ಕಾರವಾರ: ಕರ್ನಾಟಕ ಭೂಕಂದಾಯ ಅಧಿನಿಯಮ 1964ರ ಕಲಂ 94–ಎ(4) ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ನಮೂನಾ ನಂ.57 ರಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಬಗರ್ ಹುಕುಂ ತಂತ್ರಾಂಶದ ಮೂಲಕ ನಿರ್ವಹಿಸಲಾಗುತ್ತಿದ್ದು, ಈ ಪ್ರಕ್ರಿಯೆಯು ರಾಜ್ಯದಲ್ಲಿ ಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ, ಅರ್ಜಿಯ ಪ್ರಾರಂಭದಿಂದ ಕೊನೆವರೆಗೆ ಎಲ್ಲ ಹಂತಗಳು ಪೂರ್ಣವಾಗಿ ಆನ್ಲೈನ್ ಮೂಲಕ ನಿರ್ವಹಿಸಲಾಗಿದ್ದು, ಶಿರಸಿ ತಾಲೂಕಿನಲ್ಲಿ 4 ಜನ ರೈತರಿಗೆ ಮಂಜೂರಾತಿ ಪತ್ರ, ಸಾಗುವಳಿ ಚೀಟಿ, ಪಹಣಿ ಪತ್ರಿಕೆ, ಮ್ಯುಟೇಷಂನ್, ಪೋಡಿ ದಾಖಲೆಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ.
ಸದರಿ ಪ್ರಕ್ರಿಯೆಯು ಗ್ರಾಮ ಆಡಳಿತಾಧಿಕಾರಿಗಳಿಂದ ಮೊಬೈಲ್ ತಂತ್ರಾಂಶದ ಮೂಲಕ ಕ್ಷೇತ್ರ ಪರಿಶೀಲನದಿಂದ ಆರಂಭವಾಗಿ, ತದನಂತರ ಕಂದಾಯ ನಿರೀಕ್ಷಕರು, ಶಿರಸ್ತೇದಾರರು, ತಹಶೀಲ್ದಾರರ ಲಾಗಿನ್ ನ ಮೂಲಕ ಬಗರ್ ಹುಕುಂ ಸಮಿತಿಗೆ ತಂತ್ರಾಂಶದ ಮೂಲಕ ಅರ್ಜಿಯು ವರ್ಗಾವಣೆಗೊಳ್ಳುತ್ತದೆ. ನಂತರ ಸಮಿತಿಯ ತಾತ್ಕಾಲಿಕ ಮಂಜೂರಾತಿ ಶಿಫಾರಸ್ಸಿನೊಂದಿಗೆ 15 ದಿನಗಳ ತಕರಾರು ಅವಧಿ ಮುಕ್ತಾಯಗೊಂಡ ನಂತರ ಸರ್ವೆಯಿಂದ ಮಂಜೂರಿ ಪೂರ್ವ ನಕಾಶೆಯೊಂದಿಗೆ ಪುನಃ ಸಮಿತಿಯಲ್ಲಿ ಮಂಡಿಸಿ ಬಗರ ಹುಕುಂ ಸಮಿತಿಯ ಅನುಮೋದನೆಯನ್ನು ಪಡೆಯಲಾಗುತ್ತದೆ. ನಂತರ ಮೋಜಣಿ ತಂತ್ರಾಂಶದಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಮೂನೆ–10 ಸೃಜನೆಗೊಂಡು ಭೂಮಿ ತಂತ್ರಾಂಶದಲ್ಲಿ ಹೊಸ ಪಹಣಿ ಸೃಜನೆಗೊಳ್ಳುತ್ತದೆ. ತದನಂತರದಲ್ಲಿ ನಿಗದಿಪಡಿಸಲಾದ ಶುಲ್ಕವನ್ನು ಕೆ–2 ತಂತ್ರಾಂಶದ ಮೂಲಕ ಭರಣ ಮಾಡಿಸಿಕೊಂಡ ನಂತರ ಸಾಗುವಳಿ ಚೀಟಿ, ಮಂಜೂರಾತಿ ಆದೇಶ ಸೃಜನೆಗೊಳ್ಳುತ್ತದೆ. ಅದರನ್ವಯ ಮಂಜೂರಿದಾರರ ಹೆಸರಿಗೆ ಹಕ್ಕು ದಾಖಲಿಸಲು ಭೂಮಿ ತಂತ್ರಾಂಶದಲ್ಲಿ ಆಟೋ ಮ್ಯುಟೇಷಂನ್ಗೊಂಡು ತಹಶೀಲ್ದಾರ ಅನುಮೋದನೆಯಿಂದ ಪಹಣಿ ಸೃಜನೆಯಾಗುತ್ತದೆ.
ಈ ತಂತ್ರಜ್ಞಾನಾಧಾರಿತ ಪ್ರಕ್ರಿಯೆ ಸಾಮಾನ್ಯ ಜನರಿಗೆ ಬಹಳ ಲಾಭಕರವಾಗಿದೆ. ಇದರಿಂದ ಪಾರದರ್ಶಕತೆ ಹೆಚ್ಚಾಗಿ, ಎಲ್ಲಾ ದಾಖಲೆಗಳು ಆನ್ಲೈನ್ನಲ್ಲಿ ಇಂಡೀಕರಿಸಲಾಗಿದ್ದು, ಈ ಪ್ರಕ್ರಿಯೆಯಿಂದ ರೈತರಿಗೆ ತ್ವರಿತವಾಗಿ ಹಾಗೂ ವ್ಯವಸ್ಥಿತವಾಗಿ ಸರಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ
— ಲಕ್ಷ್ಮೀಪ್ರಿಯ ಕೆ., ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx