ತುಮಕೂರು: ತುಮಕೂರು ನಗರದ ಭಾಗವಾಗಿರುವ ರೀತಿಯಲ್ಲಿ ಹೆಗ್ಗೇರೆ ಗ್ರಾಮ ಬೆಳವಣಿಗೆಯಾಗುತ್ತಿದೆ. ಹೆಚ್ಚು ಜನ ಇಲ್ಲಿ ಮನೆ ಕಟ್ಟುಕೊಂಡು ವಾಸ ಮಾಡಲು ಆರಂಭಿಸಿದ್ದಾರೆ. ಅವರಿಗೆ ಉತ್ತಮ ರಸ್ತೆ, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಜವಾಬ್ದಾರಿ, ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಗ್ಗೇರೆಯಲ್ಲಿ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ಕೆ.ಆರ್.ಐ.ಡಿ.ಎಲ್. ಯೋಜನೆಯಡಿ 8 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹೆಗ್ಗೇರೆ ಗ್ರಾಮದ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, ವೇಗವಾಗಿ ಬೆಳೆಯುತ್ತಿರುವ ಹೆಗ್ಗೇರೆ ಗ್ರಾಮವನ್ನು ಮಾದರಿಯಾಗಿ ರೂಪಿಸಬೇಕು. ಉತ್ತಮ ರಸ್ತೆಗಳ ನಿರ್ಮಾಣ, ಮತ್ತಿತರ ಸೌಕರ್ಯ, ಹೇಮಾವತಿ, ಎತ್ತಿನಹೊಳೆ ಯೋಜನೆಗಳಿಂದ ಕುಡಿಯುವ ನೀರು ಕೊಡಲು ಅವಕಾಶವಿದೆ ಎಂದು ಹೇಳಿದರು.
ಈ ಭಾಗದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ಅನುದಾನ ಕೋರಿದ್ದೆ. ಈ ಮಧ್ಯೆ ಕೇಂದ್ರ ಸಚಿವ ವಿ. ಸೋಮಣ್ಣನವರು 80 ಕೋಟಿ ವೆಚ್ಚದಲ್ಲಿ ತುಮಕೂರಿನ ಬಟವಾಡಿ–ಮಲ್ಲಸಂದ್ರ ನಡುವಿದ ಹೆದ್ದಾರಿ ಅಭಿವೃದ್ಧಿ ಕಾರ್ಯ ಆರಂಭವಾಗಲು ನೆರವಾದರು. ಇದೇ ರೀತಿಯಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸಗಳಾಗಬೇಕು ಎಂದು ಡಾ. ಪರಮೇಶ್ವರ್ ಆಶಿಸಿದರು.
ತಾವು ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ತುಮಕೂರು ಜಿಲ್ಲೆಗೆ ಏನಾದರೂ ಶಾಶ್ವತ ಕೊಡುಗೆ ನೀಡಬೇಕು ಎಂದುಕೊಂಡಿದ್ದೆ, ಆದರೆ ಏನು ಕೊಡುವುದು ಎನ್ನುವಾಗ ಇಲಾಖೆ ಕಾರ್ಯದರ್ಶಿ ತುಮಕೂರು ವಿಶ್ವವಿದ್ಯಾಲಯ ಸ್ಥಾಪಿಸಿ ಎಂದು ಸಲಹೆ ಕೊಟ್ಟರು. ಇಡೀ ದೇಶದಲ್ಲೇ ಒಂದು ಜಿಲ್ಲೆಗೆ ಒಂದು ವಿಶ್ವವಿದ್ಯಾಲಯವಾಗಿ ತುಮಕೂರು ವಿವಿ ಆರಂಭವಾಯಿತು. ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ವಿಶ್ವವಿದ್ಯಾಲಯ ಮಕ್ಕಳಿಗೆ ಶಾಶ್ವತವಾಗಿ ವಿದ್ಯಾಭ್ಯಾಸ ಕೊಡುತ್ತದೆ ಎಂದರು.
ಶಾಸಕ ಬಿ. ಸುರೇಶ್ ಗೌಡ ಮಾತನಾಡಿ, ಡಿಸಿಎಂ ಡಾ. ಪರಮೇಶ್ವರ್ ಅವರದ್ದು ಎಲ್ಲಾ ಪಕ್ಷದವರೂ ಗೌರವ ಕೊಡುವಂತಹ ಸಜ್ಜನ ವ್ಯಕ್ತಿತ್ವ, ಶತ್ರುಗಳೇ ಇಲ್ಲದ ಅಜಾತಶತ್ರು ಇವರು ಎಂದು ಶ್ಲಾಘಿಸಿದರು. ತುಮಕೂರನ್ನು ಬೆಂಗಳೂರಿನ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂಬ ಸಂಕಲ್ಪ ಹೊಂದಿರುವ ಡಾ. ಪರಮೇಶ್ವರ್ ಅವರು ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಅಭಿವೃದ್ಧಿ ಕಾರ್ಯದಲ್ಲಿ ಪಕ್ಷ ಭೇದ, ರಾಜಕೀಯ ಮಾಡಬಾರದು. ಸಾರ್ವಜನಿಕ ಕೆಲಸಗಳಲ್ಲಿ ಎಲ್ಲರೂ ಒಟ್ಟಾಗಿ ಕೈ ಜೋಡಿಸಬೇಕು ಎಂದು ಹೇಳಿದರು. ಹೆಗ್ಗೇರೆ ಗ್ರಾಮ ನಗರದ ಬಡಾವಣೆ ರೂಪದಲ್ಲಿ ಬೆಳವಣಿಗೆ ಆಗುತ್ತಿದೆ. ತಕ್ಕಂತೆ ನಾಗರಿಕ ಸೌಕರ್ಯ ಒದಗಿಸಬೇಕಾಗಿದೆ. ಅದರ ಪ್ರಯತ್ನವಾಗಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿದೆ. ಈ ಗ್ರಾಮದ ಸುಮಾರು 50 ರಸ್ತೆಗಳನ್ನು ಅಭಿವೃದ್ಧಿಪಡಿಸಿ ನಾಮಫಲಕ ಹಾಕಲು ಗ್ರಾಮ ಪಂಚಾಯಿತಿಯಲ್ಲಿ ತೀರ್ಮಾನಿಸಲಾಗಿದೆ. ಹೆಗ್ಗೇರಿಗೆ ಕುಡಿಯುವ ನೀರು ಸರಬರಾಜು ಮಾಡಲು ದೊಡ್ಡನಾರವಂಗಲಕೆರೆಯ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಗ್ಗೇರೆ ಹಾಗೂ ಸುತ್ತಮುತ್ತಲ ಪ್ರದೇಶ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದು ಸುರೇಶ್ಗೌಡ ಹೇಳಿದರು.
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಅಧ್ಯಕ್ಷ ಮಹೇಶ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜಶೇಖರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಗೂಳೂರು ಶಿವಕುಮಾರ್ ಸಿದ್ದೇಗೌಡ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾದ ವೆಂಕಟೇಶ್, ನರಸಿಂಹಮೂರ್ತಿ, ಮುಖಂಡರಾದ ಹೊಳಕಲ್ಲು ಅಂಜನಪ್ಪ, ಜಯಂತ್ಗೌಡ, ಬಳಗೆರೆ ವೆಂಕಟೇಶ್, ಭೋಜಣ್ಣ, ಹೆತ್ತೇನಹಳ್ಳಿ ವೆಂಕಟೇಶ್, ರಾಜಣ್ಣ, ಕುಮಾರಣ್ಣ, ದೇವರಾಜು, ಮುಕುಲ್, ಮುಬಾರಕ್, ಚಲಪತಿ. ದಯಾನಂದ್, ಜಯಶ್ರೀ, ಸರಸ್ವತಿ, ಜಗದಂಬ, ಶೈಲಜ, ಹೊನ್ನಾಂಬಿಕೆ, ಆನಂದ, ಪವನ್, ಸುಹಾಸ್ ಸೇರಿದಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು, ಮುಖಂಡರು ಭಾಗವಹಿಸಿದ್ದರು.
ವೇಗವಾಗಿ ಬೆಳೆಯುತ್ತಿರುವ ಹೆಗ್ಗೇರೆ ಗ್ರಾಮವನ್ನು ಮಾದರಿಯಾಗಿ ರೂಪಿಸಬೇಕು. ಉತ್ತಮ ರಸ್ತೆಗಳ ನಿರ್ಮಾಣ, ಮತ್ತಿತರ ಸೌಕರ್ಯ, ಹೇಮಾವತಿ, ಎತ್ತಿನಹೊಳೆ ಯೋಜನೆಗಳಿಂದ ಕುಡಿಯುವ ನೀರು ಕೊಡಲು ಅವಕಾಶವಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
