ತುಮಕೂರು: ಗ್ರಾಮಗಳಲ್ಲಿ ಸಮಾನತೆಯ ಆಡಳಿತ, ಶಾಂತಿ ಕಾಪಾಡುವ ಹೊಣೆ ನೂತನ ಪಂಚಾಯತ್ ಆಡಳಿತಾಧಿಕಾರಿಗಳ ಮೇಲಿದ್ದು, ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೂಚಿಸಿದರು.
ಅವರು ಜಿಪಂ ವತಿಯಿಂದ ಹಮ್ಮಿಕೊಂಡಿರುವ ಗ್ರಾಮ ಪಂಚಾಯತಿಗಳಿಗೆ ನೂತನವಾಗಿ ನೇಮಕಗೊಂಡಿರುವ ಆಡಳಿತಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಪಂಚಾಯಿತಿಗಳಿಗೆ ಶೀಘ್ರ ಚುನಾವಣೆ ನೆರವೇರಿಸುವುದಾಗಿ ಸಿಎಂ ಸಹ ತಿಳಿಸಿದ್ದು, ಅಲ್ಲಿಯವರೆಗೆ ಗ್ರಾಮ ಪಂಚಾಯಿತಿಗಳ ಆಡಳಿತವನ್ನು ಪಾರದರ್ಶಕ, ಸಮಾನವಾಗಿ ನಡೆಸಿಕೊಂಡು ಹೋಗುವ ಮಹತ್ವದ ಹೊಣೆ ಆಡಳಿತಾಧಿಕಾರಿಗಳು, ಪಿಡಿಒ, ಕಾರ್ಯದರ್ಶಿಗಳ ಮೇಲಿರುತ್ತದೆ. ಹಳ್ಳಿಗಳಲ್ಲಿ ಕುಡಿಯುವ ನೀರು ಸೇರಿದಂತೆ ನಾಗರಿಕ ಸೌಲಭ್ಯಗಳ ಬಳಕೆ ವಿಷಯವಾಗಿ ತಾರತಮ್ಯ, ಜನಾಂಗೀಯ ಸಂಘರ್ಷಗಳು ನಡೆಯುತ್ತಿರುತ್ತವೆ. ಅಸಮಾನತೆ ಆಚರಣೆ, ಶಾಂತಿಗೆ ಭಂಗ ತರುವ ಘಟನೆಗಳಿಗೆ ಆಸ್ಪದ ಕೊಡದಂತೆ ಎಚ್ಚರಿಕೆ ವಹಿಸಬೇಕೆಂದು ನಿರ್ದೇಶಿಸಿದರು.
ಗ್ರಾಮ ಪಂಚಾಯತಿ ಪರಿಕಲ್ಪನೆ ಮಹಾತ್ಮ ಗಾಂಧೀಜಿ ಅವರದ್ದಾಗಿದ್ದು, ನಮ್ಮ ಆಡಳಿತವನ್ನು ನಾವೇ ಮಾಡಿಕೊಳ್ಳಬೇಕು ಎಂಬುದು ಈ ಸರಳ ತತ್ವದ ಉದ್ದೇಶ. ಸ್ವಾತಂತ್ರ್ಯ ನಂತರ ಸಂವಿಧಾನದಲ್ಲಿ ಅಳವಡಿಸಿಕೊಂಡು ಅಧಿಕಾರ ವಿಕೇಂದ್ರೀಕರಣಗೊಳಿಸಲಾಯಿತಾದರೂ ಹಣದ ವಿಕೇಂದ್ರೀಕರಣ ಎಂಬ ಆರೋಪಕ್ಕೆ ಗುರಿಯಾಗಿತ್ತು. ನಂತರದಲ್ಲಿ ಧನಾತ್ಮಕ ಬದಲಾವಣೆಯೊಂದಿಗೆ 3 ಹಂತದ ಪಂಚಾಯತ್ ವ್ಯವಸ್ಥೆ ಇಡೀ ಜಗತ್ತಿಗೆ ಮಾದರಿಯಾಯಿತು. 1993-94ರಲ್ಲಿ ಪಂಚಾಯತ್ರಾಜ್ ಕಾಯ್ದೆಗೆ ಸಾಂವಿಧಾನಿಕ ತಿದ್ದುಪಡಿ ತಂದು ಅತ್ಯಂತ ಪರಿಣಾಮಕಾರಿಯಾಗಿ ದೇಶಾದ್ಯಂತ ಅನುಷ್ಠಾನಗೊಳಿಸಲಾಯಿತು. ಕರ್ನಾಟಕದ ಪಂಚಾಯತ್ರಾಜ್ ಗ್ರಾಮಸ್ವರಾಜ್ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿಯಾಗಿ ಹೆಸರು ಪಡೆದಿದ್ದು, ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ ಪಂಚಾಯಿತಿಗಳಲ್ಲಿ ತಾಂತ್ರಿಕ ವ್ಯವಸ್ಥೆ ಅಳವಡಿಸಿಕೊಳ್ಳಲು ಕಾರಣಕರ್ತರಾದರು. ಪಂಚಾಯತ್ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳುವುದರಿಂದ ಕಾರ್ಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಜೊತೆಗೆ ಪರಿಣಾಮಕಾರಿ ಆಡಳಿತ ನೀಡಬಹುದಾಗಿದೆ ಎಂದರು.
ತುಮಕೂರು ಮಾದರಿ: ಭಾಷಣದ ಆರಂಭದಲ್ಲಿ ವಿರೋಧ ಭುವನ ಸಾವಿಗೆ ಶೋಕ ವ್ಯಕ್ತಪಡಿಸಿದ ಸಚಿವರು, ಜಿಲ್ಲೆಯ ಜಿಲ್ಲಾಧಿಕಾರಿಗಳು, ಸಿಇಒ ಅವರನ್ನೊಳಗೊಂಡಂತೆ ಜಿಲ್ಲೆಯ ಬಹುತೇಕ ಅಧಿಕಾರಿಗಳು ಶ್ರಮದಿಂದಾಗಿ ತುಮಕೂರು ಜಿಲ್ಲೆ ಆಡಳಿತ ವಿಚಾರದಲ್ಲಿ ಮಾದರಿಯೆನಿಸಿದೆ. ತುಮಕೂರಿನಲ್ಲಿ ಆಯೋಜಿಸಿದ್ದ ಸರ್ಕಾರದ ಸಾಧನಾ ಸಮಾವೇಶವನ್ನು ರಾಜ್ಯಾದ್ಯಂತ ಅನುಸರಿಸುವಂತೆ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಜಿಲ್ಲೆಗೂ ಪತ್ರ ಬರೆದಿದ್ದರು. ಇದರ ಕ್ರೆಡಿಟ್ ಪ್ರತಿಯೊಬ್ಬ ಸಿಬ್ಬಂದಿಗೂ ಸಲ್ಲಬೇಕು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ ನುಡಿದರು.
ಸವಲತ್ತು ವಿತರಣೆ: ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಪಂಚಾಯಿತಿ ಸಿಬ್ಬಂದಿಗೆ ಖಾಯಾತಿ ಪತ್ರ, ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಯೋಜನೆಯಡಿ ಕಣ್ಣಿನ ದೋಷವುಳ್ಳ ಮಕ್ಕಳು ಹಿರಿಯ ನಾಗರಿಕರಿಗೆ ಕನ್ನಡಕ, ಶ್ರವಣ ಸಾಧನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ಮೀಡಿಯಾ ಕಿಟ್ ಅನ್ನು ಡಿಸಿಎಂ ಡಾ.ಜಿ.ಪರಮೇಶ್ವರ, ಶಾಸಕ ಟಿ.ಬಿ.ಜಯಚಂದ್ರ ಇತರ ಗಣ್ಯರು ವಿತರಿಸಿದರು.
ವಿಳಂಬವಿಲ್ಲದೆ ಲಾಗಿನ್ ಅಪ್ರೂವಲ್ ಮಾಡಿ:
ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಮಾತನಾಡಿ ಇ ಆಡಳಿತ ವ್ಯವಸ್ಥೆಯಲ್ಲಿ ಲಾಗಿನ್ ಅಪ್ರೂವಲ್ಗೆ ಕಾಲಮಿತಿ ಹಾಕಿಕೊಳ್ಳದಿರುವುದು ಸಾರ್ವಜನಿಕ ಕಡತ ವಿಲೇವಾರಿಗೆ ವಿಳಂಬವಾಗುತ್ತಿದೆ ಎಂದ ಅವರು, ಕೆಳಹಂತದಿಂದ ಮೇಲಿನ ಹಂತದವರೆಗೆ ಲಾಗಿನ್ ಅಪ್ರೂವಲ್ ತಡೆರಹಿತವಾಗಿ ನಡೆಯಬೇಕು. ಪಾರದರ್ಶಕ ಆಡಳಿತ ದೃಷ್ಟಿಯಿಂದ ಇಂತಹ ತರಬೇತಿಗಳು ಪೂರಕವಾಗುತ್ತವೆ ಎಂದರು.
ಸುಗಮ ಆಡಳಿತಕ್ಕಾಗಿ ತರಬೇತಿ: ಜಿಪಂ ಸಿಇಒ
ಜಿಪಂ ಸಿಇಒ ಬಿ.ವಿ. ಅಶ್ವಿಜ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸದ್ಯ 3 ಹಂತದ ಪಂಚಾಯತ್ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದಿರುವುದರಿಂದ ಗ್ರಾಮ ಪಂಚಾಯಿತಿಗಳಿಗೆ ಹೊಸದಾಗಿ ನೇಮಕಗೊಂಡಿರುವ ಆಡಳಿತಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಸುಗಮ ಆಡಳಿತ ನಿರ್ವಹಣೆಗೆ ಅಗತ್ಯ ತರಬೇತಿ ಅಗತ್ಯವಿತ್ತು. ಇದನ್ನು ಮನಗಂಡು 3 ದಿನಗಳ ತರಬೇತಿ ಹಮ್ಮಿಕೊಂಡು ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ಪಂಚಾಯತ್ ಅಧಿಕಾರಿ ಸಿಬ್ಬಂದಿಗೆ ತರಬೇತಿ ಕೊಡಿಸಲಾಗುತ್ತಿದೆ. ಈ ತರಬೇತಿಯೊಟ್ಟಿಗೆ ಅನುಕಂಪದ ಆಧಾರದಲ್ಲಿ ಹುದ್ದೆ ಪಡೆದವರು, ಗ್ರಾಮಸೇವಕರು, ಜವಾನರು, ಕರವಸೂಲಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದವರಿಗೆ ಸೇವಾಕಾಯಮಾತಿ ಮಾಡಿ ಪ್ರಮಾಣಪತ್ರ ವಿತರಿಸುತ್ತಿದ್ದು, ಅವರಿಗೆಲ್ಲ ಉದ್ಯೋಗ ಭದ್ರತೆ ಸಿಕ್ಕಂತಾಗಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ.ಎಂ.ಟಿ.ಸಿ. ಉಪಾಧ್ಯಕ್ಷ ನಿಕೇತ್ ರಾಜ್ ಎಂ., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್, ಮಹಾಲೇಖಪಾಲ ಕಚೇರಿಯ ಸಂಪನ್ಮೂಲ ವ್ಯಕ್ತಿ ರಂಜನ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ, ಈಶ್ವರಪ್ಪ, ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಮುಖ್ಯ ಯೋಜನಾಧಿಕಾರಿ ಸಣ್ಣಮುಸಿಯಪ್ಪ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


