ಲಖನೌ: ನಕಲಿ ಗುರುತಿನ ಚೀಟಿಗಳನ್ನು (Fake IDs) ಬಳಸಿ ಸುಮಾರು 25ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಕೋಟ್ಯಂತರ ರೂಪಾಯಿ ವಂಚಿಸಿರುವ ವ್ಯಕ್ತಿಯೊಬ್ಬನಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿ ಮೋಸಹೋಗಿರುವುದಾಗಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ಜ್ಞಾನ್ ತಿವಾರಿ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಶಾಸಕರು ನೀಡಿದ ದೂರಿನನ್ವಯ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು, ಆರೋಪಿ ಪ್ರಖರ್ ತ್ರಿವೇದಿ ಹಾಗೂ ಆತನ ತಂದೆ ಅನುಜ್ ತ್ರಿವೇದಿಯನ್ನು ಬಂಧಿಸಿದ್ದಾರೆ.
ಸೀತಾಪುರ ಜಿಲ್ಲೆಯ ರೇವುಸಾ ಪೊಲೀಸ್ ಠಾಣೆಯಲ್ಲಿ ಶಾಸಕ ಜ್ಞಾನ್ ತಿವಾರಿ ದೂರು ದಾಖಲಿಸಿದ್ದಾರೆ. 2024ರಲ್ಲಿ ತಮ್ಮ ಮಗಳು ಪ್ರಗ್ಯಾ ಅವರನ್ನು ಮಿಶ್ರಿಖ್ನ ಚಂದ್ರವಾಲ್ ನಿವಾಸಿ ಅನುಜ್ ತ್ರಿವೇದಿ ಅವರ ಮಗ ಪ್ರಖರ್ ತ್ರಿವೇದಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು.
ಮದುವೆಗೂ ಮುನ್ನ ಅನುಜ್ ತ್ರಿವೇದಿ ತಾನು ಮುಂಬೈ ಮೂಲದ ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಹೇಳಿಕೊಂಡಿದ್ದನು. ಅಲ್ಲದೆ, ತನ್ನ ಹಾಗೂ ಮಗನ ಮೇಲಿದ್ದ ಅಪರಾಧ ಹಿನ್ನೆಲೆ ಮತ್ತು ಹಳೆಯ ಪ್ರಕರಣಗಳನ್ನು ಮರೆಮಾಚಿ ಮದುವೆ ಸಂಪ್ರದಾಯ ನೆರವೇರಿಸಿದ್ದನು.
ಮದುವೆಯಾದ ಸುಮಾರು ಎರಡೂವರೆ ವರ್ಷಗಳ ಬಳಿಕ ಸಾಮಾಜಿಕ ಜಾಲತಾಣಗಳು ಹಾಗೂ ಇತರ ಮೂಲಗಳ ಮೂಲಕ ಪ್ರಖರ್ ತ್ರಿವೇದಿಯ ಅಸಲಿ ಬಣ್ಣ ಬಯಲಾಗಿದೆ. ಆರೋಪಿ ಪ್ರಖರ್ ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 25ಕ್ಕೂ ಹೆಚ್ಚು ಮಹಿಳೆಯರನ್ನು ಪ್ರೀತಿಯ ಬಲೆಗೆ ಬೀಳಿಸಿ, ಮದುವೆಯಾಗಿ ಕೋಟ್ಯಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಜ್ಞಾನ್ ತಿವಾರಿ ಅವರು ಆರೋಪಿ ಕುಟುಂಬದೊಂದಿಗೆ ಎಲ್ಲ ಸಂಬಂಧಗಳನ್ನು ಕಡಿದುಕೊಂಡು ತಮ್ಮ ಮಗಳನ್ನು ಮನೆಗೆ ಕರೆತಂದಿದ್ದಾರೆ. “ಈ ಘಟನೆಯಿಂದ ನಮ್ಮ ಕುಟುಂಬ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದೆ ಹಾಗೂ ಜನಪ್ರತಿನಿಧಿಯಾಗಿ ನನ್ನ ಸಾಮಾಜಿಕ ಗೌರವಕ್ಕೆ ಧಕ್ಕೆಯಾಗಿದೆ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಆಗಸ್ಟ್ 6ರಂದು ತಮ್ಮ ಮಗಳೊಂದಿಗೆ ವಿಡಿಯೋ ಹಂಚಿಕೊಂಡಿದ್ದ ಶಾಸಕರು, ತಮಗೆ ಹಾಗೂ ತಮ್ಮ ಮಗಳಿಗೆ ಮೋಸ ಮಾಡಿದ ಆರೋಪಿಗಳಿಗೆ ಗಲ್ಲಿಗೇರಿಸುವಂತಹ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
