ತುಮಕೂರು: ಬರ ಪರಿಸ್ಥಿತಿಯಲ್ಲಿ ಹೈನುಗಾರಿಕೆ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದೆ. ಹಾಗಾಗಿ ಹೈನುಗಾರರ ನೆರವಿಗೆ ತುಮಕೂರು ಹಾಲು ಒಕ್ಕೂಟ ಹಲವಾರು ಕ್ರಮಗಳನ್ನು ಪಶುಪಾಲನೆ ಮತ್ತು ಪಶು ಸಂಗೋಪನಾ ಇಲಾಖೆಯ ಸಹಯೋಗದಲ್ಲಿ ಕೈಗೊಂಡಿದೆ ಎಂದು ತುಮುಲ್ ನ ನಿರ್ದೇಶಕ ಸಂಜೀವಗೌಡ ತಿಳಿಸಿದ್ದಾರೆ.
ನಗರದ ಕಾಲ್ ಟ್ಯಾಕ್ಸ್ ಸರ್ಕಲ್ ನಲ್ಲಿರುವ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಕಚೇರಿ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ತುಮಕೂರು, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಸವಲತ್ತುಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಪಶು ಇಲಾಖೆ ಮತ್ತು ಡೈರಿ ಒತ್ತಾಸೆಯ ಫಲವಾಗಿ ತುಮುಲ್ಗೆ ಬರುತ್ತಿದ್ದ ಹಾಲಿನ ಸಂಗ್ರಹ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದೆ. ತುಮಕೂರು ತಾಲೂಕು ಒಂದರಲ್ಲಿಯೇ 1 ಲಕ್ಷ ಲೀಟರ್ ಬರುತ್ತಿದ್ದ ಹಾಲು, ಪ್ರಸ್ತುತ 1.42 ಲಕ್ಷ ಲೀಟರ್ಗೆ ಹೆಚ್ಚಳವಾಗಿದೆ. ಬಡ್ಜಿನ ಅಂಶದ ಆಧಾರದಲ್ಲಿ ರೈತರು ಒಂದು ಲೀಟರ್ಗೆ ಗರಿಷ್ಠ 50 ರೂ ಪಡೆಯುತ್ತಿದ್ದಾರೆ. ಇದು ಗ್ರಾಮೀಣ ಭಾಗದಲ್ಲಿ ಆರ್ಥಿಕ ಸಬಲೀಕರಣಕ್ಕೆ ಸಹಾಯವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೂಳೂರು ಶಿವಕುಮಾರ್ ಮಾತನಾಡಿ, ಸರ್ಕಾರ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಂತ್ರೋಪಕರಣಗಳನ್ನು ವಿತರಿಸುತ್ತಿದೆ. ಇದರಿಂದ ಗ್ರಾಮೀಣ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ತುಮಕೂರು ತಾಲೂಕು ಸಹಾಯಕ ನಿರ್ದೇಶಕರಾದ ಡಾ.ವಿ.ಸಿ.ರುದ್ರಪ್ರಸಾದ್, ಸರ್ಕಾರ 2025-26 ನೇ ಸಾಲಿನಲ್ಲಿ ಫಲಾನುಭವಿಗಳಿಗೆ ಇಂದು 23 ಮೇವು ಕತ್ತರಿಸುವ ಯಂತ್ರ, 68 ರಬ್ಬರ್ ನೆಲಹಾಸು, ಇದು ಹಾಲು ಕರೆಯುವ ಯಂತ್ರ, ಡೈರಿಯ ಸಹಕಾರದಲ್ಲಿ ಮೇವಿನ ಕಿಟ್ ವಿತರಿಸಲಾಗುತ್ತಿದೆ. ಈ ವರ್ಷದಲ್ಲಿ ಹೆಚ್ಚಿನ ಫಲಾನುಭವಿಗಳಿಗೆ ಸವಲತ್ತು ನೀಡುವ ಸಲುವಾಗಿ ಹೆಚ್ಚಿನ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರದ ಅನುಮೋದನೆಗೆ ಕಳುಹಿಸಿದೆ. ಸರ್ಕಾರ ನೀಡುವ ಸವಲತ್ತುಗಳನ್ನು ಬಳಕೆ ಮಾಡಿಕೊಂಡು, ಹೈನುಗಾರಿಕೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಹೆಚ್.ಎಂ.ಶಿವಪ್ರಸಾದ್ ಮಾತನಾಡಿ, ರೈತರಿಗೆ ವಿವಿಧ ಸವಲತ್ತುಗಳ ಜೊತೆಗೆ, ಮೇವಿನ ಬೀಜದ ಕಿಟ್ ವಿತರಿಸುತ್ತಿರುವುದು ವಿನೂತನ ಕಾರ್ಯಕ್ರಮವಾಗಿದೆ. ಬರವನ್ನು ಎದುರಿಸಲು ಇದು ಒಳ್ಳೆಯ ಪರಿಹಾರ. ರಾಷ್ಟ್ರೀಯ ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಈ ವರ್ಷ ಶೇ 10ರಷ್ಟು ಮಳೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿದೆ. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಸಾಧ್ಯವಾದಷ್ಟು ಮೇವು ಬೆಳೆದು, ಸಂಗ್ರಹಿಸುವ ಉದ್ದೇಶದಿಂದ ಜಿಲ್ಲೆಯಲ್ಲಿರುವ ಸುಮಾರು 1 ಲಕ್ಷ ನೀರಿನ ಸೌಲಭ್ಯ ಹೊಂದಿರುವ ರೈತರಿಗೆ ತುಮುಲ್ ಸಹಯೋಗದಲ್ಲಿ ತಲಾ ಒಂದು ಮೇವಿನ ಬೀಜದ ಕಿಟ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 80 ಸಾವಿರ ಕಿಟ್ ವಿತರಿಸಲಾಗಿದೆ ಎಂದರು.
ಈ ವೇಳೆ ಕುರಿ ನಿಗಮದ ಸಹಾಯಕ ನಿರ್ದೇಶಕ ಡಾ.ಮೋಹನ್ ಸೇರಿದಂತೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
