ತುಮಕೂರು: ಕೋವಿಡ್ -19 ರ ತುರ್ತು ಪರಿಸ್ಥಿತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಅರೇ- ವೈದ್ಯಕೀಯ ಸಿಬ್ಬಂದಿಯನ್ನು 2022 ಮಾರ್ಚ್ 31 ನಂತರವು ಸೇವೆಯಿಂದ ಮುಂದುವರೆಸುವಂತೆ ಒತ್ತಾಯ ಕೊರೊನಾ ವಾರಿಯರ್ಸ್ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕೊರೊನಾ ವಾರಿಯರ್ಸ್, ಕೋವಿಡ್ -19ರ ತುರ್ತು ಪರಿಸ್ಥಿತಿಯಲ್ಲಿ ನಮ್ಮನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ನಾವು ನಮ್ಮ ಕುಟುಂಬ, ಮನೆ-ಮಠ ಬಿಟ್ಟು, ನಮ್ಮ ಪ್ರಾಣದ ಹಂಗನ್ನು ತೊರೆದು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಜೊತೆಯಲ್ಲಿಯೇ ಸೇರಿದ ಕೆಲವು ಆರೋಗ್ಯ ಸಿಬ್ಬಂದಿಗಳು ಪ್ರಾಣಭಯದಿಂದ ಹಾಗೂ ಕೊರೊನ ಮಹಾ ಮಾರಿಗೆ ಹೆದರಿ ಅರ್ಧಕ್ಕೆ ಕೆಲಸವನ್ನು ಬಿಟ್ಟು ಹೋದರು. ಆದರೆ ನಮ್ಮಲ್ಲಿ ಹಲವರಿಗೆ ಹಲವು ಬಾರಿ ಕೊರೂನಾ ಪಾಸಿಟಿವ್ ಬಂದು ಸಾವಿನ ಕದ ತಟ್ಟಿ ಸಾವಿನ ಸೋಲನ್ನು ಒಪ್ಪದೆ ಪುನಃ ಕರ್ತವ್ಯಕ್ಕೆ ಮರಳಿ ಕರ್ತವ್ಯವನ್ನು ಸಲ್ಲಿಸುತ್ತಿದ್ದೇವೆ. ಜೊತೆಗೆ ಕೂರೊನಾ ಲಸಿಕಾ ಅಭಿಯಾನದಲ್ಲಿ ಭಾರತದ ಐತಿಹಾಸಿಕ ಮೈಲುಗಲ್ಲಿನ ಸಾಧನೆಯಲ್ಲಿ ನಾವು ಸಹಾ ಭಾಗಿಯಾಗಿ ಕರ್ತವ್ಯ ಸಲ್ಲಿಸಿದ್ದೇವೆ. ಕಷ್ಟ ಕಾಲದಲ್ಲಿ ನಾವು ಸರ್ಕಾರದ ಜೊತೆಯಾಗಿ ನಿಂತು ದುಡಿಯುತ್ತಿದ್ದೇವೆ, ಮುಂದೆಯು ಸಹ ದುಡಿಯಲು ಸಿದ್ಧರಿದ್ದೇವೆ. ಆದರೆ ಈ ಹಂತದಲ್ಲಿ ಕೊರೊನ ಹೆಚ್ಚಾಗುವುದರಿಂದಲೇ ಕೊರೊನ ವಾರಿಯರ್ಸ್ ಗಳ ಕೆಲಸ ಉಳಿಯುತ್ತಿದೆ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಕೊರೊನಾ ಕಡಿಮೆ ಆದ ಮೇಲೆ ನಮ್ಮನ್ನು ಕೆಲಸದಿಂದ ತೆಗೆದರೆ ಕೊರೊನಾ ವಾರಿಯರ್ಸ್ ಗಳಾದ ಫಾರ್ಮಸಿ ಅಧಿಕಾರಿಗಳು, ಲ್ಯಾಬ್ ಟೆಕ್ನಿಶಿಯನ್, ಪಿ ಎಚ್ ಸಿ ಓ, ಗ್ರೂಪ್ – ಡಿ, ಸ್ವಾಬ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್ ಹಾಗೂ ಮತ್ತಿತರ ಕೊರೊನಾ ವಾರಿಯರ್ಸ್ ಗಳು ನಿರ್ಗತಿಕರಾಗಿ, ನಿರುದ್ಯೋಗಿಗಳಾಗಿ ಬೀದಿಗೆ ಬರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಪ್ರಧಾನಿ ಮೋದಿಜಿಯವರು, ಕೂರೂನಾ ವಾರಿಯರ್ಸ್ ಆಗಿ 100 ದಿನಗಳ ಕಾಲ ಸೇವೆ ಸಲ್ಲಿಸಿದವರಿಗೆ ಸೇವಾ ಭದ್ರತೆಯನ್ನು ಒದಗಿಸಿ ಮುಂಬರುವ ಸರ್ಕಾರಿ ಕೆಲಸಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಅದೇಶ ಹೊರಡಿಸಿದರೆ ಸುಮಾರು 4,000 ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್ ಗಳಿಗೆ ಮತ್ತು ಅವರ ಕುಟುಂಬದವರಿಗೆ ಆಧಾರವಾಗುತ್ತದೆ. ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ಹಲವು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯಿದ್ದು, ರಾಜ್ಯಾದ್ಯಂತ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಅಂಕಿಸಂಖ್ಯೆ ಸಮೇತ ಪತ್ರಿಕೆ, ಅಂತರ್ಜಾಲ ಹಾಗೂ ಮಾಧ್ಯಮದಲ್ಲಿ ವರದಿಯಾಗಿರುವುದರಿಂದ ತಾವು ಇದನ್ನು ಪರಿಶೀಲಿಸಿ ಖಾಲಿ ಇರುವ ಸ್ಥಳಗಳಿಗೆ ಅಸ್ಪತ್ರೆಗಳಿಗೆ ನಮ್ಮ ಸೇವಾಕಾರ್ಯವನ್ನು ಹಾಗೂ ಅನುಭವವನ್ನು ಪರಿಗಣಿಸಿ ಮಾನವೀಯತೆ ದೃಷ್ಠಿಯಿಂದ ನಮ್ಮನ್ನು ಖಾಲಿ ಇರುವ ಸ್ಥಳಗಳಿಗೆ ನೇಮಿಸಿದರೆ ನಮಗೂ ಉದ್ಯೋಗ ದೊರಕಿ ನಮ್ಮೆಲ್ಲರ ಕುಟುಂಬಗಳಿಗೆ ಭದ್ರತೆ ದೊರಕಿದಂತಾಗುತ್ತದೆ. ಈಗಾಗಲೇ ಹಲವಾರು ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ತರಬೇತಿ ಮತ್ತು ಯೋಜನೆಗಳ ಬಗ್ಗೆ ಅರಿವು ಇರುವುದಿಂದ ತಾವುಗಳು ದಯಮಾಡಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ನಮ್ಮ ಜೀವನಕ್ಕೆ ಭದ್ರತೆ ಒದಗಿಸಬೇಕೆಂದು ಮನವಿ ಮಾಡಿದರು
ವರದಿ: ಎ.ಎನ್. ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB