ತುಮಕೂರು: ಒಳಮೀಸಲಾತಿ ಕಲ್ಪಿಸುವುದಕ್ಕಾಗಿ ರಾಜ್ಯದಲ್ಲಿ ನಡೆದಿರುವ ಸಮೀಕ್ಷೆಯಲ್ಲಿ ಮನೆಗೆ ಬರುವ ಸಮೀಕ್ಷೆ ಅಧಿಕಾರಿಗಳಿಗೆ ಜಿಲ್ಲೆಯ ಲಂಬಾಣಿ ಸಮುದಾಯದವರು ತಪ್ಪದೇ ಬಂಜಾರ (ಲಂಬಾಣಿ) ಎಂದು ನಮೂದಿಸಬೇಕು ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಜಯದೇವನಾಯ್ಕ ಮನವಿ ಮಾಡಿದರು.
ಬಂಜಾರ ಭವನದಲ್ಲಿ ಗುರುವಾರ ನಡೆದ ಮುಖಂಡರ ಸಭೆಯಲ್ಲಿ ಸೇವಾಲಾಲ್ ಹಾಗೂ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಬಂಜಾರ ಸಮುದಾಯದವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದಾರೆ. ನಮಗೆ ನಿರ್ದಿಷ್ಟ ಕುಲಕಸುಬು ಇಲ್ಲ, ಕೂಲಿನಾಲಿ ನಂಬಿ ಬದುಕುತ್ತಿರುವವರು. ಈ ಪರಿಸ್ಥಿತಿಯಲ್ಲಿ ಸರ್ಕಾರದ ಮೀಸಲಾತಿ ಸೌಲಭ್ಯ ಪಡೆಯಲು ಸಮುದಾಯದವರು ತಮ್ಮದೇ ಸಮೀಕ್ಷೆಯಲ್ಲಿ ಭಾಗವಹಿಸಿ ನಿಖರವಾದ ಮಾಹಿತಿಯನ್ನು ನೋಂದಾಯಿಸುವಂತೆ ಕೋರಿದರು.
ಹಿರಿಯ ನ್ಯಾಯವಾದಿ ಅನಂತ ನಾಯ್ಕ ಮಾತನಾಡಿ, ಈ ತಿಂಗಳ 5ರಿಂದ 17ರವರೆಗೆ ಮನೆಮನೆಗೆ ಬಂದು ಸಮೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಸುಮಾರು 58 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರಲ್ಲಿ ಶೇಕಡ 50 ರಷ್ಟು ಮಂದಿ ಇನ್ನೂ ಕೆಲಸ ಆರಂಭಿಸಿಲ್ಲ ಎಂದು ತಿಳಿದು ಬಂದಿದೆ. ಜೊತೆಗೆ ತಾಂತ್ರಿಕ ಸಮಸ್ಯೆಗಳೂ ಎದುರಾಗಿವೆ. ಹೀಗಾಗಿ ಸಮೀಕ್ಷೆ ಅವಧಿಯನ್ನು ವಿಸ್ತರಿಸಬೇಕು ಎಂದು ಸರ್ಕಾರವನ್ನು ಕೋರಿದರು.
ಕೆಲ ಲಂಬಾಣಿ ತಾಂಡಾಗಳಲ್ಲಿ ಸಮೀಕ್ಷೆಗೆ ಬಂದ ಅಧಿಕಾರಿಗಳು ಲಂಬಾಣಿ ಬದಲು ತಮ್ಮ ಜಾತಿ ಹೆಸರು ನೋಂದಣಿ ಮಾಡಿಕೊಂಡಿರುವ ದೂರುಗಳು ಬಂದಿವೆ. ಅಂತಹಅಧಿಕಾರಿ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ಪ್ರಕರಣಗಳು ನಡೆಯದಂತೆ ವಿದ್ಯಾವಂತರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಬಂಜಾರ ಸಂಘದ ಮುಖಂಡ ಶೇಷಾ ನಾಯ್ಕ ಮಾತನಾಡಿ, ನಗರದ ಬಂಜಾರ ಭವನ ನಿರ್ಮಾಣಕ್ಕೆ ತಾಂಡಾಅಭಿವೃದ್ಧಿ ನಿಗಮದಿಂದ 21 ಲಕ್ಷ ರೂ. ಮಂಜೂರು ಮಾಡಿ ನೆರವಾಗಿರುವ ನಿಗಮದ ಅಧ್ಯಕ್ಷ ಜಯದೇವನಾಯ್ಕ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಜಿಲ್ಲಾ ಬಂಜಾರ ಸಂಘದಅಧ್ಯಕ್ಷ ನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಬಿ.ಶಂಕರ್, ಮುಖಂಡರಾದ ದೇನಾ ನಾಯ್ಕ, ಚಂದ್ರಾ ನಾಯ್ಕ, ಕುಬೇಂದ್ರ ನಾಯ್ಕ, ಮಹಿಳಾ ಘಟಕ ಅಧ್ಯಕ್ಷ ಶಾಂತಮ್ಮ, ಡಿಪೋರಮೇಶ್ ಮೊದಲಾದವರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW