ವರದಿ: ಅರವಿಂದ ಮಲ್ಲೀಗೆ, ಬೀದರ್
ಬೀದರ್: ನಗರದ ಹೃದಯ ಭಾಗದಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ₹83 ಲಕ್ಷದ ಹೈ–ವೋಲ್ಟೇಜ್ ಶೂಟ್ ಔಟ್ ಹಾಗೂ ದರೋಡೆ ಪ್ರಕರಣಕ್ಕೆ 19 ತಿಂಗಳ ಬಳಿಕ ಬೀದರ್ ಪೊಲೀಸರು ತಾರ್ಕಿಕ ಅಂತ್ಯ ಹಾಡಿದ್ದಾರೆ. ಪ್ರಕರಣದ ಇಬ್ಬರು ಕುಖ್ಯಾತ ಆರೋಪಿಗಳನ್ನು ಬಿಹಾರದಲ್ಲಿ ಗೌಪ್ಯ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
2025ರ ಜನವರಿ 16ರಂದು ಬೀದರ್ ನಗರದ ಮುಖ್ಯ ರಸ್ತೆಯಲ್ಲಿರುವ ಎಸ್ಬಿಐ (SBI) ಬ್ಯಾಂಕ್ ಹಾಗೂ ಎಟಿಎಂಗೆ ಹಣ ತುಂಬಲು ಸಿಎಮ್ಎಸ್ (CMS) ಸಂಸ್ಥೆಯ ವಾಹನ ಬಂದಿತ್ತು. ಈ ವೇಳೆ ಬೈಕ್ನಲ್ಲಿ ಬಂದ ದರೋಡೆಕೋರರು ಸಿಬ್ಬಂದಿಯ ಮೇಲೆ ಹಾಡುಹಗಲೇ ಗುಂಡಿನ ದಾಳಿ ನಡೆಸಿ, ₹83 ಲಕ್ಷ ನಗದನ್ನು ದೋಚಿ ಪರಾರಿಯಾಗಿದ್ದರು.
ಈ ಭೀಕರ ಗುಂಡಿನ ದಾಳಿಯಲ್ಲಿ ಸಿಎಮ್ಎಸ್ ಸಂಸ್ಥೆಯ ಸಿಬ್ಬಂದಿ ಗಿರಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಶಿವಕುಮಾರ್ ಎಂಬ ಮತ್ತೊಬ್ಬ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ಸಾರ್ವಜನಿಕರಲ್ಲಿ ಭಾರಿ ಆತಂಕ ಸೃಷ್ಟಿಸಿತ್ತು ಹಾಗೂ ಬೀದರ್ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಬಿಹಾರದಲ್ಲಿ ಖಾಕಿ ಪಡೆ ಕಾರ್ಯಾಚರಣೆ:
ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪ್ರದೀಪ್ ಗುಂಟಿ ಅವರ ಮಾರ್ಗದರ್ಶನ ಹಾಗೂ ನೇರ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ತಾಂತ್ರಿಕ ಮಾಹಿತಿ ಮತ್ತು ಸಿಸಿಟಿವಿ ಸುಳಿವುಗಳ ಆಧಾರದ ಮೇಲೆ ಸತತ ನಿಗಾವಹಿಸಿದ ಪೊಲೀಸರು, ಬಿಹಾರದ ವೈಶಾಲಿ ಜಿಲ್ಲೆಯ ಧಾಮೋದರ್ ಗ್ರಾಮದಲ್ಲಿ ದಾಳಿ ನಡೆಸಿ ಆರೋಪಿಗಳಾದ ಅಲೋಕ್ ಕುಮಾರ್ ಹಾಗೂ ಅಮನ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಿಹಾರದಿಂದ ಬೀದರ್ ಗೆ ಕರೆತರಲಾಗುತ್ತಿದ್ದು, ಲೂಟಿ ಮಾಡಿದ ₹83 ಲಕ್ಷ ಹಣದ ಚೇತರಿಕೆ, ಕೃತ್ಯಕ್ಕೆ ಬಳಸಿದ ಶಸ್ತ್ರಾಸ್ತ್ರಗಳು ಹಾಗೂ ಈ ದರೋಡೆ ಜಾಲದ ಕುರಿತು ತೀವ್ರ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
