ತುಮಕೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಕಳ್ಳತನ, ಮಾದಕ ವಸ್ತುಗಳ ಮಾರಾಟ, ಕಚ್ಚಾ ಬಾಂಬ್ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಅಶೋಕ್ ಕೆ.ವಿ ಹೇಳಿದರು. ನಗರದ ಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರು ಸುಮಾರು 22 ದೇವಸ್ಥಾನ ಕಳ್ಳತನ ಪ್ರಕರಣಗಳನ್ನು ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿ, ಕಳ್ಳತನ, ಮಾದಕ ವಸ್ತುಗಳ ಮಾರಾಟ, ಕಚ್ಚಾ ಬಾಂಬ್ ಪ್ರಕರಣಗಳ ಮಾಹಿತಿ ನೀಡಿದರು.
ಪ್ರಕರಣ 1: 22 ದೇವಸ್ಥಾನ ಕಳತನ ಪ್ರಕರಣಗಳ ಭೇದಿಸಿದ ಪೊಲೀಸರು: ದರೋಡೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ 6 ಮಂದಿ ಆರೋಪಿಗಳನ್ನು ತುರುವೇಕೆರೆ ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಹಲವು ಜಿಲ್ಲೆಗಳಲ್ಲಿ ನಡೆದ 22 ದೇವಸ್ಥಾನ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಜೂ. 19ರಂದು ತಾಲೂಕು ಸಮೀಪದ ಜೋಡುಗಟ್ಟೆ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತುಮಕೂರು, ಚನ್ನರಾಯಪಟ್ಟಣ, ನಾಗಮಂಗಲ ಸೇರಿದಂತೆ ವಿವಿಧ ದೇವಸ್ಥಾನಗಳ ಬೀಗ ಮುರಿದು ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಹುಂಡಿಯ ಹಣ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ 86 ಗ್ರಾಂ ಚಿನ್ನಾಭರಣ, ಮೂರು ಬೈಕ್ಗಳು, ಒಂದು ಆಟೋ, ಎರಡು ಗ್ಯಾಸ್ ಸಿಲಿಂಡರ್ಗಳು ಸೇರಿದಂತೆ 14.19 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಿಂದ ತುರುವೇಕೆರೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯ 22 ದೇವಸ್ಥಾನ ಕಳತನ ಪ್ರಕರಣಗಳು ಹಾಗೂ ಬೆಣಚಿನಕೆರೆ ಗ್ರಾಮದ ಶಾಲೆಯ ಕಳ್ಳತನ ಪ್ರಕರಣವೂ ಪತ್ತೆಯಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಈ ಪ್ರಕರಣವನ್ನು ಭೇದಿಸುವಲ್ಲಿ ಸಿಪಿಐ ಲೋಹಿತ್ ಬಿ. ಎಸ್, ಪಿಎಸ್ ಐ ಮೂರ್ತಿ ಟಿ., ಮೂರ್ತಿ ಕೆ.ವಿ., ಎಎಸ್ಐ ನಯಾಜ್ ಅಹಮದ್ ಹಾಗೂ ಸಿಬ್ಬಂದಿಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖಾ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ..
ಪ್ರಕರಣ 2: ಕಚ್ಚಾ ಬಾಂಬ್ ಮಾರಾಟಗಾರ ಬಂಧನ: ತುಮಕೂರು ಜಿಲ್ಲೆಯ ಸಿರಾ ಸಮೀಪ ಉಬರ್ ಕಾರಿನಲ್ಲಿ ನಡೆದ ಕಚ್ಚಾ ಬಾಂಬ್ ಸ್ಫೋಟ ಪ್ರಕರಣವನ್ನು ಸಿರಾ ಉಪವಿಭಾಗದ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಜೂ. 27ರಂದು ಆರೋಪಿ ನಾಗೇಂದ್ರ ಬೆಂಗಳೂರಿನ ಸಿದ್ದಾಪುರದಲ್ಲಿ ಮಹಿಳೆಯನ್ನು ಅಪಹರಿಸಿ ಉಬರ್ ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ, ಚಾಲಕನ ಜಾಗರೂಕತೆಯಿಂದ ಮೊದಲ ಬಾಂಬ್ ಅನ್ನು ಕಾರಿನಿಂದ ಹೊರಗೆ ಎಸೆಯಲಾಯಿತು. ಬಳಿಕ ಮಹಿಳೆ ತಪ್ಪಿಸಿಕೊಂಡರೆ, ನಾಗೇಂದ್ರ ಮತ್ತೊಂದು ಬಾಂಬ್ ಸ್ಫೋಟಿಸಿಕೊಂಡು ಕಾರಿನಲ್ಲೇ ಮೃತಪಟ್ಟಿದ್ದ.
ತನಿಖೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದ ಜಾರ್ಜ್ ನಿಕೋವ್ ಫರ್ನಾಂಡಿಸ್ ಎಂಬಾತ ನಾಗೇಂದ್ರನಿಗೆ ಕಚ್ಚಾ ಬಾಂಬ್ ಮಾರಾಟ ಮಾಡಿದ್ದಾನೆ ಎಂಬುದು ಪತ್ತೆಯಾಗಿದೆ. ವಿಶೇಷ ತನಿಖಾ ತಂಡದ ಕಾರ್ಯಾಚರಣೆಯಲ್ಲಿ ಜಾರ್ಜ್ ಇತರ ಕೆಲವರಿಗೂ ಕಚ್ಚಾ ಬಾಂಬ್ ಪೂರೈಕೆ ಮಾಡಿರುವ ಮಾಹಿತಿ ಲಭ್ಯವಾಗಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಜಾರ್ಜ್ನನ್ನು ಚಿಕಿತ್ಸೆ ಬಳಿಕ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣವನ್ನು ಭೇದಿಸುವಲ್ಲಿ ಡಿವೈಎಸ್ ಪಿ ಬಿ.ಕೆ ಶೇಖರ್, ಸಿಪಿಐ ಡಿ.ಜಿ ಶ್ರೀನಿವಾಸ್, ಇನ್ಸ್ಪೆಕ್ಟರ್ ಪ್ರವೀಣ ಕುಮಾರ್ ಪಿಎಸ್ಐ ಭೈರೇಗೌಡ, ಹರೀಶ್, ತೀರ್ಥೇಶ್, ರೇಣುಕಾ ಹಾಗೂ ಸಿಬ್ಬಂದಿಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಭೇದಿಸಿದ ವಿಶೇಷ ತನಿಖಾ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.
ಪ್ರಕರಣ 3: 8.385 ಕೆಜಿ ಗಾಂಜಾ ಜಪ್ತಿ, ಇಬ್ಬರ ಬಂಧನ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿ, 8 ಕೆಜಿ 385 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ಜಪ್ತಿಯಾದ ಮಾದಕ ವಸ್ತುವಿನ ಅಂದಾಜು ಮೌಲ್ಯ ₹4.20 ಲಕ್ಷ ಎಂದು ಎಸ್. ಪಿ ಅಶೋಕ್ ಕೆ. ವಿ ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೋತಿತೋಪು ಸರ್ಕಲ್ ಸಮೀಪದ ಚೈತನ್ಯ ಟೆಕ್ನೋ ಶಾಲೆ ಹಿಂಭಾಗದ ಅಮಾನಿಕೆರೆ ಮಣ್ಣಿನ ರಸ್ತೆಯಲ್ಲಿ ದಾಳಿ ನಡೆಸಿದ ಪೊಲೀಸರು, ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ವಶಕ್ಕೆ ಪಡೆದರು. ಬಂಧಿತರನ್ನು ಆದಿತ್ಯ ಆರ್ (23) ಮತ್ತು ಪ್ರತಾಪ್ ಜಿ (33) ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಗಾಂಜಾ ಎಲ್ಲಿಂದ ತರಲಾಗುತ್ತಿತ್ತು ಹಾಗೂ ಯಾರಿಗೆ ಪೂರೈಕೆ ಮಾಡಲಾಗುತ್ತಿತ್ತು ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಆರೋಪಿಗಳ ಪತ್ತೆ ತಂಡ ಮತ್ತು ತನಿಖಾ ತಂಡವನ್ನು ಅಭಿನಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


