯಲ್ಲಿ ಭಕ್ತರ ಮನಗೆದ್ದಿದ್ದು, ದಿನದಿಂದ ದಿನಕ್ಕೆ ನೋಡುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಇಲ್ಲಿನ ವ್ಯವಸ್ಥಾಪಕರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


