ತುಮಕೂರು: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಟ್ಟ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನ ಸಂಕಷ್ಟ ಕಾಲದಲ್ಲಿ ಪ್ರಾಣದ ಹಂಗು ತೊರೆದು, ಕೊರೊನಾ ಸೋಂಕಿತರನ್ನು ಆರೈಕೆ ಮಾಡಿದ ಗುತ್ತಿಗೆ ನೌಕರರನ್ನು ಮುಂದುವರಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದೆ.
ತುಮಕೂರು ಘಟಕದ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ರವರ ನೇತೃತ್ವದಲ್ಲಿ ಗುತ್ತಿಗೆ ನೌಕರರ ನೇತೃತ್ವದ ತಂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದಲ್ಲಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಿದ ಕೊರೊನಾ ವಾರಿಯರ್ಸ್ ಗಳ ಗುತ್ತಿಗೆ ಅವಧಿ ಈ ತಿಂಗಳು ಮುಗಿಯುತ್ತಿದ್ದು, ಇರುವವರೆಗೂ ಅಲ್ಪ ಅವಧಿಗೆ ಕೆಲಸ ನಿರ್ವಹಿಸಿದ ನಾವು, ಸಂಕಷ್ಟ ಕಾಲದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸಿದ್ದೇವೆ. ಆದರೆ ಈಗ ಗುತ್ತಿಗೆ ಅವಧಿ ಮುಗಿದು ಈ ತಿಂಗಳು ಅವರ ಸೇವೆ ಕೊನೆಗೊಳ್ಳಲಿದೆ. ಸರ್ಕಾರ ಗುತ್ತಿಗೆ ನೌಕರರ ಸೇವೆಯನ್ನು ಗುರುತಿಸಿ ಕೆಲಸದಲ್ಲಿ ಮುಂದುವರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೊರೊನಾ ಸಂಕಷ್ಟ ಕಾಲದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 46 ಶುಶ್ರೂಷಕರು, 8 ಲ್ಯಾಬ್ ಟೆಕ್ನಿಷಿಯನ್ ಗಳು, 26 ಗ್ರೂಪ್ ಡಿ ಸೇರಿದಂತೆ ಒಟ್ಟಾರೆಯಾಗಿ 87 ಮಂದಿ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿದ್ದೇವೆ. ಕೊರೊನಾ 1, 2 ಹಾಗೂ 3 ಅಲೆಯ ಅವಧಿಯಲ್ಲಿ ನಾವು ನಮ್ಮ ಮನೆ, ಸಂಸಾರ, ಮಕ್ಕಳನ್ನು ಬಿಟ್ಟು ಬಂದು ರಾಜ್ಯದ ಸಾರ್ವಜನಿಕರ ಸೇವೆಗಾಗಿ ನಮ್ಮ ಪ್ರಾಣ ಪಣವಾಗಿಟ್ಟು ಹಗಲು-ರಾತ್ರಿ ಶ್ರಮಿಸಿದ್ದೇವೆ.
ಈಗ ನಮ್ಮ ಗುತ್ತಿಗೆ ಅವಧಿ ಮುಗಿಯುತ್ತಿದ್ದು, ಇದರಿಂದ ನಮ್ಮ ಕುಟುಂಬಗಳು ಬೀದಿಗೆ ಬರುವಂತಾಗಿದೆ ಹಾಗಾಗಿ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಹಾಲಿ ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಮುಂದುವರಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ತುಮಕೂರು ಜಿಲ್ಲಾ ಆಸ್ಪತ್ರೆಯ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy