ತುಮಕೂರು: ನಗರದ ಹಾಸ್ಟೆಲ್, ಮೈದಾನ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ನೀಟ್ ಹಗರಹಣ ವಿರುದ್ಧ ಸುದೀರ್ಘಕಾಲ ನಡೆದ, ವಿದ್ಯಾರ್ಥಿ ಹೋರಾಟದ ಐತಿಹಾಸಿಕ ವಿಜಯವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸಿದ ಬೃಹತ್ ಹೋರಾಟದ ಫಲವಾಗಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ವಿದ್ಯಾರ್ಥಿಗಳು ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ಆಗ್ರಹಿಸಿದ್ದರು! ಈ ಐತಿಹಾಸಿಕ ವಿಜಯವನ್ನು ದೇಶದಾದ್ಯಂತ ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ಸಚಿವರ ರಾಜೀನಾಮೆಯ ಮಾರನೇ ದಿನವೇ ಕೇಂದ್ರ ಸರ್ಕಾರವು ಸುಧಾರಣೆಯ ಹೆಸರಿನಲ್ಲಿ ಮತ್ತೊಂದು ಹೊಸ ತಂತ್ರವನ್ನು ಹೆಣೆದಿದೆ. ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರವು ಟಾಸ್ಕ್ ಫೋರ್ಸ್ ಒಂದನ್ನು ರಚಿಸಿದ್ದು, ದಕ್ಷಿಣ ಭಾರತದ ಕಾರ್ಪೊರೇಟ್ ದೈತ್ಯ ನಂದನ್ ನೀಲಖೇಣಿ ಅವರನ್ನು ಇದರ ಅಧ್ಯಕ್ಷರನ್ನಾಗಿ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರವು ವಿದ್ಯಾರ್ಥಿ ಸಮುದಾಯಕ್ಕೆ ಮತ್ತೆ ದ್ರೋಹ ಬಗೆದಿದೆ.! ಸರ್ಕಾರದ ಈ ನಡೆಯನ್ನು ಎಐಡಿಎಸ್ಓ ಅತ್ಯುಗ್ರ ಶಬ್ದಗಳಲ್ಲಿ ಖಂಡಿಸುತ್ತದೆ.
ಯಾವುದೋ ಒಂದು ಸುಧಾರಣಾ ಸಮಿತಿಯನ್ನು ನೇಮಿಸುವುದು ಅಥವಾ ಸಣ್ಣಪುಟ್ಟ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡುವುದು ಪರಿಹಾರವಲ್ಲ ಎಂದು ಎಐಡಿಎಸ್ಒ ಸ್ಪಷ್ಟವಾಗಿ ತಿಳಿಸುತ್ತದೆ. ಎನ್ಟಿಎ (NTA) ಸಂಸ್ಥೆಯು ವಿದ್ಯಾರ್ಥಿಗಳ ಹಿತಕಾಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹ ಸಮಿತಿಯ ಶಿಫಾರಸ್ಸುಗಳ ಮೂಲಕ ಯಾವುದೇ ಸುಧಾರಣೆ ಸಾಧ್ಯವಿಲ್ಲ. ಈಗಾಗಲೇ ಹಿಂದೆ ರಚಿಸಲ್ಪಟ್ಟ ಸಮಿತಿಗಳಿಂದ ಯಾವುದೇ ಬದಲಾವಣೆಯಾಗಿಲ್ಲ. ಸರ್ಕಾರ ಈ ಕಣ್ಣೊರೆಸುವ ತಂತ್ರವನ್ನು ಬಿಟ್ಟು ಈ ಎನ್ ಟಿ ಎ ಸಂಸ್ಥೆಯನ್ನೇ ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಒಂದು ವೇಳೆ ಸರ್ಕಾರಕ್ಕೆ ನಿಜವಾಗಿಯೂ ಸುಧಾರಣೆ ತರುವ ಇಚ್ಛೆ ಇದ್ದಿದ್ದರೆ, ಕಾರ್ಪೊರೇಟ್ ಐಟಿ ಕಾರ್ಯನಿರ್ವಾಹಕರ ಬದಲು ಶಿಕ್ಷಣ ತಜ್ಞರು, ಮನಶಾಸ್ತ್ರಜ್ಞರು ಮತ್ತು ಬೋಧನಾ ತಜ್ಞರು ನೇಮಿಸುತ್ತಿತ್ತು. ಪರೀಕ್ಷಾ ಸುಧಾರಣೆಯ ಹೆಸರಲ್ಲಿ ದೇಶದ ವಿದ್ಯಾರ್ಥಿ ಸಮುದಾಯಕ್ಕೆ ಕೇಂದ್ರ ಸರ್ಕಾರ ದ್ರೋಹವೆಸಗುತ್ತಿದೆ!
ಪ್ರಧಾನಮಂತ್ರಿಯವರು ತಿಳಿಸಿರುವಂತೆ, ಇನ್ನು ಮುಂದೆ ನೀಟ್ ಪರೀಕ್ಷೆಯನ್ನು ‘ಪೆನ್ ಮತ್ತು ಪೇಪರ್’ ಮಾದರಿಯಿಂದ ‘ಆನ್ಲೈನ್’ ಮಾದರಿಗೆ ಬದಲಾಯಿಸಲಾಗುತ್ತದೆ. ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ಅಥವಾ ಡಿಜಿಟಲ್ ಕಾವಲು ಮಾದರಿಗಳನ್ನು ಜಾರಿಗೆ ತರುವುದು ಡಿಜಿಟಲ್ ತಾರತಮ್ಯವನ್ನು (digital divide) ಮತ್ತಷ್ಟು ಹೆಚ್ಚಿಸುತ್ತದೆ. ಸ್ಥಿರವಾದ ಇಂಟರ್ನೆಟ್ ಸಂಪರ್ಕ, ನಿರಂತರ ವಿದ್ಯುತ್ ಸರಬರಾಜು ಅಥವಾ ಡಿಜಿಟಲ್ ಸಾಕ್ಷರತೆ ಇಲ್ಲದ ಅಭ್ಯರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ರಚನಾತ್ಮಕವಾಗಿ ವಂಚಿತರಾಗುತ್ತಾರೆ.
ಈ ನಡೆಯು ವೈದ್ಯಕೀಯ ಶಿಕ್ಷಣವನ್ನು ಕೆಲವು ಶ್ರೀಮಂತರು ಮತ್ತು ಪ್ರಭಾವಿಗಳಿಗೆ ಮಾತ್ರ ಸೀಮಿತಗೊಳಿಸಿ, ಮಧ್ಯಮ ವರ್ಗದ ಮತ್ತು ಬಡವರ ಬಹುಸಂಖ್ಯಾತ ಜನಸಂಖ್ಯೆಯನ್ನು ವೈದ್ಯಕೀಯ ಶಿಕ್ಷಣದಿಂದ ದೂರ ತಳ್ಳುವ ನೇರ ಪ್ರಯತ್ನವಾಗಿದೆ. ಎಐಡಿಎಸ್ಒ ಇದನ್ನು ಬಲವಾಗಿ ವಿರೋಧಿಸುತ್ತದೆ. ಸರ್ಕಾರವು ತಕ್ಷಣವೇ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಹಾಗೂ ವಿದ್ಯಾರ್ಥಿ ಸಮುದಾಯವು ಸರ್ಕಾರದ ಈ ಕುತಂತ್ರದ ವಿರುದ್ಧ ಹೋರಾಟವನ್ನು ಮುಂದುವರಿಸಬೇಕು ಮತ್ತು ಎನ್ಟಿಎ ವಿರುದ್ಧ ಧ್ವನಿ ಎತ್ತಬೇಕೆಂದು ಕರೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
