ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿರುವ ಮೇಕೆದಾಟು ಯೋಜನೆಯ ಕಾಮಗಾರಿಯನ್ನು ಪ್ರಾರಂಭಿಸಲು ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಕರ್ನಾಟಕ ಹೈಕೋರ್ಟ್ ಗುರುವಾರದಂದು ಆಕ್ಷೇಪ ವ್ಯಕ್ತಪಡಿಸಿದೆ.
ಇನ್ನು ಮುಂದೆ ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನೆ ನಡೆಸದಂತೆ ಕಾಂಗ್ರೆಸ್ಗೆ ನ್ಯಾಯಾಲಯ ಆದೇಶಿಸಿದೆ.ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಪ್ರತಿಭಟನೆಗಳು ಮತ್ತು ಆಂದೋಲನಗಳು ಬೆಂಗಳೂರಿನ ಫ್ರೀಡಂ ಪಾರ್ಕ್ ಆವರಣಕ್ಕೆ ಸೀಮಿತವಾಗಿದ್ದು, ವಾಹನ ಸವಾರರು ಮತ್ತು ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪೀಠವು ಸರ್ಕಾರಕ್ಕೆ ತಿಳಿಸಿದೆ
“ನಾವು ಹೈಕೋರ್ಟ್ (Karnataka High Court) ತಲುಪಲು ಒಂದು ಗಂಟೆ ತೆಗೆದುಕೊಂಡಿದ್ದೇವೆ.ಸಾಮಾನ್ಯ ಜನರು ಹೇಗೆ ಪ್ರಯಾಣಿಸಬೇಕು ಹೇಳಿ ? ಸರ್ಕಾರ ಈ ಬಗ್ಗೆ ನಿರ್ಬಂಧಗಳನ್ನು ಹೊರಡಿಸಬೇಕು,”ಎಂದು ಪೀಠ ಹೇಳಿದೆ.ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಸೇವಕರು ಘೋಷಿಸಿದ ಆದೇಶಕ್ಕೆ ಅಸಹಕಾರ) ಮತ್ತು ಕರ್ನಾಟಕ ಪೊಲೀಸ್ ಕಾಯಿದೆ, 1963 ರ ಅಡಿಯಲ್ಲಿ ಕಾನೂನು ಕ್ರಮಗಳನ್ನು ಪ್ರಾರಂಭಿಸಲು ನ್ಯಾಯವ್ಯಾಪ್ತಿಯ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಅಧಿಕಾರ ನೀಡಲು ಆದೇಶವನ್ನು ಹೊರಡಿಸಲಾಗಿದೆ. ಜನವರಿಯಲ್ಲಿ COVID-19 ರ ಮೂರನೇ ಅಲೆಯಿಂದಾಗಿ ತಾತ್ಕಾಲಿಕವಾಗಿ ರದ್ದಾದ ನಂತರ ಕಾಂಗ್ರೆಸ್ ಮಾರ್ಚ್ 1 ರಂದು ಮೇಕೆದಾಟು ಪಾದಯಾತ್ರೆ (Mekedatu Padayatre) ಯನ್ನು ಮರುಪ್ರಾರಂಭಿಸಿತು, ಮಾರ್ಚ್ 3 ರಂದು ಸಂಜೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾದಯಾತ್ರೆ ಮುಕ್ತಾಯವಾಯಿತು.
ಇನ್ನೊಂದೆಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ನಾಗರಿಕರಲ್ಲಿ ಕ್ಷಮೆಯಾಚಿಸಿದರು.”ಬೆಂಗಳೂರಿನ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ, ಏಕೆಂದರೆ ಮುಂದಿನ ಮೂರು ದಿನಗಳವರೆಗೆ ಬೆಂಗಳೂರಿನ ಕೆಲವು ಭಾಗಗಳಲ್ಲಿ ಟ್ರಾಫಿಕ್ ತೊಂದರೆ ಉಂಟಾಗುತ್ತದೆ. ಮೂರು ದಿನಗಳವರೆಗೆ ಟ್ರಾಫಿಕ್ ತೊಂದರೆ ಇರಬಹುದು, ಆದರೆ ಇದು ಮುಂದಿನ 50 ವರ್ಷದವರೆಗೆ ನಿಮ್ಮ ನೀರಿನ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ.ನಮ್ಮ ಹೋರಾಟ ರಾಜ್ಯದ ಜನತೆ ಮತ್ತು ಬೆಂಗಳೂರಿನ ನಾಗರಿಕರಿಗಾಗಿ, ಆದ್ದರಿಂದ ದಯವಿಟ್ಟು ನಮಗೆ ಸಹಕರಿಸಿ” ಎಂದು ಅವರು ಮನವಿ ಮಾಡಿದರು.
ಈಗ ಡಿಕೆಶಿ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಕರ್ನಾಟಕದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ವರದಿ: ಆಂಟೋನಿ ಬೇಗೂರು