ಗುಬ್ಬಿ: ತಾಲ್ಲೂಕಿನ ಹಾಗಲವಾಡಿ ಹೋಬಳಿ ಕೇಂದ್ರದಲ್ಲಿರುವ ಶ್ರೀವಿನಾಯಕ ಗ್ರಾಮಾಂತರ ಪ್ರೌಢಶಾಲೆಯು 1963ರಲ್ಲಿ ಪ್ರಾರಂಭವಾಗಿದ್ದು, 1983ರಲ್ಲಿ ಈ ಶಾಲೆಗೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅಧ್ಯಕ್ಷರ 9ಜನ ಆಯ್ಕೆಯಾಗಿದ್ದರು. ಅಂದಿನಿಂದ ಇಂದಿನವರೆಗೂ ಅದೇ ಕಮಿಟಿ ಮುಂದುವರಿದಿದ್ದು, ಕಮಿಟಿ ಸದಸ್ಯರೆಲ್ಲರೂ ತೀರಿಹೋಗಿದ್ದು ಕೇವಲ ಅಧ್ಯಕ್ಷರು ಮಾತ್ರ ಇದ್ದು, ಹೊಸದಾಗಿ ಸಮಿತಿ ರಚಿಸಲು ಗ್ರಾಮಸ್ಥರ ಒಪ್ಪಿಗೆ ಇಲ್ಲದೆ ತಮಗೆ ಬೇಕಾದವರನ್ನು ಹಿರಿಯ ಶಿಕ್ಷಕ ಮಹೇಶ್ ರವರು ನೇಮಿಸಿಕೊಂಡಿರುವುದರ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿದರು.
ಗ್ರಾಮಸ್ಥರು ಸುಮಾರು ಬಾರಿ ಶಾಲೆಯಲ್ಲಿ ಸದಸ್ಯ ಮಂಡಳಿ ಇಲ್ಲದಿರುವ ಬಗ್ಗೆ ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡಿ ಕಳಿಸುತ್ತಿದ್ದ ಮಹೇಶ್ ಅವರು, ಜಿಲ್ಲಾ ನೋಂದಣಾಧಿಕಾರಿಗಳಿಗೆ ತಿಳಿಸದಂತೆ ಗ್ರಾಮಸ್ಥರ ಸಭೆಯನ್ನು ಕರೆಯದೆ ಸರ್ವಾಧಿಕಾರಿಯಂತೆ ಏಕಾಏಕಿ ತಮಗೆ ಬೇಕಾದ ಸದಸ್ಯರುಗಳನ್ನು ಆಯ್ಕೆ ಮಾಡಿಕೊಂಡು ಶಾಲೆಯ ಅಭಿವೃದ್ಧಿಯಲ್ಲಿ ಹಿಂದೆ ಬೀಳುವಂತೆಮಾಡಿದ್ದು, ಇವರ ವಿರುದ್ಧ ಗ್ರಾಮಸ್ಥರು ಒಗ್ಗೂಡಿ ಪ್ರತಿಭಟಿಸಿದ ನಂತರ ಗ್ರಾಮಸ್ಥರ ಒಪ್ಪಿಗೆಯಂತೆ ಮುಂದಿನ ಮಂಡಳಿಯನ್ನು ರಚಿಸುವುದಾಗಿ ಭರವಸೆ ನೀಡಿದ್ದಾರೆಂದು ಎಂದು ಗ್ರಾಮಸ್ಥ ಜಗದೀಶ್ ಬಾಬು ತಿಳಿಸಿದರು.
ಈ ಸಂಬಂಧ ಗ್ರಾಮದ ಹಿರಿಯ ಮುಖಂಡರಾದ ಎಚ್.ಎಸ್.ಪಾಂಡುರಂಗಯ್ಯ ಮಾತನಾಡಿ, ಮಹೇಶ್ ರವರ ದುರಾಡಳಿತಕ್ಕೆ ಕೈಗನ್ನಡಿಯಂತಿರುವ ಅವರೇ ಆಯ್ಕೆ ಮಾಡಿಕೊಂಡಿರುವ ಅಪರಿಚಿತ ವ್ಯಕ್ತಿಗಳ ಸದಸ್ಯರ ಡಳಿಯಾಗಿದೆ, ಆದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರೆಲ್ಲಾ ಒಗ್ಗೂಡಿ ಗ್ರಾಮಸ್ಥರ ಸಮ್ಮುಖದಲ್ಲಿ ರಚನೆಯಾಗದ ಮಂಡಳಿ ವಜಾಮಾಡಿ ಸಾರ್ವಜನಿಕರೆದುರೆ ಸದಸ್ಯ ಮಂಡಳಿ ರಚನೆಯಾಗಬೇಕೆಂದು ಪಟ್ಟು ಹಿಡಿದು ಗ್ರಾಮಸ್ಥರೊಂದಿಗೆ ಶಾಲೆಗೆ ಮುತ್ತಿಗೆ ಹಾಕಿ ಅಧ್ಯಕ್ಷರಲ್ಲಿ ಮನವಿ ಮಾಡಿದಾಗ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಹೊಸದಾಗಿ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರನ್ನು ಸೇರಿಸಿ ಸದಸ್ಯಮಂಡಳಿಯನ್ನು ಆಯ್ಕೆ ಮಾಡುವುದಾಗಿ ಲಿಖಿತ ರೂಪದಲ್ಲಿ ಬರೆದು ಕೊಟ್ಟ ನಂತರ ಗ್ರಾಮಸ್ಥರು ಸಮಾಧಾನವಾಗಿದ್ದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಾಂಡುರಂಗಯ್ಯ ಮಾತನಾಡಿ, ಸುಮಾರು ವರ್ಷಗಳಿಂದ ಸರ್ವಾಧಿಕಾರಿಯಂತಿರುವ ಶಿಕ್ಷಕ ಮಹೇಶ್ ರವರು ಇನ್ನೂ ಮುಂದಾದರೂ ಗ್ರಾಮಸ್ಥರ ಸಲಹೆ ಸೂಚನೆಯಂತೆ ಕೆಲಸ ಮಾಡಬೇಕೆಂದು ಆಗ್ರಹಿಸಿದರು. ಅಧ್ಯಕ್ಷರು ಕೊಟ್ಟ ಮಾತಿನಂತೆ ಮುಂದಿನ ದಿನಗಳಲ್ಲಿ ಹೊಸದಾಗಿ ಸಮಿತಿ ರಚನೆಯಾಗುವವರೆಗೂ ಈಗ ಇರುವ ಸಮಿತಿಯ ಸಭೆ ಕರೆಯಬಾರದು ಹಾಗೂ ಆದಷ್ಟು ಬೇಗ ಹೊಸ ಸಮಿತಿ ರಚನೆ ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಹಾಗಲವಾಡಿ ವಿನಾಯಕ ಗ್ರಾಮಾಂತರ ಪ್ರೌಢಶಾಲೆ ಅಧ್ಯಕ್ಷ ಕರಿಯಪ್ಪಜಟ್ಟಿ ಮಾತನಾಡಿ, ಈಗ ಇರುವ ಹಾಲಿ ಸಮಿತಿಯನ್ನ ತಿರಸ್ಕರಿಸಿ ಮುಂದಿನ ದಿನಗಳಲ್ಲಿ ಅಂದರೆ 10ನೇ ತರಗತಿ ಪರೀಕ್ಷಾ ನಂತರ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸೇರಿ ರೋಸ್ಟರ್ ಪದ್ಧತಿಯನ್ನು ಅನುಸರಿಸಿ ಹೊಸ ಆಡಳಿತ ಮಂಡಳಿ ರಚಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಮೃತ್ಯುಂಜಯ ಮೂರ್ತಿ, ನಾಗೇಂದ್ರಪ್ಪ, ಭಕ್ತಯ್ಯ, ಅನಿಲ್ ಕುಮಾರ್, ಪಾಂಡುರಂಗಯ್ಯ, ಜಗದೀಶ್ ಕುಮಾರ್, ಎಚ್.ಎಸ್. ಪಾಂಡುರಂಗಯ್ಯ, ರಾಮಚಂದ್ರಯ್ಯ, ಮಹೇಶ್ ಶಿವರಾಜ್, ನರಸಿಂಹಮೂರ್ತಿ, ರೈತ ಸಂಘ ಸದಸ್ಯರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಭಾಗವಹಿಸಿದ್ದರು.
ವರದಿ: ಮಂಜುನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy