ತುಮಕೂರು: ಸಾಹಿತಿ ಡಾ.ಸುಚೇತನಾ ಸ್ವರೂಪ ಅವರು ರಚಿಸುವ ಕಾದಂಬರಿ ಕಾಡುದೇವರಬೆಟ್ಟ ವಿವಿಧ ಆಯಾಮ, ಪಾತ್ರಗಳ ಮೂಲಕ ಬದುಕಿನ ತಾತ್ವಿಕ ಶೋಧವನ್ನು ಅನಾವರಣಗೊಳಿಸುತ್ತದೆ ಎಂದು ಸಂಸ್ಕೃತಿ ಚಿಂತಕ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಅವರು ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಹಿಳಾ ಅಧ್ಯಯನ ಕೇಂದ್ರ, ಸಾಮಾಜಿಕ ನ್ಯಾಯಪರ ವಿದ್ಯಾರ್ಥಿ ಒಕ್ಕೂಟ ತುಮಕೂರು ವಿವಿ ಇವರ ಸಹಯೋಗದಲ್ಲಿ ಸುಚೇತನಾಸ್ವರೂಪ ಅವರ ಕಾಡುದೇವರಬೆಟ್ಟ ಐದು ಸಂಪುಟಗಳ ಲೋಕಾರ್ಪಣೆ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದರು.
ಯಾವುದೇ ಕಾದಂಬರಿ ಬೃಹತ್ ಆಗಿರುವುದು ಮುಖ್ಯವಲ್ಲ. ಅದರಲ್ಲಿನ ಮೌಲ್ಯತೆಯೇ ಅಂತಿಮ. ಕಾಡುದೇವರಬೆಟ್ಟ ಕಾದಂಬರಿ ವಿವಿಧ ಪಾತ್ರಗಳ ಮೂಲಕ ಅತೀ ಸಂವಾದಿಯಾಗಿದೆ. ದ್ವೇಷ ಅಸಹನೆಯೇ ಯುದ್ಧ ಸಂಘರ್ಷಕ್ಕೆ ನಾಂದಿ ಎಂಬುದನ್ನು ಕಾದಂಬರಿ ಆರಂಭದಲ್ಲೇ ಹೇಳಲಾಗಿದ್ದು, ಸಾಮರಸ್ಯದ ಸಂದೇಶವನ್ನು ಮಾತಿನ ಮಂಟಪದ ಮೂಲಕ ಅನುಭವ ಮಂಟಪದೆಡೆಗೆ ಕೊಂಡೊಯ್ಯುವ ವಿಶೇಷ ಕಾದಂಬರಿ ಸಂಪುಟವೆನಿಸಿದೆ ಎಂದರು.
ಕಾದಂಬರಿಯಲ್ಲಿ ಬರುವ ವಿವಿಧ ಜನವರ್ಗವನ್ನು ಪ್ರತಿನಿಧಿಸುವ ಪಾತ್ರಗಳು ಸೈದ್ಧಾಂತಿಕ ಸಂಘರ್ಷ, ಸಮಯ ಸಾಧಕತನ, ರಾಜಕೀಯ ತಂತ್ರಗಾರಿಕೆ, ವಿಶ್ವವಿದ್ಯಾನಿಲಯಗಳಲ್ಲಿನ ಲಂಪಟತನ, ಪ್ರೇಮ ಸಂಬಂಧಗಳನ್ನು ಯಥಾವತ್ ಅನಾವರಣ ಗೊಳಿಸುತ್ತದೆ. ಲ್ಯಾಂಡಲಿಸಂ ಆಡಳಿತ ದಿಂದಾಗುತ್ತಿರುವ ಸಾಮಾಜಿಕ ವಿಘಟನೆಗಳು, ಜಾತಿ ಧರ್ಮಾಧಾರಿತ ಸಂಘರ್ಷಗಳು, ಕೋಮುವಾದದ ವಿವಿಧ ಆಯಾಮಗಳನ್ನು ಕಾವೇರಿ ಚಿತ್ರಿಸುತ್ತದೆ. ಕನ್ನಡದಲ್ಲಿ ಇಷ್ಟು ಬೃಹತ್ ಪುಟಗಳ ಕಾದಂಬರಿ ಬರೆದ ಸ್ವರೂಪ ಅವರನ್ನು ಅಭಿನಂದಿಸುವ ಜೊತೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಓದುಗರು ಅಧಿಕ ಸಂಖ್ಯೆಯಲ್ಲಿ ಬರುವಂತೆ ಮಾಡುವುದು ಆಯೋಜಕರ ಪ್ರಮುಖ ಜವಾಬ್ದಾರಿಯಾಗಬೇಕು ಎಂದರು.
ಕಾದಂಬರಿ ಕುರಿತು ಮಾತನಾಡಿದ ಲೇಖಕ ಡಾ.ಸಿದ್ದಗಂಗಯ್ಯ ಹೊಳಕಾಲ್ ಅವರು, ‘5 ಸಂಪುಟದಲ್ಲಿ 2397 ಪುಟಗಳಲ್ಲಿ ಹೊರಬಂದಿರುವ ಕಾಡುದೇವರ ಬೆಟ್ಟ ಕಾದಂಬರಿಯಲ್ಲಿ ಸಮಕಾಲೀನ ವಿಚಾರಧಾರೆಯಿದೆ. ಲೋಕಾಭಿರಾಮಯ್ಯ, ಬೊಂಬೆರಾಮಯ್ಯ, ಹಿಂಗಾರಯ್ಯ, ಶಕುನಿಗೌಡ, ಅಹಮದ್, ಅಮ್ಮಣ್ಣಿ , ಹೀಗೆ ಸುಮಾರು 300 ಪಾತ್ರಗಳ ಮೂಲಕ ಅಭಿವ್ಯಕ್ತಗೊಳ್ಳುವ ಪ್ರಯೋಗ ಮಾಡಲಾಗಿದೆ. ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುವ ಕಾದಂಬರಿ ಇದಾಗಿದ್ದು, ಗ್ರಾಮೀಣ ಚಿತ್ರಣವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಪಾತ್ರಗಳ ವೈಯಕ್ತಿಕ ಸಂಶೋಧದ ಸಂವಾದದಲ್ಲಿ ಭಾಷೆಯನ್ನು ಹಸಿ-ಬಿಸಿಯಂತೆ ಕಾದಂಬರಿಕಾರರು ಬಳಕೆ ಮಾಡದಿರುವುದು ಸಮಾಜಸೇವೆ ಎಂಬ ಪ್ರಶ್ನೆಯ ಜೊತೆಗೆ ಪರಿಸರದ ಉಳಿವು, ಸಾಮರಸ್ಯದ ಸಂದೇಶ, ತಾತ್ವಿಕ ನೆಲೆಯನ್ನು ಸಾರುವ ಕೃತಿಯಾಗಿ ಕಾಡುದೇವರಬೆಟ್ಟ ಹೊರಹೊಮ್ಮಿದೆ. ಎಲ್ಲರೂ ಕಾದಂಬರಿ ಕೊಂಡು ಓದಬೇಕು ಎಂದು ಮನವಿ ಮಾಡಿದರು.
ಸಹಜ ಅಭಿವ್ಯಕ್ತಿಯ ಲೋಕಾರ್ಪಣೆ: ಹಿರಿಯ ಚಿಂತಕ ಕೆ.ದೊರೈರಾಜ್ ಪ್ರತಿಕ್ರಿಯಿಸಿ ಕಾಡುದೇವರಬೆಟ್ಟ ಕಾದಂಬರಿಯನ್ನು ಲೋಕಾರ್ಪಣವಾಗಿ ಕಟ್ಟಿಕೊಟ್ಟಿರುವ ಸುಚೇತನಾ ಸ್ವರೂಪ ಅವರು ಪುಸ್ತಕ ಸಮಾಜದಲ್ಲಿನ ಪಿಡುಗಾದ ಜಾತಿವಾದ, ಕೋಮುವಾದ, ಅಸಮಾನತೆಯನ್ನು ಸಹಜವಾಗಿಯೇ ಪಾತ್ರಗಳ ಮೂಲಕ ಹೇಳಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಅಸ್ಪೃಶ್ಯರು ವಿದ್ಯಾವಂತರಾದರೂ ಜಾತಿಯ ಸಂಕೋಲೆಯಿಂದ ಹೊರಬರಲು ಸಾಧ್ಯವಾಗಿಲ್ಲ, ಸಮಾನತೆ ಸಿಕ್ಕಿಲ್ಲ. ಇಂತಹ ಸಂಗತಿಗಳನ್ನು ಕೃತಿಯು ಸಹಜ ಪಾತ್ರ ಅಭಿವ್ಯಕ್ತಿ ರೂಪದಲ್ಲಿ ಬಂಬಿಸಿದೆ ಎಂದು ವಿಶ್ಲೇಷಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ವಹಿಸಿದ್ದರು. ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಆಶಾ ಬಗ್ಗನಡು, ವಿವಿ ಕಲಾ ಕಾಲೇಜು ಪ್ರಾಂಶುಪಾಲೆ ಪ್ರೊ.ದ್ರಾಕ್ಷಾಯಣಿ, ಖಜಾಂಚಿ ರಾಮಚಂದ್ರಶೇಖರ್ ವೇದಿಕೆಯಲ್ಲಿದ್ದರು. ಮರಿಯಂ ನಿರೂಪಿಸಿದರು. ಚೇತನ ಚಿತ್ರದುರ್ಗ ಪ್ರಕಾಶಕ ಸಿಂಗರಾಜು ಚಿತ್ತಾಪುರ್, ಲೇಖಕರಾದ ಶೈಲನಾಗರಾಜ್, ಇಂದಿರಮ್ಮ, ಡಾ.ಟಿ.ಆರ್. ಲೀಲಾವತಿ, ಡಾ. ಲಕ್ಷ್ಮೀದಾಸ್, ಡಾ.ಟಿ.ನಾಗರಾಜು, ರಫೀಂ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕಾದಂಬರಿಕಾರ್ ಡಾ.ಸುಚೇತನಾ ಸ್ವರೂಪ ಅವರು ಮಾತನಾಡಿ, 12 ವರ್ಷದ ಹಿಂದೆ ಸುಮಾರು 3 ವರ್ಷಗಳ ಕಾಲ ಕಾಡುದೇವರಬೆಟ್ಟ ಕಾದಂಬರಿಯನ್ನು ರಚಿಸಿದ್ದು 3 ಸಾವಿರ ಪುಟ ದಾಟಿದ್ದ ಕಾದಂಬರಿಯನ್ನು ಕೋವಿಡ್ ನಂತರ ಪರಿಷ್ಕರಣೆ ಮಾಡಿ, 2397 ಪುಟಕ್ಕೆ ಇಳಿಸಿದ್ದು ತುಮಕೂರಿನಲ್ಲಿದ್ದಾಗ ರಚಿಸಿದ ಕೃತಿಯಾದ್ದರಿಂದ ಇಲ್ಲಿಯೇ ಬಿಡುಗಡೆಯಾಗಲು ಬಯಸಿದೆ. ಬರಗೂರು, ದೊರೈರಾಜ್, ಹೊಳಕಾಲ್ರಂತಹ ಚಿಂತಕರನ್ನು ಕರೆಸಿ ಲೇಖಕಿಯರ ಸಂಘ, ಕನಾಪವಿದರು ಬಿಡುಗಡೆಮಾಡಿಸಿದ್ದು ಅರ್ಥಪೂರ್ಣವೆನಿಸಿದೆ. ಇಂದು ಇಡೀ ಜಗತ್ತು ಬಹು ಯುದ್ಧಗಳು ಮಾತ್ರವಲ್ಲ ಆಂತರಿಕ ನಾಗರಿಕ ಯುದ್ಧಗಳು ಕಾಡುತ್ತಿವೆ. ಶಸ್ತ್ರಾಸ್ತ್ರವಿಲ್ಲದೆ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಟಮಾಡಿ ಜಯಸಾಧಿಸಬಹುದು ಎಂದು ತೋರಿಸಿಕೊಟ್ಟ ಗಾಂಧಿಯನ್ನು ಮೂಲೆಗುಂಪು ಮಾಡುತ್ತಿರುವ ಈ ಸನ್ನಿವೇಶದಲ್ಲಿ ಕಾಡುದೇವರಬೆಟ್ಟ ಕಾದಂಬರಿ ನಾನಾ ಪಾತ್ರಗಳ ಮೂಲಕ ಗಾಂಧಿ ಪ್ರಣೀತ ವಿಚಾರಧಾರೆಯನ್ನು ಎತ್ತಿಹಿಡಿಯುತ್ತದೆ ಎಂದು ವ್ಯಾಖ್ಯಾನಿಸಿದರು.
ನವ ತರುಣ ತಲೆಮಾರಾಗಿ ಗುರುತಿಸಿಕೊಳ್ಳುತ್ತಿರುವ ಜೇನ್ ಜಿಗಳ ಹೋರಾಟ ತಾತ್ವಿಕ ಹಾದಿಯಲ್ಲಿ ಸಾಗದಿದ್ದರೆ ಶಾಶ್ವತ ಪರಿಹಾರ, ದೀರ್ಘಾವಧಿ ಚಳವಳಿ ಕಟ್ಟಲು ಸಾಧ್ಯವಿಲ್ಲ, ಸಂಘಟನೆಗಳು ಸಾಂಕೇತಿಕ ಪ್ರತಿಭಟನೆಯಷ್ಟೇ, ಅಲ್ಪಾವಧಿಯ ಪ್ರಯೋಜನಗಳಿಗಷ್ಟೇ ಸೀಮಿತವಾಗಬಾರದು. ಈ ದಿಸೆಯಲ್ಲಿ ರಾಷ್ಟ್ರದ ಕೇಂದ್ರಬಿಂದುವಾಗಿರುವ ಜೇನ್ ಜಿಗಳ ಹೋರಾಟ, ಅಭಿವ್ಯಕ್ತಿಗಳ ಬಗ್ಗೆಯೂ ನಿಷ್ಕರ್ಷೆ ಅಗತ್ಯವಿದೆ. ಜಯಪ್ರಕಾಶ್ ನಾರಾಯಣ್ ಅವರು ಪ್ರತಿಪಾದಿಸಿದ ಸಂಪೂರ್ಣ ಕ್ರಾಂತಿ ಇಂದಿಗೂ ಸಾಧ್ಯವಾಗಿಲ್ಲ, ಅಸಮಾನತೆ, ಜಾತಿ ಧರ್ಮ ವರ್ಣ ಸಂಕರಗಳು, ಕೋಮುವಾದ ಇಂದಿಗೂ ಭಾರತೀಯರನ್ನು ಜ್ವಲಂತವಾಗಿ ಕಾಡುತ್ತಿವೆ.
— ಡಾ. ಬರಗೂರು ರಾಮಚಂದ್ರಪ್ಪ ಸಾಹಿತಿ ಚಿಂತಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
