ಪಾವಗಡ: ತಾಲ್ಲೂಕಿನ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ (82) ಅವರು ಶುಕ್ರವಾರ ಬೆಳಗಿನ ಜಾವ 5:00 ಗಂಟೆಗೆ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ವೆಂಕಟರಮಣಪ್ಪನವರು ಪಾವಗಡ ಕ್ಷೇತ್ರದಿಂದ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಜ್ಯ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿದ್ದರು. ತಮ್ಮ ಸರಳತೆ ಹಾಗೂ ಜನಸ್ನೇಹಿ ನಡವಳಿಕೆಯಿಂದ ಸದಾ ಜನರ ಮಧ್ಯೆ ಇರುತ್ತಿದ್ದ ವೆಂಕಟರಮಣಪ್ಪನವರು, ಈ ಭಾಗದ ಜನರಿಂದ ಪ್ರೀತಿಯಿಂದ “ಎಲ್ಲರ ಮನೆಯ ಮನಸ್ಸಿನ ದೊಡ್ಡಪ್ಪ” ಎಂದೇ ಕರೆಯಲ್ಪಡುತ್ತಿದ್ದರು. ಅವರ ನಿಧನಕ್ಕೆ ಮುಖ್ಯಮಂತ್ರಿಗಳು, ಸಚಿವರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಗಣ್ಯ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಪಾವಗಡದ ಗುರುಭವನ ಮೈದಾನದಲ್ಲಿ ಇರಿಸಲಾಗಿತ್ತು. ತದನಂತರ ಸಂಜೆ ವೇಳೆ ಅವರ ಸ್ವಗ್ರಾಮವಾದ ಹನುಮಂತನಹಳ್ಳಿಯಲ್ಲಿನ ತೋಟಕ್ಕೆ ಕೊಂಡೊಯ್ಯಲಾಗಿದ್ದು, ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ವೆಂಕಟರಮಣಪ್ಪನವರ ಅಂತಿಮ ದರ್ಶನ ಪಡೆಯಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಾಜಿ ಸಚಿವ ಸೊಗಡು ಶಿವಣ್ಣ, ಆಂಧ್ರಪ್ರದೇಶದ ಮಾಜಿ ಮಂತ್ರಿ ರಘುವೀರ ರೆಡ್ಡಿ, ಎಸ್.ಪಿ ಅಶೋಕ್, ತಹಸೀಲ್ದಾರ್ ರವಿ, ಎ.ಸಿ ಗೋಟೂರು ಶಿವಪ್ಪ, ವರದರಾಜು, ಇ.ಓ ಮಧುಸೂದನ್, ಗುಬ್ಬಿ ಶಾಸಕ ಶ್ರೀನಿವಾಸ್, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಮಡಕಶಿರಾದ ಮಾಜಿ ಶಾಸಕರುಗಳಾದ ಈರಣ್ಣ ಹಾಗೂ ಕೆ.ಎಂ ತಿಮ್ಮರಾಯಪ್ಪ ಆಗಮಿಸಿದ್ದರು.
ಇವರೊಂದಿಗೆ ಮುಖಂಡರಾದ ಮಾನಂ ವೆಂಕಟಸ್ವಾಮಿ, ಎನ್. ಎನ್ ಈರಣ್ಣ, ರೈತ ಸಂಘದ ನರಸಿಂಹ ರೆಡ್ಡಿ, ಪೂಜಾರಪ್ಪ, ಆರ್.ಸಿ ಅಂಜಿನಪ್ಪ, ಬಲರಾಮ್ ರೆಡ್ಡಿ, ನಾಗೇಶ್ ಕೊತ್ತೂರು, ಜಿ.ವಿ ಬಲರಾಮ್, ರವಿ, ರಾಜೇಶ್ ಸೇರಿದಂತೆ ತಾಲ್ಲೂಕಿನ ನೂರಾರು ಗಣ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಸಹಸ್ರಾರು ಅಭಿಮಾನಿಗಳು ನೆರೆದು ಕಣ್ಣೀರಿನ ವಿದಾಯ ಕೋರಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


