ಚಾಮರಾಜನಗರ: ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಗುಡ್ಡ ಕುಸಿದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಸಮೀಪವಿರುವ ಬಿಳಿಕಲ್ಲು ಕ್ವಾರಿಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಸಾವಿನ ಬಗ್ಗೆ ನಿಖರ ಮಾಹಿತಿ ಇನ್ನೂ ಅಧಿಕಾರಿಗಳು ತಿಳಿಸಿಲ್ಲ, ಸದ್ಯಕ್ಕೆ, ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.ಈ ಕುರಿತು ಎಸ್ಪಿ ಟಿ.ಪಿ.ಶಿವಕುಮಾರ್ ಮಾಹಿತಿ ನೀಡಿದ್ದು, ಮಹೇಂದ್ರಪ್ಪ ಎಂಬವರ ಹೆಸರಿನಲ್ಲಿ ಗಣಿಗಾರಿಕೆ ಪರವಾನಗಿ ಇದೆ, ಅದು ಕಾನೂನುಬದ್ಧವಾಗಿ ನಡೆಯುತ್ತಿದೆ.ಕ್ವಾರಿ ಸಿಬ್ಬಂದಿ ಹೇಳಿದ ಪ್ರಕಾರ ಆರು ಜನರು ಗುಡ್ಡದಡಿ ಸಿಲುಕಿದ್ದರು.ನಾವು ಈಗಾಗಲೇ ಅಶ್ರಫ್, ಪ್ರಾನ್ಸಿಸ್ ಎಂಬಿಬ್ಬರನ್ನು ರಕ್ಷಿಸಿದ್ದೇವೆ.ಮಹಾರಾಷ್ಟ್ರ (Maharashtra) ಮೂಲದ ಕಾರ್ಮಿಕರಾದ ಇಮ್ರಾನ್ ಮತ್ತು ಬಬ್ಲು ಎಂಬವರು ಗುಡ್ಡದಡಿ ನಾಪತ್ತೆಯಾಗಿದ್ದಾರೆ.ಸದ್ಯ, ಕ್ವಾರಿಯ ಮ್ಯಾನೇಜರ್ ನವೀದ್ ಎಂಬಾತನನ್ನು ಬಂಧಿಸಿದ್ದೇವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಬಿಳಿಕಲ್ಲುಗಳನ್ನು ತೆಗೆಯಲು ಬ್ಲಾಸ್ಟ್ ಮಾಡಿದ ವೇಳೆ ಹಂತಹಂತವಾಗಿ ಗುಡ್ಡ ಕುಸಿಯಲು ಪ್ರಾರಂಭಿಸಿದ್ದರಿಂದ ಎಲ್ಲರೂ ಓಡಿಹೋಗಿದ್ದಾರೆ ಎನ್ನಲಾಗಿದ್ದು ನಾಲ್ಕು ಟಿಪ್ಪರ್, ಮೂರು ಹಿಟಾಚಿ, ಮೂರು ಕಂಪ್ರೆಸ್ಸರ್,ಎರಡು ಟ್ರಾಕ್ಟರ್ ಗಳು ಗುಡ್ಡದ ಕೆಳಗೆ ಸಿಲುಕಿವೆ. ಜೊತೆಗೆ, ಘಟನೆಯಲ್ಲಿ 8 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಬಿಳಿ ಕಲ್ಲುಗಳನ್ನು ತೆಗೆಯುತ್ತಿರುವಾಗ ದಿಢೀರನೇ ಕ್ವಾರಿ ಗುಡ್ಡ ಕುಸಿದಿದ್ದು ಭಾರೀ ಗಾತ್ರದ ಕಲ್ಲುಗಳು ಉರುಳಿಬಿದ್ದಿದ್ದರಿಂದ ಟಿಪ್ಪರ್ ಮತ್ತು ವಾಹನಗಳು ಪಲ್ಟಿಯಾಗಿದೆ. ಘಟನೆಯಲ್ಲಿ ಕನಿಷ್ಠ 6 ಮಂದಿ ಕಾರ್ಮಿಕರು ಸಿಲುಕಿದ್ದಾರೆ ಎನ್ನಲಾಗುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.ಈಗ ಸ್ಥಳಕ್ಕೆ ಗ್ರಾಮಸ್ಥರು, ಪೊಲೀಸರು ದೌಡಾಯಿಸಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ವರದಿ: ಆಂಟೋನಿ ಬೇಗೂರು