ಸರಗೂರು: ದಲಿತರು ದೇವಸ್ಥಾನಕ್ಕೆ ಪ್ರವೇಶಿಸ ಬಾರದು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ 3 ವರ್ಷಗಳಿಂದ ಬೀಗ ಜಡಿಯಲಾಗಿದ್ದ ತಾಲ್ಲೂಕಿನ ಸಾಗರೆ ಗ್ರಾಪಂ ಸಾಗರೆ ಗ್ರಾಮದ ಮಾರಮ್ಮನ ದೇವಸ್ಥಾನದ ಬಾಗಿಲು ಕೊನೆಗೂ ತೆರೆಯಲಾಗಿದೆ.
ಜಾತಿ ಶ್ರೇಷ್ಠತೆ ಎಂಬ ಕಾಯಿಲೆಯಿಂದಾಗಿ ಭಕ್ತಿಯ ಕೇಂದ್ರವಾಗಿರುವ ದೇವಸ್ಥಾನಕ್ಕೆ ಬೀಗ ಜಡಿಯಲು ಜಿಲ್ಲಾಧಿಕಾರಿಗಳು ಅನಿವಾರ್ಯವಾಗಿ ಆದೇಶ ನೀಡಿದ್ದರು. ಇದೀಗ ಮೂರು ವರ್ಷಗಳ ಬಳಿಕ ಇಂದು ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಹಾಗೂ ಇನ್ಸ್ ಪೆಕ್ಟರ್ ಶ್ರಾವಣ ದಾಸ ರೆಡ್ಡಿ ಸಮ್ಮುಖದಲ್ಲಿ ನಡೆದ ಸಭೆಯ ಬಳಿಕ ದೇವಸ್ಥಾನದ ಬಾಗಿಲು ತೆರೆಯಲಾಗಿದೆ.
ಇದೇ ಸಂದರ್ಭದಲ್ಲಿ ಗ್ರಾಮದ 12 ವಿವಿಧ ಜಾತಿ, ಜನಾಂಗಗಳ ಯಜಮಾನರು ಹಾಗೂ ಮುಖಂಡರನ್ನು ಕರೆದು ಶಾಂತಿ ಸಭೆ ನಡೆಸಲಾಗಿದ್ದು, ಎಲ್ಲರು ಕೂಡ ಒಗ್ಗೂಡಿ ದೇವಸ್ಥಾನ ಕಾರ್ಯಗಳಲ್ಲಿ ಭಾಗವಹಿಸುವ ನಿರ್ಧಾರದೊಂದಿಗೆ ಕೊನೆಗೂ ದೇವಸ್ಥಾನ ತೆರೆಯಲಾಗಿದೆ.
ದಲಿತರು ದೇವಸ್ಥಾನಕ್ಕೆ ಪ್ರವೇಶಿಸಬಾರದು, ಜಾತ್ರೆಯಲ್ಲಿ ಪಾಲ್ಗೊಳ್ಳಬಾರದು ಎಂಬ ಕೆಲವು ಜಾತಿವಾದಿ ಮನಸ್ಥಿತಿಗಳಿಂದಾಗಿ ಈ ದೇವಸ್ಥಾನಕ್ಕೆ ಮೂರು ವರ್ಷಗಳ ಕಾಲ ಬೀಗ ಜಡಿಯಲಾಗಿತ್ತು. ಇದೀಗ ಕೊನೆಗೂ ಮಾರಮ್ಮ ಜಾತಿವಾದಿಗಳಿಗೆ ಒಳ್ಳೆಯ ಬುದ್ಧಿ ನೀಡಿದ್ದು, ಎಲ್ಲರೂ ಜೊತೆಯಾಗಿ ದೇವಸ್ಥಾನದ ಕಾರ್ಯಗಳಲ್ಲಿ ಭಾಗವಹಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಸೌಹಾರ್ದಯುತವಾಗಿ ತೆರೆಯಲಾಗಿದೆ.