ತಿಪಟೂರು : ನಿರಾಕಾರವಾಗಿರುವ ಚೈತನ್ಯ ಶಕ್ತಿಯಲ್ಲಿ ನಂಬಿಕೆ ಇರಿಸಿ ಶ್ರದ್ಧಾ ಭಕ್ತಿಯಿಂದ ನಡೆದಾಗ ಮಾತ್ರವೇ ಜ್ಞಾನ ಮತ್ತು ಮುಕ್ತಿಯ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಶಾಖಾಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಧಾರ್ಮಿಕ ಕ್ಷೇತ್ರವಾದ ಆದಿಚುಂಚನಗಿರಿ ಶಾಖಾಮಠದ ದಸರೀಘಟ್ಟದ ಚೌಡೇಶ್ವರಿ ದೇವಾಲಯದಲ್ಲಿ ಭಾನುವಾರ ಚೌಡೇಶ್ವರಿ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ‘ನವಚಂಡಿಯಾಗ’ದಲ್ಲಿ ಭಾಗವಹಿಸಿ ಪೂರ್ಣಾಹುತಿ ನೀಡಿ ಮಾತನಾಡಿದರು.
ಅಗೋಚರ ಹಾಗೂ ಅವ್ಯಕ್ತವಾದ ಶಕ್ತಿಯಲ್ಲಿ ವಿಜೃಂಭಿಸುವ ದೇವಿಯೂ ಜಗತ್ತನ್ನು ಕಾಪಾಡುತ್ತಿದ್ದಾಳೆ. ಇಂತಹ ದೇವಿಯ ಮಹಿಮೆಯನ್ನು ಅರಿಯಬೇಕಾದರೆ ಪಂಚೇಂದ್ರಿಯಗಳ ನಿಗ್ರಹ ಅತ್ಯವಶ್ಯಕ. ಪಂಚಭೂತಗಳಲ್ಲಿ ಅಪಾರ ನಂಬಿಕೆಯನ್ನು ಇರಿಸಿಕೊಂಡು ಬಹುನಿಷ್ಠೆಯಿಂದ ಶಕ್ತಿಯ ಆರಾಧನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಕಳೆದ 63 ವರ್ಷಗಳಿಂದ ಭಕ್ತರನ್ನು ಪೋಷಿಸಿಕೊಂಡು ಬರುತ್ತಿದ್ದ ಈ ದೇವಿಗೆ 353 ದಿನಗಳ ನಂತರ ಮತ್ತೇ ಪುನರ್ ಶಕ್ತಿಯನ್ನು ತುಂಬಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಪ್ರತಿಯೊಬ್ಬ ಮನುಷ್ಯನು ತಾಯಿಯ ಮೂಲಕವೇ ಇನ್ನುಳಿದ ದೇವಾನುದೇವತೆಗಳ ದರ್ಶನವನ್ನು ಮಾಡಬೇಕು. ಅವ್ಯಕ್ತವಾದ ಹಾಗೂ ಅಗೋಚರವಾದ ಶಕ್ತಿಯನ್ನು ತನ್ನಲ್ಲಿ ಗರ್ಭೀಕರಿಸಿಕೊಂಡಿರುವ ದೇವತೆಯನ್ನು ಪೂಜ್ಯ ಭಾವನೆಯಿಂದ ಪೂಜಿಸುತ್ತಾ ತಮ್ಮ ಅಂತರಂಗದಲ್ಲಿನ ಅಳಲುಗಳನ್ನು ತೋಡಿಕೊಳ್ಳಬೇಕು. ದಿವ್ಯಾನುಭವವನ್ನು ಪಡೆದುಕೊಳ್ಳಲು ನಿರ್ಮಲವಾದ ಮನಸ್ಸಿನಿಂದ ಹಾಗೂ ಪರಿಶುದ್ಧ ಹೃದಯದಿಂದ ಸದಾಕಾಲ ದೇವಿಯನ್ನು ಆರಾಧಿಸುವ ಮೂಲಕ ಮನಃಶಾಂತಿಯನ್ನು ಪಡೆದುಕೊಳ್ಳಬೇಕು. ಧರ್ಮ, ದಯೆಯಿಂದ ಕೂಡಿದ ಬದುಕನ್ನು ನಡೆಸುತ್ತಾ ದೇವರು ಮತ್ತು ಭಕ್ತನ ನಡುವೆ ಮಧುರ ಬಾಂಧವ್ಯಗಳನ್ನು ಬೆಸೆದುಕೊಂಡು ನೆಮ್ಮದಿಯನ್ನು ಕಾಣಬೇಕಾಗಿದೆ. ಯಾವುದೇ ಕಾರಣಕ್ಕೂ ದೈವದ ಬಗ್ಗೆ ಹಗುರವಾದ ಭಾವನೆಗಳನ್ನು ತಾಳದೇ ಭಕ್ತಿಯಿಂದ ಭಜಿಸಿದರೆ ಶಕ್ತಿಯ ಸಂಚಲನವಾಗಿ ಮನಸ್ಸು ಹಸನಾಗುತ್ತದೆ ಎಂದರು.
ಮುಕ್ತ ಮನಸ್ಸಿನಿಂದ ಅಂದು ಕೃಷ್ಣ ಕೊಟ್ಟಂತಹ ಸಂದೇಶವನ್ನು ಪಾಲಿಸಿದರೆ ನಮ್ಮ ಬದುಕಿಗೆ ಬೇಕಾದ ಜ್ಞಾನ ಪ್ರಾಪ್ತಿಯಾಗುತ್ತದೆ. ಆಧುನಿಕ ಕಾಲಕ್ಕೆ ಶ್ರೀಕೃಷ್ಣ ಎಷ್ಟು ಪ್ರಸ್ತುತವೋ, ಅಪ್ರಸ್ತುತವೋ ಎಂಬ ಸರಿಯಾದ ಚರ್ಚೆ ಯಾದಲ್ಲಿ, ಅಂದಿನ ಇಂದಿನ ಸಮಾಜಕ್ಕೆ ಕೃಷ್ಣ ಹೆಚ್ಚು ಪ್ರಸ್ತುತ. ಆದರೆ,ನಾವು ಕೃಷ್ಣನನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ.
ಈ ಸಂದರ್ಭದಲ್ಲಿ ದಸರೀಘಟ್ಟ ಶಾಖಾಮಠದ ಕಾರ್ಯದರ್ಶಿ ಚಂದ್ರಶೇಖರನಾಥ ಸ್ವಾಮೀಜಿ, ಮೈಸೂರು ಶಾಖಾಮಠದ ಸೋಮೇಶ್ವರನಾಥ ಸ್ವಾಮೀಜಿ, ಮಂಗಳೂರು ಶಾಖಾಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಶೃಂಗೇರಿ ಶಾಖಾಮಠದ ಗುಣನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳನಾಥ ಸ್ವಾಮೀಜಿ, ಕಬ್ಬಳಿ ಶಾಖಾಮಠದ ಶಿವಪುತ್ರ ಸ್ವಾಮೀಜಿ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಷಡಕ್ಷರಿ, ಮಾಜಿ ವಿಧಾನಪರಿಷತ್ ಸದಸ್ಯ ಡಿ.ಎಲ್.ಜಗದೀಶ್, ಶ್ರೀರಂಗ ಆಸ್ಪತ್ರೆಯ ವೈದ್ಯ ಡಾ.ವಿವೇಚನ, ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್, ಬೆಂಗಳೂರಿನ ರಾಮಕೃಷ್ಣಪ್ಪ, ಭಕ್ತಾಧಿಗಳಾದ ಡಾ.ಜಿತೇಂದ್ರ, ರವಿಸಿದ್ಧಪ್ಪ, ಲಲಿತಾದೇವಿ ಗೋಪಾಲ್, ಹಾಸನ ರವಿಕುಮಾರ್, ಗುಡಿಗೌಡ ಹುಚ್ಚೇಗೌಡ ಇದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB