ದಾಬಸ್ಪೇಟೆಯ ತ್ಯಾಮಗೊಂಡ್ಲು ಹೋಬಳಿ ತಡಸಿಘಟ್ಟಗ್ರಾಮದ ಕುಟುಂಬವೊಂದು ಪಿತ್ರಾರ್ಜಿತ ಆಸ್ತಿಯನ್ನ ಕಳೆದುಕೊಂಡು ಮನನೊಂದು ಕುಟುಂಬದ ಎಲ್ಲಾ ಸದಸ್ಯರು ತಹಶೀಲ್ದಾರ್ಮೂಲಕ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಮನವಿ ಸಲ್ಲಿಸಿದ್ದಾರೆ.
ತಡಸಿಘಟ್ಟದ ಗಂಗಹನುಮಕ್ಕ ಕುಟುಂಬದ 26 ಸದಸ್ಯರು ನೆಲಮಂಗಲ ತಹಶೀಲ್ದಾರ್ ಕಚೇರಿ ಎದುರು ದಯಾಮರಣ ಕೋರಿ ಪತ್ರ ಬರೆದು ಸಹಿ ಹಾಕಿ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ತಡಸೀಘಟ್ಟಗ್ರಾಮದಲ್ಲಿನ ಸರ್ವೆ ನಂ. 73ರಲ್ಲಿ ತಮ್ಮ 3. 22 ಎಕರೆ ಜಮೀನನ್ನು ಗ್ರಾಮದ ರಾಜಗೋಪಾಲಯ್ಯ ಎಂಬ ವ್ಯಕ್ತಿಗೆ ಗಂಗಹನುಮಕ್ಕನ ತಂದೆ ದಿ. ಭೈರಣ್ಣ 10-06-1981ರಂದು 3500 ರೂ.ಗಳಿಗೆ ವಾಯಿದೆ ಕ್ರಯಕ್ಕೆ ಕೊಟ್ಟಿದ್ದರು. ಆದರೆ ರಾಜಗೋಪಾಲಯ್ಯ ನಕಲಿ ದಾಖಲೆ ಸೃಷ್ಟಿಸಿ ವಾಯಿದೆ ಕ್ರಯಕ್ಕೆ ಕೊಟ್ಟಿದ್ದ ಜಮೀನನ್ನು ರಾಜಕೀಯ ಪ್ರಭಾವ ಬಳಸಿ ಶುದ್ಧ ಕ್ರಯ ಮಾಡಿಕೊಂಡು ವಂಚಿಸಿರುವುದಾಗಿ ಆರೋಪಿಸಿದ್ದಾರೆ.
ಕುಟುಂಬದ ಹಿರಿಯ ನಾರಾಯಣಪ್ಪ ಪ್ರತಿಕ್ರಿಯಿಸಿ, ನಮ್ಮ ತಂದೆ ಕಾಲವಾದ ನಂತರ ಜಮೀನು ವಾಪಸ್ ಪಡೆಯಲು ತೆರಳಿದಾಗ ಇವತ್ತು, ನಾಳೆ ಅಂತ ಕಾಲಹರಣ ಮಾಡಿಕೊಂಡು 2012ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಸಲ್ಲಿಸಿ ಅವನ ಹೆಸರಿಗೆ ಮಾಡಿಕೊಂಡಿದ್ದಾನೆ. ನಂತರ ಈ ಬಗ್ಗೆ ಕೋರ್ಚ್ಮೆಟ್ಟಿಲು ಹತ್ತಿದರೂ ನ್ಯಾಯ ಸಿಗುತ್ತಿಲ್ಲ ಎಂದಿದ್ದಾರೆ.
ತ್ಯಾಮಗೊಂಡ್ಲು ಠಾಣೆಗೆ ರಾಜಗೋಪಾಲಯ್ಯನ ಬಳಿ ಇರುವ ಶುದ್ಧ ಕ್ರಯ ಪತ್ರದ ಮೇಲೆ ಇರುವ ಸಹಿ ಅಸಲಿ ಅಥವಾ ನಕಲಿ ಎಂದು ತಿಳಿಯಬೇಕಾದರೆ ಆ ಸಹಿಗಳ ಎಫ್ಎಸ್ಎಲ್ ಪರೀಕ್ಷೆಯಾಗುವಂತೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. .ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಕಡೆಯ ಪ್ರಯತ್ನವೆಂದು ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ನೆಲಮಂಗಲ ತಹಶೀಲ್ದಾರ್ಮುಖಾಂತರ ಅರ್ಜಿ ಸಲ್ಲಿಸಿದ್ದೇವೆ. ಅರ್ಜಿ ಸ್ವೀಕರಿಸಿರುವ ತಹಸೀಲ್ದಾರ್ ಮಂಜುನಾಥ್ ಸಮಸ್ಯೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ನಾರಾಯಣಪ್ಪ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz