ಬೆಂಗಳೂರು: ರಾಜ್ಯದಲ್ಲಿ ಕಿಶೋರಿಯರ (ಅಪ್ರಾಪ್ತ) ಗರ್ಭಧಾರಣೆ ಪ್ರಕರಣಗಳ ಸಂಖ್ಯೆಯಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಇಳಿಕೆ ಕಂಡುಬಂದಿದ್ದರೂ, ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ನೂರಾರು ಬಾಲಕಿಯರು ಗರ್ಭಿಣಿಯಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಈ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
2026ರ ಏಪ್ರಿಲ್ನಿಂದ ಜುಲೈವರೆಗಿನ 4 ತಿಂಗಳ ಅವಧಿಯಲ್ಲಿ 14ರಿಂದ 17 ವರ್ಷ ವಯೋಮಾನದ ಒಟ್ಟು 725 ಬಾಲಕಿಯರು ಗರ್ಭಿಣಿಯಾಗಿರುವ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳಲ್ಲಿ 17 ವರ್ಷದ ಬಾಲಕಿಯರ ಸಂಖ್ಯೆಯೇ ಗರಿಷ್ಠವಾಗಿದ್ದು, 521 ಪ್ರಕರಣಗಳು ದಾಖಲಾಗಿವೆ.
ವಯೋಮಾನದ ವಿವರ:
14 ವರ್ಷ: 21 ಪ್ರಕರಣಗಳು
15 ವರ್ಷ: 56 ಪ್ರಕರಣಗಳು
16 ವರ್ಷ: 127 ಪ್ರಕರಣಗಳು
17 ವರ್ಷ: 521 ಪ್ರಕರಣಗಳು
ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ:
ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 100 ಕಿಶೋರಿ ಗರ್ಭಧಾರಣೆ ಪ್ರಕರಣಗಳು ರಾಯಚೂರು ಜಿಲ್ಲೆಯೊಂದರಲ್ಲೇ ದಾಖಲಾಗಿವೆ. ಇನ್ನು 14 ವರ್ಷ ವಯಸ್ಸಿನ ಗರ್ಭಿಣಿ ಬಾಲಕಿಯರ ವಿಭಾಗದಲ್ಲಿ ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು (3 ಪ್ರಕರಣಗಳು) ವರದಿಯಾಗಿವೆ.
ಹಿಂದಿನ ವರ್ಷಗಳ ಅಂಕಿಅಂಶಗಳನ್ನು ಗಮನಿಸಿದಾಗ ರಾಜ್ಯದಲ್ಲಿ ಈ ಪ್ರಮಾಣದಲ್ಲಿ ಇಳಿಕೆಯಾಗಿದೆ.
- 2024–25ರಲ್ಲಿ: 4,579 ಪ್ರಕರಣಗಳು
- 2025–26ರಲ್ಲಿ: 3,308 ಪ್ರಕರಣಗಳು
ಬಾಲ್ಯ ವಿವಾಹ ತಡೆ ಕಾಯ್ದೆ ಹಾಗೂ ಜಾಗೃತಿ ಕಾರ್ಯಕ್ರಮಗಳಿಂದ ಬಾಲ್ಯ ವಿವಾಹಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ವಂಚನೆ, ಮಾನವ ಕಳ್ಳಸಾಗಣೆ ಸೇರಿದಂತೆ ಇತರೆ ಸಾಮಾಜಿಕ ಕಾರಣಗಳಿಂದಾಗಿ ಅಪ್ರಾಪ್ತ ಬಾಲಕಿಯರು ಗರ್ಭ ಧರಿಸುವ ಪ್ರಕರಣಗಳು ಇನ್ನೂ ಮುಂದುವರಿದಿವೆ ಎಂದು ತಜ್ಞರು ಮತ್ತು ಸ್ತ್ರೀವಾದಿ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
