ತುಮಕೂರು: ಲಿಂಗೈಕ್ಯ ಡಾ.ಶಿವಕುಮಾರ ಮಹಾಸ್ವಾಮಿಜಿಗಳು ಈ ದೇಶ ಕಂಡ ಮಹಾನ್ ಮಾನವತಾವಾದಿ ಎಂದು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಅಹಮದ್ ನುಡಿದರು.
ನಗರದ ಬಿ.ಜಿ.ಪಾಳ್ಯ ವೃತ್ತದಲ್ಲಿ ಇಕ್ಬಾಲ್ ಅಹಮದ್ ಅಭಿಮಾನಿಗಳ ಬಳಗದ ವತಿಯಿಂದ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 115ನೇ ಜಯಂತ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಯಕಯೋಗಿ ಹಾಗೂ ತ್ರಿವಿಧ ದಾಸೋಹದಲ್ಲಿ ಇಡೀ ಪ್ರಪಂಚಕ್ಕೆ ಸಿದ್ದಗಂಗಾ ಶ್ರೀಗಳು ಮಾದರಿಯಾಗಿದ್ದಾರೆ ಪರಮ ಪೂಜ್ಯರ ಜೀವನವೇ ಈ ನಾಡಿನ ಜನರಿಗೆ ಸಂದೇಶವಾಗಿದ್ದು ಹಾಗೂ ಮಾದರಿಯಾಗಿದ್ದು, ಹಸಿದ ಒಡಲಿಗೆ ಅನ್ನ ನೀಡುವುದರೊಂದಿಗೆ ಜ್ಞಾನದಾಸೋಹ ವನ್ನು ಸಹ ಮಾಡಿದವರು ಪರಮಪೂಜ್ಯರು. ಪರಮಪೂಜ್ಯರ ಜನ್ಮದಿನದಂದು ಅನ್ನಸಂತರ್ಪಣೆಯನ್ನು ಮಾಡುವುದು ಅತ್ಯಂತ ಶ್ರೇಷ್ಠವಾದ ಕಾರ್ಯವಾಗಿದ್ದು, ಅನ್ನ ದಾಸೋಹ ಕಾರ್ಯಕ್ರಮವನ್ನು ಅವರ ಸ್ಮರಣಾರ್ಥ ಮಾಡುವುದು ಅತ್ಯಂತ ಸಂತೋಷಕರ ವಿಚಾರವಾಗಿದೆ.
ಶ್ರೀಗಳು ಜಾತ್ಯತೀತರಾಗಿ ಸರ್ವ ಧರ್ಮಗಳ ಜನರಿಗೂ ಶಾಂತಿ, ಸಹಬಾಳ್ವೆಯನ್ನು ತಮ್ಮ ಜೀವಾತಾವಧಿಯುದ್ದಕ್ಕೂ ಬೋಧಿಸುತ್ತಾ ಬಂದವರು. ಶ್ರೀ ಮಠದಲ್ಲಿ ಅದೆಷ್ಟೋ ಮಂದಿ ಹಿಂದುಯೇತರ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಶ್ರೀಗಳ ಜೀವನದ ನಡೆ ಅನುಸರಣೀಯ ಎಂದು ಅಭಿಪ್ರಾಯಪಟ್ಟರು.
ಶ್ರೀಗಳ ಜನ್ಮದಿನಾಚರಣೆಯನ್ನು ಬಿ.ಜಿ.ಪಾಳ್ಯ ವೃತ್ತದಲ್ಲಿ ಆಚರಿಸುವ ಸಂಬಂಧ ತಮಗೆ ಎಲ್ಲ ವರ್ಗದವರೂ ಸಹಕಾರ ನೀಡಿದ್ದು ಅವರೆಲ್ಲರಿಗೂ ಪರಮಪೂಜ್ಯರ ಆಶೀರ್ವಾದ ಲಭಿಸಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಎಂ.ಪಿ.ಮಹೇಶ್, ವಕೀಲರಾದ ಟಿ.ಎಸ್.ನಿರಂಜನ್, ಶ್ರೀಧರ್, ಅಸ್ಲಂಪಾಷಾ, ಜಿಯಾ, ಮುಂತಾದ ಮುಸಲ್ಮಾನ ಮುಖಂಡರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5