ಕೋಲಾರ: ಪ್ರಧಾನಿ ಮೋದಿ ಅವರು ಈ ಕರ್ನಾಟಕ ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಅನ್ನೋದನ್ನು ಮೊದಲು ಹೇಳಲಿ, ಕಾಂಗ್ರೆಸ್ಗೆ ಬೈದಿದ್ದೇ ಅವರ ಕೊಡುಗೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಮಾಲೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ ಈ ಲೋಕಸಭಾ ಚುನಾವಣೆಯನ್ನು ಸಾಮಾನ್ಯ ಎಂದು ಭಾವಿಸಬೇಡಿ. ಬಿಜೆಪಿಯನ್ನು ಸೋಲಿಸಿದ ಬಳಿಕ 2024ರ ಈ ಚುನಾವಣೆ ಎಷ್ಟು ಮಹತ್ವದ್ದಾಗಿದೆ ಎಂಬುದು ತಿಳಿದು ಬರಲಿದೆ.’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮೊನ್ನೆ ಮೈಸೂರಿಗೆ ಬಂದಾಗ ಮಾತನಾಡಿದ 30 ನಿಮಿಷದಲ್ಲಿ 10 ನಿಮಿಷ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ ಇನ್ನು 20 ನಿಮಿಷ ಕಾಂಗ್ರೆಸ್ ಗೆ ಬೈದಿದ್ದಾರೆ. ಈ ರಾಜ್ಯಕ್ಕೆ ಅವರು ಏನು ಕೊಟ್ಟಿದ್ದಾರೆ ಮೊದಲು ಹೇಳಲಿ. ಯಾರೇ ಬಿಜೆಪಿ ಮುಖಂಡ ಬಂದು ಮತ ಕೇಳಿದಾಗ ನೀವು ಅವರನ್ನು ಪ್ರಶ್ನಿಸಬೇಕು. ನರೇಗಾ ಹಣ ಕೊಟ್ಟಿದ್ದೀರಾ? ಬರಗಾಲದ ಪರಿಹಾರ ನೀಡಿದ್ದೀರಾ? ತೆರಿಗೆ ಹಣ ನೀಡಿದ್ದೀರಾ? ಎಂದು ಅವರನ್ನು ಪ್ರಶ್ನೆ ಮಾಡಬೇಕು ಎಂದು ಖರ್ಗೆ ಹೇಳಿದರು. ನಿರ್ಮಲಾ ಸೀತಾರಾಮನ್ ಅವರು ಸಿದ್ದರಾಮಯ್ಯ ಕೇಳಿದ ಒಂದು ಪ್ರಶ್ನೆಗೂ ಉತ್ತರ ಕೊಟ್ಟಿಲ್ಲ. ಇಂತಹ ಕೆಟ್ಟ ಸರ್ಕಾರವನ್ನು ತೆಗೆದು ಹಾಕಿ ಎಂದು ಕರೆ ನೀಡಿದರು.
ಕಾಂಗ್ರೆಸ್ ಈ ದೇಶಕ್ಕಾಗಿ ಸಾಕಷ್ಟು ಕೆಲಸ ಮಾಡಿದೆ. ಒಂದು ಕಾಲದಲ್ಲಿ ಬರಪೀಡಿತ ಜಿಲ್ಲೆಯಾಗಿದ್ದ ಕೋಲಾರ ಈಗ ಮಿಲ್ಕ್ ಆಂಡ್ ಸಿಲ್ಕ್ಗೆ ಫೇಮಸ್ ಆಗಿದೆ. ಕಾಂಗ್ರೆಸ್ ಸರ್ಕಾರದ ಶ್ರಮದಿಂದ ಕೆರೆ ತುಂಬಲು ನೀರು ಸಿಕ್ಕಿದೆ. ಆದರೆ ಇಂತಹ ಕೆಲಸ ಬಿಜೆಪಿಯಿಂದ ಆಗಿದೆಯಾ? ಮೋದಿಯವರದ್ದು ಸುಳ್ಳು ಹೇಳುವ ಸರ್ಕಾರ. ಗ್ಯಾರೆಂಟಿಯನ್ನು ವಿರೋಧಿಸಿದವರು ಈಗ ಮೋದಿ ಗ್ಯಾರೆಂಟಿ, ಮೋದಿ ಹೈ ತೋ ಮುಂಮ್ಕಿನ್ ಹೈ…ಅಂತಾರೆ. ಎಲ್ಲರಿಗೂ ನೌಕರಿ ಕೊಡ್ತೇನೆ ಎಂದರು …ಆದರೆ ಕೊಟ್ಟಿಲ್ಲ ನೌಕರಿ ಕೊಡದೇ ಇರುವುದೇ ಅವರ ಗ್ಯಾರೆಂಟಿ. ಪ್ರತಿ ಕಾರ್ಯಕ್ರಮಕ್ಕೂ ಮೋದಿ …ಮೋದಿ ಅಂತಾರೆ ಅವರು ಪಕ್ಷದ ಹೆಸರು ಹೇಳಲ್ಲ ಮೋದಿ ಹೆಸರು ಹೇಳ್ತಾರೆ…. ದಯಮಾಡಿ ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಭಾರಿ ಬಹುಮತದಿಂದ ಗೆಲ್ಲಿಸಿ ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296