ಪಾವಗಡ: ತಾಲ್ಲೂಕಿನ ತಿಪ್ಪಯ್ಯನದುರ್ಗ ಗ್ರಾಮದ ಸರ್ವೆ ನಂಬರ್ 42ರಲ್ಲಿ ನಡೆಯುತ್ತಿದ್ದ ಪ್ರಸಿದ್ಧ “ವೆಂಕಟೇಶ್ವರ ಕ್ವಾರಿ”ಗೆ (ಕಲ್ಲುಗಣಿ ಗುತ್ತಿಗೆ ಸಂಖ್ಯೆ: 826) ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಬೀಗ ಜಡಿದಿದೆ. ಕೋಟ್ಯಂತರ ರೂಪಾಯಿ ರಾಯಲ್ಟಿ ಬಾಕಿ ಉಳಿಸಿಕೊಂಡಿರುವುದು, ನಿಗದಿತ ಪ್ರದೇಶಕ್ಕಿಂತ ಹೆಚ್ಚು ಒತ್ತುವರಿ ಮಾಡಿ ಕಾನೂನುಬಾಹಿರ ಗಣಿಗಾರಿಕೆ ನಡೆಸಿರುವುದು ಹಾಗೂ ಪರಿಸರ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಇಲಾಖೆಯ ಉಪನಿರ್ದೇಶಕರು ಕಡಕ್ ಆದೇಶ ಹೊರಡಿಸಿದ್ದಾರೆ.
ಹೆಚ್.ವಿ. ವೆಂಕಟೇಶ್ ಬಿನ್ ವೆಂಕಟರಮಣಪ್ಪ ರವರಿಗೆ ತಿಪ್ಪಯ್ಯನದುರ್ಗದ ಸರ್ವೆ ನಂ. 42 ರ 5–00 ಎಕರೆ ಸರ್ಕಾರಿ ಜಮೀನಿನಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗಾಗಿ 16.12.2014 ರಿಂದ 10 ವರ್ಷಗಳ ಅವಧಿಗೆ ಮೊದಲ ಬಾರಿಗೆ ಗುತ್ತಿಗೆ ನೀಡಲಾಗಿತ್ತು. ತದನಂತರ ಕೆ.ಎಂ.ಎಂ.ಸಿ.ಆರ್–1994ರ ನಿಯಮಗಳನ್ವಯ ಈ ಗುತ್ತಿಗೆ ಅವಧಿಯನ್ನು 30 ವರ್ಷಗಳವರೆಗೆ, ಅಂದರೆ ದಿನಾಂಕ 15.12.2044 ರವರೆಗೆ ವಿಸ್ತರಿಸಲಾಗಿತ್ತು.
2024–25ನೇ ಸಾಲಿನ ಅಂತ್ಯಕ್ಕೆ ಈ ಗುತ್ತಿಗೆಯ ಮೇಲೆ ಒಟ್ಟು ರೂ. 13,84,95,693/- (ಹದಿಮೂರು ಕೋಟಿ ಎಂಬತ್ತನಾಲ್ಕು ಲಕ್ಷದ ತೊಂಬತ್ತೈದು ಸಾವಿರದ ಆರುನೂರ ತೊಂಬತ್ಮೂರು ರೂಪಾಯಿ) ಬಾಕಿ ಇತ್ತು. ಈ ಸಂಬಂಧ ಇಲಾಖೆಯು ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಇದರ ವಿರುದ್ಧ ಗುತ್ತಿಗೆದಾರರು ಮೈಸೂರಿನ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಪರಿಷ್ಕರಣಾ ಅರ್ಜಿ ಸಲ್ಲಿಸಿ ಯಾವುದೇ ಕ್ರಮ ಜರುಗಿಸದಂತೆ ಕೋರಿದ್ದ ಮನವಿಯನ್ನು ಇಲಾಖೆ ತಿರಸ್ಕರಿಸಿತ್ತು. ಬಳಿಕ ಬಾಕಿ ಮಹತ್ತಿನಲ್ಲಿ ಕೇವಲ ರೂ. 2,76,91,938/– ಗಳನ್ನು ಮಾತ್ರ ಪಾವತಿಸಿ, ಉಳಿಕೆ ಮೊತ್ತವನ್ನು ಸರ್ಕಾರದ ಏಕಕಾಲದ ಇತ್ಯರ್ಥ (One Time Settlement — OTS) ಯೋಜನೆಯಡಿ ಪಾವತಿಸುವುದಾಗಿ ಗುತ್ತಿಗೆದಾರರು ಪ್ರಮಾಣಪತ್ರ ಸಲ್ಲಿಸಿದ್ದರು.
ಲೋಕಾಯುಕ್ತ ಕಟಕಟೆಯಲ್ಲಿ ಕ್ವಾರಿ ಪ್ರಕರಣ:
ಈ ಕಲ್ಲುಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರಿನ ಮಾನ್ಯ ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲಿ (ಪ್ರಕರಣ ಸಂಖ್ಯೆ: ಕಂಪ್ಲೆಂಟ್/ಲೋಕ್/ಬಿಡಿ/4949/2023/ಎ.ಆರ್.ಇ-11) ಹಾಗೂ ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿಯೂ (ಪ್ರಕರಣ ಸಂಖ್ಯೆ: ಲೋಕ್/ಬಿಡಿ/4948/2023/ಎಆರ್ ಇ-11) ದೂರುಗಳು ದಾಖಲಾಗಿ ತನಿಖೆ ನಡೆಯುತ್ತಿರುವುದು ಪ್ರಕರಣದ ಗಾಂಭೀರ್ಯತೆಯನ್ನು ಹೆಚ್ಚಿಸಿದೆ.
ದಿನಾಂಕ 02.04.2026 ರಂದು ಪಾವಗಡ ತಹಶೀಲ್ದಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು, ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಗಣಿ ಇಲಾಖೆಯ ತಾಂತ್ರಿಕ ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡವು ಸ್ಥಳಕ್ಕೆ ಭೇಟಿ ನೀಡಿ ಅತ್ಯಾಧುನಿಕ ಡ್ರೋನ್ ಹಾಗೂ ಡಿಜಿಪಿಎಸ್ ಸರ್ವೆ ನಡೆಸಿತ್ತು.
ಮಂಜೂರಾದ 5 ಎಕರೆ ಪ್ರದೇಶದ ಗಡಿಬಾಂದುಗಳ ಹೊರತಾಗಿ, ಗುತ್ತಿಗೆ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಉತ್ತರ ಭಾಗದಲ್ಲಿ 0-17 ಎಕರೆ ಹಾಗೂ ಪೂರ್ವ, ಪಶ್ಚಿಮ, ದಕ್ಷಿಣ ಭಾಗಗಳಲ್ಲಿ 5-17 ಎಕರೆ ಸೇರಿ ಒಟ್ಟು 5-34 ಎಕರೆ/ಗುಂಟೆ ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿರುವುದು ಸ್ಥಳ ಪರಿಶೀಲನೆಯಲ್ಲಿ ಪತ್ತೆಯಾಗಿದೆ.
ನಿಯಮಗಳ ಗಾಳಿಗೆ ತೂರಾಟ:
ತಾಂತ್ರಿಕ ಅಧಿಕಾರಿಗಳ ಲೆಕ್ಕ ತಪಾಸಣಾ ವರದಿಯ ಪ್ರಕಾರ, 2016-17 ರಿಂದ 2022-23ರ ಅವಧಿಯಲ್ಲಿ ವ್ಯಾಪಕ ಒತ್ತುವರಿ ಮಾಡಲಾಗಿದ್ದು, 2014-15, 2015-16, 2019-20 ಮತ್ತು 2024-25ನೇ ಸಾಲುಗಳಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಖನಿಜ ಸಾಗಾಣಿಕೆ ಮಾಡಿರುವುದು ಪತ್ತೆಯಾಗಿದೆ. ಇಲಾಖೆಯು ಪ್ರತಿ ವರ್ಷ ಡಿಸಿಬಿ (DCB) ನೋಟಿಸ್ ನೀಡಿದ್ದರೂ ಬಾಕಿ ಪಾವತಿಸಿರಲಿಲ್ಲ. ಅಲ್ಲದೆ, ಅನುಮೋದಿತ ಕ್ಯಾರಿ ಪ್ಲಾನ್, ಪರಿಸರ ಅನುಮತಿ ಪತ್ರ ಹಾಗೂ ‘DGMS’ ನಿಯಮಾವಳಿಗಳ ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿತ್ತು.
ಇಲಾಖೆಯ ಅಂತಿಮ ಆದೇಶವೇನು?
ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ (KMMCR)-1994 ರ ನಿಯಮ 6(3), 8(K), 36, 42, 45 ಹಾಗೂ ಎಂ.ಎಂ.ಡಿ.ಆರ್ (MMDR) ಕಾಯ್ದೆ 1957 ರ ಸೆಕ್ಷನ್ 21(1) ರ ನಿಯಮಗಳ ಸ್ಪಷ್ಟ ಉಲ್ಲಂಘನೆ ಸಾಬೀತಾಗಿರುವುದರಿಂದ, ಸಕ್ಷಮ ಅಧಿಕಾರಿಯಾದ ಉಪನಿರ್ದೇಶಕರು ತಮ್ಮ ಅಧಿಕಾರ चಲಾಯಿಸಿ ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ಸಂಖ್ಯೆ: 826 ರ ಗಣಿಗಾರಿಕೆ ಚಟುವಟಿಕೆಗಳನ್ನು ದಿನಾಂಕ: 15.04.2026 ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ರದ್ದುಪಡಿಸಿ (ಬೀಗ ಜಡಿದು) ಖಡಕ್ ಆದೇಶ ಹೊರಡಿಸಿದ್ದಾರೆ.
ಶಾಸಕ ವೆಂಕಟೇಶ್ ಮೇಲೆ ದಾವೆ:
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪಾವಗಡ ತಾಲೂಕು ತಿಪ್ಪಯ್ಯನದುರ್ಗ ಸರ್ವೇ ನಂಬರ್ 45ರ 5 ಎಕರೆ ಪ್ರದೇಶವನ್ನ, ಶಶಿಕಲಾ ಅವರ ಒಡೆತನದ ಶ್ರೀ ವೆಂಕಟೇಶ್ವರ ಸ್ಟೋನ್ ಕ್ರಷರ್ ಗೆ ಕ್ರಮಬದ್ಧವಾಗಿ ಗಣಿಗಾರಿಕೆಗೆ ನಡೆಸಲು ಮಂಜೂರು ಮಾಡಲಾಗಿದೆ. ಆದರೆ ಪಾವಗಡ ತಾಲೂಕಿನ ಜನತೆ ನೀಡಿದ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಶಾಸಕ ವೆಂಕಟೇಶ್ ಅವರು 5 ಎಕರೆ 34 ಕುಂಟೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸಿರುತ್ತಾರೆ. ಗಣಿ ಮತ್ತು ಭೂಮಿ ಇಲಾಖೆ ಅಂದಾಜು ಗುರುತಿಸಿ 10 ಕೋಟಿ 28 ಲಕ್ಷ 67 ಸಾವಿರದ 402 ರೂಗಳನ್ನು ನೆಪ ಮಾತ್ರಕ್ಕೆ ದಂಡ ವಿಧಿಸಿ ಕೈ ತೊಳೆದುಕೊಂಡಿದೆ ಎಂದು ಆರೋಪಿಸಲಾಗಿದೆ.
ಮೈನಿಂಗ್ ಆಕ್ಟ್ ಪ್ರಕಾರ ಶಾಸಕರಾದ ವೆಂಕಟೇಶ್ ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಲ್ಲ. ಇಲ್ಲಿಯವರೆಗೂ ಎಫ್ ಐಆರ್ ಮಾಡಿಸದೆ ಇರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ. ಅಧಿಕಾರಿಗಳು ಪ್ರಭಾವಕ್ಕೆ ಒಳಗಾಗಿ ಬರೀ ದಂಡ ವಿಧಿಸಿದ್ದಾರೆ.
“ಇದು ದಂಡ ವಿಧಿಸಿ ಬಿಡುವಂತಹ ಪ್ರಕರಣವಲ್ಲ. ನಿವೃತ್ತಿ ನ್ಯಾಯಾಧೀಶರನ್ನು ನೇಮಿಸಿ ತನಿಖೆ ಮಾಡಿಸಬೇಕು. ಸರ್ಕಾರ ಈ ಪ್ರಕರಣವನ್ನು ಇಡಿಗೆ (ED) ವಹಿಸಿ ಇವರು ಅಧಿಕಾರವಧಿಯಲ್ಲಿ ಮಾಡಿರುವ ಇನ್ನೂ ಹೆಚ್ಚಿನ ಹಗರಣ, ಭ್ರಷ್ಟಾಚಾರವನ್ನು ತನಿಖೆ ನಡೆಸಬೇಕು.”
– ಜೆಟ್ಟಿ ಅಗ್ರಹಾರ ನಾಗರಾಜು, ಸಾಮಾಜಿಕ ಹೋರಾಟಗಾರ
ಬಳಿಕ ಮಾತನಾಡಿದ ಅವರು, “ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದಾವೆ ಹೂಡಲು ಸಿದ್ಧತೆಯನ್ನ ನಡೆಸಿದ್ದೇನೆ. ನಮ್ಮದೇ ಸರ್ಕಾರ ಇದೆ, ನನ್ನೊಂದಿಗೆ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಕಂದಾಯ ಸಚಿವರ ಬೆಂಬಲ ಇದೆ ಎಂಬ ಅಹಂನಿಂದ ಅಧಿಕಾರಿಗಳ ಮೇಲೆ, ಹೋರಾಟಗಾರರ ಮೇಲೆ ದರ್ಪ ತೋರಿದರೆ ಈ ಕಾಲಘಟ್ಟದಲ್ಲಿ ನಡೆಯುವುದಿಲ್ಲ. ಸಂವಿಧಾನದ ಮುಂದೆ ಯಾರು ದೊಡ್ಡವರಲ್ಲ, ಸಂವಿಧಾನದ ಹೋರಾಟ ಮುಂದುವರೆಯುತ್ತೆ. ಮಾನ್ಯ ಶಾಸಕರಿಗೆ ಜವಾಬ್ದಾರಿ ಮತ್ತು ಕ್ಷೇತ್ರದ ಮತದಾರರ ಮೇಲೆ ಗೌರವವಿದ್ದರೆ ಕೂಡಲೇ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಈ ದೇಶದ ನೆಲಮೂಲದ ಕಾನೂನು ಒಂದೇ; ಸಾಮಾನ್ಯರಿಗೂ ಒಂದೇ, ಜನಪ್ರತಿನಿಧಿಗಳಿಗೂ ಒಂದೇ. ಮಾನ್ಯ ಶಾಸಕರಿಗೆ ಕಾನೂನಿನ ಮೇಲೆ ಗೌರವವಿದ್ದರೆ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು,” ಎಂದು ಆಗ್ರಹಿಸಿದ್ದಾರೆ.
ಕ್ವಾರಿಗೆ ಬೀಗ ತೆಗೆಯೋದು ಯಾವಾಗ?
ಇಲಾಖೆಯು ಇಷ್ಟೆಲ್ಲಾ ಗಂಭೀರ ಕಾನೂನು ಉಲ್ಲಂಘನೆ ಹಾಗೂ ಕೋಟ್ಯಂತರ ರೂಪಾಯಿ ಬಾಕಿ ತೆರಿಗೆಯ ಕಾರಣ ನೀಡಿ ಕ್ವಾರಿಯನ್ನು ರದ್ದುಗೊಳಿಸಿರುವುದರಿಂದ, ಗುತ್ತಿಗೆದಾರರು ಸಂಪೂರ್ಣ ಬಾಕಿ ಹಣವನ್ನು ಪಾವತಿಸಿ, ಒತ್ತುವರಿ ಜಾಗದ ದಂಡ ತೆತ್ತು, ಲೋಕಾಯುಕ್ತ ಹಾಗೂ ಗಣಿ ಇಲಾಖೆಯ ಕಾನೂನು ಪ್ರಕ್ರಿಯೆಗಳಿಂದ ಮುಕ್ತರಾಗುವವರೆಗೂ ಈ ಕ್ವಾರಿಯ ಬೀಗ ತೆಗೆಯಲು ಸದ್ಯಕ್ಕಂತೂ ಅವಕಾಶವಿಲ್ಲ ಎನ್ನುತ್ತಾರೆ ಕಾನೂನು ತಜ್ಞರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


