ತಿಪಟೂರು: ಇಲ್ಲಿನ ಜಿಲ್ಲಾ ಶಾಖಾ ಗ್ರಂಥಾಲಯದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ‘ಗ್ರಂಥಪಾಲಕರ ದಿನಾಚರಣೆ’ ಹಾಗೂ ಶಾಲಾ ಮಕ್ಕಳಿಗೆ ಗ್ರಂಥಾಲಯ ಅರಿವು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಾಹಿತಿ ಹಾಗೂ ಮುಖ್ಯ ಶಿಕ್ಷಕ ಎಂ. ಸೋಮಶೇಖರ್ ಅವರು, ಗ್ರಂಥಾಲಯದ ಮಹತ್ವ ಮತ್ತು ಪುಸ್ತಕ ಓದಿನಿಂದ ಲಭಿಸುವ ಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಓದುಗರಿಗೆ ವಿವರವಾಗಿ ತಿಳಿಸಿಕೊಟ್ಟರು. ಸಮಾಜ ಸೇವಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಟಿ. ಸಿ. ಗೋವಿಂದರಾಜ್ ಅವರು ಮಕ್ಕಳಿಗೆ ಉಪಯುಕ್ತ ಹಿತವಚನಗಳನ್ನು ಬೋಧಿಸಿದರು.
ಇದೇ ಸಂದರ್ಭದಲ್ಲಿ, ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ಸಾಹಿತಿ ಹಾಗೂ ಶಿಕ್ಷಣ ಇಲಾಖೆಯ ಹಳೇಪಾಳ್ಯ ಸಿಆರ್ ಪಿ ಎಚ್. ಕೆ. ದಿವಾಕರ್ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಕಾಲ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.
ನಳಂದ ಶಾಲೆಯ ಶಿಕ್ಷಕಿ ಭವಾನಿ ಅವರು ಗ್ರಂಥಾಲಯದಲ್ಲಿ ಲಭ್ಯವಿರುವ ವಿವಿಧ ಮಾದರಿಯ ಪುಸ್ತಕಗಳು ಹಾಗೂ ಅವುಗಳ ಬಳಕೆಯ ಬಗ್ಗೆ ವಿವರಣೆ ನೀಡಿದರೆ, ನಿವೃತ್ತ ಯೋಧ ಶ್ರೀನಿವಾಸ್ ಅವರು ಗ್ರಂಥಾಲಯದ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಂಥಾಲಯದ ಪ್ರಭಾರಧಾರಕರಾದ ಡಿ. ಎಸ್. ಚಂದ್ರಶೇಖರ್, ಶೋಭಾ, ಕವಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
