ತುಮಕೂರು: ಚಿತ್ರನಟ ಚೇತನ್ ಕುಮಾರ್ ನ್ಯಾಯಧೀಶರಿಗೆ ನಿಂದನೆ ಮಾಡಿದ್ದಾರೆಂಬ ಆಕ್ಷೇಪಾರ್ಹ ಟ್ವೀಟ್ ನ ಆರೋಪದಡಿಯಲ್ಲಿ ಏಕಾಏಕಿ ಪೊಲೀಸರು ಯಾವುದೇ ಪೂರ್ವ ಮಾಹಿತಿ ನೀಡದೆ ಬಂಧಿಸಿರುವುದು ಖಂಡನೀಯ ಎಂದು ಸಾಮಾಜಿಕ ಕಾರ್ಯಕರ್ತ ನಾಗಣ್ಣ ಜಿ.ಕೆ. ಟೀಕಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಸಾಮಾಜಿಕ ಕಾರ್ಯಕರ್ತ, ನಟ ಚೇತನ್ ಅವರ ಬಂಧನ ಸಂಬಂಧ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಟ ಚೇತನ್ ಒಬ್ಬ ಸಾಮಾಜಿಕ ಕಳಕಳಿ ಹೊಂದಿರುವ ಸಾಮಾಜಿಕ ಹೋರಾಟಗಾರ. ಅನ್ಯಾಯ ಪ್ರಶ್ನಿಸುವ ಮಾನವತಾದಿ, ಬುದ್ಧ ಬಸವ, ಪೆರಿಯಾರ್, ಡಾ.ಬಿ.ಆರ್.ಅಂಬೇಡ್ಕರ್ ಅಂತಹವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸದಾ ಧ್ವನಿಯಿಲ್ಲದವರಿಗೆ ದನಿಯಾಗುವ ನಿಟ್ಟಿನಲ್ಲಿ ಸಮಾನತೆ ಪಾಲಿಸುವ ಹಿತದೃಷ್ಟಿಯ ಚಿಂತಕ ಅಂದರೆ ಅತಿಶಯೋಕ್ತಿಯೆನಿಸದು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ಕದಡುವ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳದ ಸರ್ಕಾರ ಸದಾ ಶಾಂತಿ, ಸೌಹಾರ್ಧತೆ, ಸೋದರತ್ವ ಭಾವನೆ ಇರುವ ಭಾವುಕ ಜೀವಿ ಚೇತನ್ ಅವರ ಮೇಲೆ ಕೋಮು ಪ್ರಚೋದನೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಜೊತೆಗೆ ರಾಜ್ಯದ ಮುಖ್ಯಮಂತ್ರಿಗಳ ಸರ್ಕಾರ ಕೂಲಂಕುಶವಾಗಿ ಸತ್ಯಾ ಸತ್ಯತೆಯನ್ನ ಅರಿಯದೆ ಬಂಧಿಸಿರುವುದು ಈ ಪ್ರಜಾಪ್ರಭುತ್ವದ ವಿರೋಧದ ನಡೆ ಸಮಂಜಸವಲ್ಲ ಎಂದರು.
ಪ್ರಜಾಪ್ರಭುತ್ವದ ಅಂಕುಡೊಂಕು ಅಸಮಾನತೆಗಳನ್ನ ಭಿನ್ನ ಧ್ವನಿಯಲ್ಲಿ ಪ್ರಶ್ನಿಸುವ ನಟ ಚೇತನ್ ಅವರ ಮೇಲೆ ಯಾವುದೇ ಪೂರ್ವ ಮಾಹಿತಿ ನೀಡದೆ ಐಪಿಸಿ 504 ಮತ್ತು 505 ಸೆಕ್ಷನ್ ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಿರುವುದು ಕಾನೂನು ಉಲ್ಲಂಘನೆ. ಜೊತೆಗೆ ಚೇತನ್ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಷಡ್ಯಂತ್ರ ಸರ್ಕಾರ ಮಾಡಿದೆ ಎಂದು ನೇರವಾಗಿಯೇ ಆರೋಪ ಮಾಡಿದರು.
ಈ ಕೂಡಲೇ ನಟ, ರಾಜ್ಯದ ಬಹು ಸಂಖ್ಯಾತ ಜನರ ಹಕ್ಕುಗಳಿಗೆ ಹೋರಾಟ ನಡೆಸಿದ ಚೇತನರನ್ನು ಸರ್ಕಾರ ವಿಧಿಸಿರುವ ಪ್ರಕರಣ ವಾಪಸ್ಸು ಪಡೆದು ಬಿಡುಗಡೆಗೊಳಿಸಬೇಕು, ಇಲ್ಲವಾದಲ್ಲಿ ಮುಂದಿನ ಹಂತದಲ್ಲಿ ಸಂವಿಧಾನಾತ್ಮಕ ನಮ್ಮ ಹಕ್ಕು ಕೇಳುವ ಧ್ವನಿಗಳನ್ನು ಹೆಚ್ವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಬಂಧಿತ ಚೇತನ್ ಅವರ ಕುಟುಂಬಸ್ಥರಿಗೆ ಇಡಿ ರಾಜ್ಯದ ಬಹುಸಂಖ್ಯಾತ ಜನರ ಬೆಂಬಲವಿದೆ ಎಂದು ಧೈರ್ಯ ತುಂಬುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕುಣಿಗಲ್ ಅಹಿಂದಾ ಜನಾಂಗದ ಕ್ಷೇಮಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಧನುಂಜಯ್ ವಿ.ಎಸ್., ಡಾ.ಬಿ.ಆರ್.ಅಂಬೇಡ್ಕರ್ ಯುವಸೇನೆ ಬಳ್ಳಾರಿ ಜಿಲ್ಲಾಧ್ಯಕ್ಷ ಪಿ.ಸಂತೋಷ್ ಕುಮಾರ್,ಮುಖಂಡ ನರಸಿಂಹಮೂರ್ತಿ ಉಪಸ್ಥಿತರಿದ್ದರು.
ವರದಿ: ಎ.ಎನ್. ಪೀರ್, ತುಮಕೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB