ಕೊರಟಗೆರೆ: ಹಲವು ಫೈನಾನ್ಸ್ ಗಳಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಸಾಲ ಪಡೆದು, ಸಾಲ ತೀರಿಸಲು ಆಗದೇ ರೈತರೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ. ಕೊರಟಗೆರೆ ತಾಲೂಕಿನ ಸಿ ಎನ್ ದುರ್ಗಾ ಹೋಬಳಿಯ ಕಬುಗೆರೆ ಗೊಲ್ಲರಹಟ್ಟಿ ಗ್ರಾಮದ ರಾಜಣ್ಣ(38) ವರ್ಷ ನೇಣಿಗೆ ಶರಣಾಗಿರುವ ರೈತರಾಗಿದ್ದಾರೆ.
ಜಮೀನಿನ ಬೋರ್ವೆಲ್ ಗಳಲ್ಲಿ ನೀರು ಸಿಗತ್ತೆ ಎಂಬ ನಂಬಿಕೆಯಿಂದ ರೈತ ರಾಜಣ್ಣ, ತನ್ನ ಮನೆಯ ಮೇಲೆ ಸಾಲ ಮಾಡಿ ಜಮೀನಿನಲ್ಲಿ 5ಕ್ಕೂ ಹೆಚ್ಚು ಬೋರ್ ವೆಲ್ ಕೊರೆಸಿದ್ದರು. ಅಷ್ಟೇ ಅಲ್ಲದೆ ತನ್ನ ಸ್ನೇಹಿತರ ಬಳಿಯೂ ಕೈ ಸಾಲ ಪಡೆದಿದ್ದರು.
ಆದರೆ ಜಮೀನಿನ ಬೋರ್ವೆಲ್ ಗಳಲ್ಲಿ ನೀರು ಸಿಗಲಿಲ್ಲ. ಪಡೆದ ಸಾಲ ತಿರಿಸಲಾಗದೇ ಮನನೊಂದ ರೈತ ರಾಜಣ್ಣ, ತಡರಾತ್ರಿ ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ವರ್ಷದಿಂದ ಮಳೆ ಇಲ್ಲದೆ, ಬೆಳೆಗಳೆಲ್ಲವೂ ಸಂಪೂರ್ಣ ನಾಶವಾಗಿ, ಮಾಡಿರುವ ಸಾಲ ತೀರಿಸಲಾಗದೆ ರೈತರು ನೇಣು ಹಾಕಿಕೊಳ್ಳುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚು ನಡೆಯುತ್ತಿವೆ.
ಮೈಕ್ರೋ ಫೈನಾನ್ಸ್ ಸೇರಿದಂತೆ ಇತರೆ ಫೈನಾನ್ಸ್ ಕಂಪನಿಗಳ ಕಾಟ ಜಾಸ್ತಿಯಾಗಿದ್ದು, ಅಂತಹ ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕಬೇಕು. ಮಳೆ ಇಲ್ಲದೆ ಬೆಳೆ ಇಲ್ಲದೆ ರೈತ ಎಲ್ಲಿಂದ ಸಾಲವನ್ನು ಕಟ್ಟುತ್ತಾನೆ..? ಈ ಘಟನೆಗಳನ್ನು ಕೂಡಲೇ ಸರ್ಕಾರ ಗಮನ ಹರಿಸಬೇಕು. ರೈತರ ಪ್ರಾಣವನ್ನು ಉಳಿಸಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಸಿದ್ದರಾಜು ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಕೊರಟಗೆರೆ ಪೋಲಿಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ ಎನ್ ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296