ಚಿತ್ರದುರ್ಗ: ಬುಡಕಟ್ಟು ಜನಾಂಗಕ್ಕೆ ಸೇರಿದ ರಾಜ್ಯ ಕಾಡುಗೊಲ್ಲರ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ತುಂಬಾ ಹಿಂದುಳಿದ ಸಮಾಜವಾಗಿದ್ದು, ಈ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಎಲ್ಲಾ ಅರ್ಹತೆ ಹೊಂದಿದ್ದು, ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಿದ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಶಿವಲಿಂಗೇಗೌಡರು, ಮಾಧುಸ್ವಾಮಿ, ರಂಗನಾಥ್ ಕುಣಿಗಲ್, ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಎಲ್ಲಾ ಶಾಸಕರುಗಳನ್ನು ಪಕ್ಷಾತೀತವಾಗಿ ಕಾಡುಗೊಲ್ಲ ಸಮಾಜದಿಂದ ಅಭಿನಂದಿಸುತ್ತೇವೆ ಎಂಬುದಾಗಿ ಕಾಡುಗೊಲ್ಲರ ಮುಖಂಡ ಹಾಗೂ ಜಿ.ಪಂ.ಸದಸ್ಯರಾದ ಸಿ.ಬಿ.ಪಾಪಣ್ಣ ಹೇಳಿದರು.
ಹಿರಿಯೂರು ನಗರದ ಎನ್ .ಹೆಚ್. 4ರ ಬಳಿ ಇರುವ ನಗರದ ಸಂಗೀತ ಕಂರ್ಪಟ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಡುಗೊಲ್ಲರ ಸಮಾಜದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಡುಗೊಲ್ಲರ ಮುಖಂಡರಾದ ಗೋಪಿಯಾದವ್ ಮಾತನಾಡಿ, ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಡುಗೊಲ್ಲ ಸಮಾಜದ ಹೆಚ್ಚು ಜನರಿದ್ದು, ಈ ಜನರಿಂದ ಮತ ಪಡೆದು ಆಯ್ಕೆಯಾದ ನಮ್ಮ ಜಿಲ್ಲೆಯ ಶಾಸಕರುಗಳಾದ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಚಳ್ಳಕೆರೆ ಶಾಸಕ ರಘುಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಾಮುಲು ಸೇರಿದಂತೆ ಯಾರೊಬ್ಬರೂ ಸಹ ಬೆಳಗಾವಿ ಅಧಿವೇಶನದಲ್ಲಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಧ್ವನಿ ಎತ್ತದಿರುವುದು ನಮ್ಮ ಸಮಾಜಕ್ಕೆ ಅತೀವ ನೋವು ತಂದಿದೆ ಎಂದರಲ್ಲದೆ, ಮುಂದಿನ ದಿನಗಳಲ್ಲಾದರೂ ಈ ಶಾಸಕರುಗಳು ಸದನದಲ್ಲಿ ಕಾಡುಗೊಲ್ಲರನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವ ಬಗ್ಗೆ ಧ್ವನಿ ಎತ್ತಬೇಕು ಎಂಬುದಾಗಿ ಆಗ್ರಹಿಸಿದರು.
ಜಿಲ್ಲಾ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ಮ್ಯಾಕ್ಲೂರಹಳ್ಳಿ ಮಾತನಾಡಿ, ಕಾಡುಗೊಲ್ಲ ಜನಾಂಗ ಪರಿಶಿಷ್ಠ ಪಂಗಡಕ್ಕೆ ಸೇರಿಸಬಹುದಾದ ಅರ್ಹ ಜನಾಂಗವಾಗಿದೆ ಎಂಬ ಬಗ್ಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾದ ದ್ವಾರಕ್ ನಾಥ್ ರವರು ಕುಮಾರಸ್ವಾಮಿ ಸರ್ಕಾರಕ್ಕೆ ವಿಚಾರ ಮಂಡಿಸಿದ್ದು, ಆಗ ಸರ್ಕಾರ ಈ ಬಗ್ಗೆ ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶ ಮಾಡಲಾಗಿತ್ತು. ಆನಂತರ ಬಂದ ಸಿದ್ಧರಾಮಯ್ಯನವರ ಸರ್ಕಾರ ಕುಲಶಾಸ್ತ್ರ ಅಧ್ಯಯನ ಪೀಠದ ಅನ್ನಪೂರ್ಣಮ್ಮನವರ ವರದಿಯನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಕಳುಹಿಸಿಕೊಡಲಾಗಿತ್ತು.
ಮೊನ್ನೆ ನೆಡೆದ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸುವುದಲ್ಲದೆ, ಪ್ರಧಾನಿ ಮೋದಿ ಜೊತೆಗೆ ಚರ್ಚಿಸಿ, ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಭರವಸೆ ನೀಡಿದ್ದು, ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಈ ಭರವಸೆ ಈಡೇರಿಸಬೇಕಿದೆ ಎಂಬುದಾಗಿ ಅವರು ಒತ್ತಾಯಿಸಿದರಲ್ಲದೆ, ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿರುವ ಎಲ್ಲ ಶಾಸಕರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಭೆಯಲ್ಲಿ ಕಾಡುಗೊಲ್ಲ ಸಮಾಜದ ಮುಖಂಡರು ಹಾಗೂ ರಾಜ್ಯ ಒಬಿಸಿ ಉಪಾಧ್ಯಕ್ಷರಾದ ಎಸ್.ಆರ್.ತಿಪ್ಪೇಸ್ವಾಮಿ ಶ್ರವಣಗೆರೆ, ಹಿರಿಯ ಮುಖಂಡರಾದ ರಾಮಣ್ಣ ಕೂನಿಕೆರೆ, ಮೂಡ್ಲಪ್ಪ, ರಾಮಕೃಷ್ಣಪ್ಪ, ನಗರಸಭೆ ಮಾಜಿ ಸದಸ್ಯ ಪ್ರೇಮಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಿತ್ರಜಿತ್ ಯಾದವ್, ಕೃಷ್ಣಮೂರ್ತಿ ಪೂಜಾರಿ, ಯುವ ಮುಖಂಡರಾದ ಪ್ರಭುಯಾದವ್, ನಂದೀಶ್, ಕಿರಣ್ ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB