ಮಧುಗಿರಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗಗಳಿಸಲು ಮೃದುಕೌಶಲ್ಯಗಳು ಪೂರಕವಾಗಿವೆ. ವಿದ್ಯಾರ್ಥಿಗಳು ಪಠ್ಯ ವಿಷಯಗಳ ಕುರಿತು ಅಧ್ಯಯನ ಮಾಡುವ ಜೊತೆಗೆ ಮೃದುಕೌಶಲ್ಯಗಳನ್ನು ಕಲಿತು ಉತ್ತಮ ಉದ್ಯೋಗಗಳನ್ನು ಗಳಿಸಬಹುದು. ಮೃದುಕೌಶಲ್ಯ ಕಲಿತವರಿಗೆ ಹೇರಳ ಉದ್ಯೋಗಾವಕಾಶಗಳು ಲಭ್ಯವಿದೆ. ಆದುದರಿಂದ ಮೃದುಕೌಶಲ್ಯಗಳ ಕಲಿಕೆಗೆ ವಿಶೇಷ ಒತ್ತು ನೀಡಬೇಕು ಎಂದು ಪ್ರಾಂಶುಪಾಲರಾದ ಪ್ರೊ.ಡಿ.ಎಸ್.ಮುನೀಂದ್ರಕುಮಾರ್ ಅಭಿಪ್ರಾಯಪಟ್ಟರು.
ಅವರು ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಮತ್ತು ಉದ್ಯೋಗ ಕೋಶದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮೃದುಕೌಶಲ್ಯಗಳು ಮತ್ತು ಉದ್ಯೋಗ ಮಾರ್ಗದರ್ಶನ ಕುರಿತಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಂಪ್ಯೂಟರ್ ಜ್ಞಾನ, ಸಂವಹನ ಕಲೆ, ಸಮಯ ನಿರ್ವಹಣೆ, ವಿವಿಧ ಭಾಷೆಗಳನ್ನು ಕಲಿಯುವ ಮೂಲಕ ಮೃದುಕೌಶಲ್ಯಗಳನ್ನು ಕರಗತ ಮಾಡಿಕೊಂಡು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಉದ್ಯೋಗಾವಕಾಶಗಳನ್ನು ತಮ್ಮದಾಗಿಸಿಕೊಳ್ಳಬಹುದು. ಪದವಿಯ ಜೊತೆಗೆ ಮೃದುಕೌಶಲ್ಯಕಲಿಕೆಗೆ ಕಾಲೇಜು ಶಿಕ್ಷಣ ಇಲಾಖೆ ವಿಶೇಷ ಆಸಕ್ತಿ ವಹಿಸಿದ್ದು, ಎಲ್ಲ ಕಾಲೇಜುಗಳಲ್ಲಿ ಉದ್ಯೋಗ ತರಬೇತಿ ಸ್ಥಾಪಿಸಿ, ಮೃದು ಕೌಶಲ್ಯಗಳತರಬೇತಿ ನೀಡಲು ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸಂಪದ್ಭರಿತ ಮಾನವ ಸಂಪನ್ಮೂಲವಾಗಿ ಹೊರಹೊಮ್ಮಲಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ.ಎನ್.ನರಸಿಂಹಮೂರ್ತಿ ಮಾತನಾಡಿ ಯುವಜನರು ಉದ್ಯೋಗಕ್ಕಾಗಿ ಅಲೆಯುವ ಬದಲು ಉದ್ಯೋಗಸೃಷ್ಟಿಗೆ ಮುಂದಾಗಬೇಕು. ಮಾತೃಭಾಷೆಯ ಜೊತೆ ಆಂಗ್ಲಭಾಷೆ ಕಲಿಯುವ ಮೂಲಕ ಜಾಗತಿಕ ಮಟ್ಟದ ಉದ್ಯೋಗ ಪಡೆಯುವ ಅರ್ಹತೆ ಪಡೆಯಬೇಕು. ವಿವಿಧ ಭಾಷೆಗಳ ಕಲಿಕೆಯಿಂದ ಸಾಮರಸ್ಯ ಉಂಟಾಗಿ, ಭ್ರಾತೃತ್ವಭಾವ ಮೂಡಲಿದೆ. ಆಂಗ್ಲಭಾಷೆಯು ಕಬ್ಬಿಣದಕಡಲೆ ಎಂಬ ಕೀಳರಿಮೆಯನ್ನು ತೊರೆದು, ಕಲಿಕೆಗೆ ಮುಂದಾಗಿ ಆಂಗ್ಲಭಾಷೆ ಕರಗತ ಮಾಡಿಕೊಂಡು ವಿಶ್ಯವ್ಯಾಪಿ ಉದ್ಯೋಗಾವಕಾಶಕ್ಕೆ ಅರ್ಹರಾಗಬಹುದು. ಆಂಗ್ಲಭಾಷೆಯ ಪದಗಳು ಮಾತೃಭಾಷೆಯ ಜೊತೆ ಸೇರಿಹೋಗಿದೆ. ಎಲ್ಲಿಗೇ ಹೋದರೂ ಆಂಗ್ಲಭಾಷೆಯ ಪದಗಳು ಇತರಭಾಷೆಗಳಲ್ಲಿ ಮಿಳಿತಗೊಂಡಿರುವುದನ್ನು ಕಾಣಬಹುದು. ವಿದ್ಯಾರ್ಥಿಗಳು ಆಂಗ್ಲಭಾಷೆಯನ್ನು ಜೋಡಿಸಿ ಮಾತನಾಡಲು ಕಲಿಯಬೇಕು. ವಿಶ್ವದ ವಿವಿಧ ವಸ್ತುವಿಷಯಗಳು ಆಂಗ್ಲಭಾಷೆಯಲ್ಲಿ ಲಭ್ಯವಿದೆ. ವಿಶ್ವದಲ್ಲಿ ಅತಿಹೆಚ್ಚು ಮಾತನಾಡುವ ಭಾಷೆ ಇಂಗ್ಲೀಷ್ ಆಗಿದ್ದು, ಬಹುತೇಕ ರಾಷ್ಟ್ರಗಳು ಸಂವಹನ ಮಾಧ್ಯಮವಾಗಿ ಬಳಸಲು, ಆಂಗ್ಲಭಾಷೆ ಕಲಿಕೆಗೆ ವಿಶೇಷ ಒತ್ತು ನೀಡುತ್ತಿವೆ. ಆದುದರಿಂದ ವಿದ್ಯಾರ್ಥಿಗಳು ಮಾತೃಭಾಷೆಯ ಜೊತೆಜೊತೆಗೆ ಇತರೆ ಭಾಷೆಗಳನ್ನು ಕಲಿತು ಉತ್ತಮ ಅವಕಾಶಗಳನ್ನು ಪಡೆಯಬಹುದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಉಪನ್ಯಾಸಕರಾದ ರೇವಣ್ಣಸಿದ್ದಪ್ಪ ಮಾತನಾಡಿ ಇಂಗ್ಲೀಷ್ ಭಾಷೆಯಲ್ಲಿ 26 ಅಕ್ಷರಗಳಲ್ಲಿದ್ದು, ವಿಶ್ವದಲ್ಲೇ ಅತಿಹೆಚ್ಚು ಮಾತನಾಡುವ ಭಾಷೆಯಾಗಿದೆ. ವಿದ್ಯಾರ್ಥಿಗಳು ಸಮಯಪಾ¯ನೆ, ಗುಂಪಿನಲ್ಲಿ ಕಾರ್ಯನಿರ್ವಹಿಸುವ ಕೌಶಲ, ಯೋಚನಾಶಕ್ತಿಯನ್ನು ವೃದ್ದಿಸಿಕೊಳ್ಳಬೇಕು. ಬಾಲ್ಯದಿಂದಲೇ ಶಿಸ್ತಿನ ಜೀವನ ಮೈಗೂಡಿಸಿಕೊಳ್ಳಬೇಕು. ಮೃದುಕೌಶಲ್ಯಗಳ ಕಲಿಕೆಯಿಂದ ಜೀವನಶೈಲಿ ಬದಲಾಗಲಿದೆ. ಇಂದಿನ ಯುವಜನರಿಗೆ ಕಲಿಯಲು ಅನೇಕ ವಿಷಯಗಳು ಲಭ್ಯವಿದೆ ಹಾಗೇಯೇ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಿದೆ. ಆದುದರಿಂದ ವಿದ್ಯಾರ್ಥಿಗಳು ಕಲಿಯುವ ಆಸಕ್ತಿಯನ್ನು ಮೈಗೂಡಿಸಿಕೊಂಡು ಜ್ಞಾನಾರ್ಜನೆಗೆ ಮುಂದಾಗಿ, ದುಶ್ಚಟಗಳನ್ನು ತೊರೆದು ಸತ್ಪ್ರಜೆಗಳಾಗಿ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಉದ್ಯೋಗ ತರಬೇತಿ ಅಧಿಕಾರಿಗಳಾದ ಪ್ರೊ.ಶ್ರೀಹರಿ, ಪ್ರೊ.ನೂರ್ಆಯಿಷಾ, ಪ್ರೊ.ಮಸೂದ್, ಡಾ.ಅಶೋಕ್, ಪ್ರೊ.ದಿವಾಕರ್ರೆಡ್ಡಿ, ಪ್ರೊ.ಪುರುಷೋತ್ತಮ್, ಡಾ.ಎಸ್.ಆರ್.ಹನುಮಂತರಾಯಪ್ಪ, ಪ್ರೊ.ಲಕ್ಷ್ಮೀಪತಯ್ಯ ಮತ್ತಿತರರು ಭಾಗವಹಿಸಿದ್ದರು. ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾ.ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರೊ.ಚೈತನ್ಯ ಸ್ವಾಗತಿಸಿ, ಪ್ರೊ.ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB